'ಸಂದಿಗ್ಧ ಪರಿಸ್ಥಿತಿಯಲ್ಲಿ ಡಿಕೆ ಶಿವಕುಮಾರ್ ರಾಜಕಾರಣ ಮಾಡುತ್ತಿದ್ದಾರೆ'
ಮಂಗಳೂರು, ಮೇ 6: ಕಾರ್ಮಿಕರನ್ನು ಅವರವರ ಊರುಗಳಿಗೆ ಕಳುಹಿಸಿಕೊಡುವಂತಹ ಸಮರ್ಪಕ ಕೆಲಸವನ್ನು ಸರ್ಕಾರ ಮಾಡುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳುವಂತೆ ಸರ್ಕಾರಕ್ಕೆ ಅಷ್ಟೊಂದು ಬಡತನವೇನೂ ಬಂದಿಲ್ಲ. ಸಂದಿಗ್ಧ ಪರಿಸ್ಥಿತಿಯಲ್ಲಿ ಡಿಕೆ ಶಿವಕುಮಾರ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿರುಗೇಟು ನೀಡಿದ್ದಾರೆ.
ಕಾರ್ಮಿಕರನ್ನು ಊರಿಗೆ ಕಳುಹಿಸಲು ಸರ್ಕಾರದ ಬಳಿ ಹಣವಿಲ್ಲ ಎಂಬ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಸರ್ಕಾರ ಸದೃಢವಾಗಿದೆ. ಗುರುವಾರದವರೆಗೆ ಸರ್ಕಾರವೆ ಎಲ್ಲಾ ಕಾರ್ಮಿಕರನ್ನು ಅವರವರ ಊರುಗಳಿಗೆ ಉಚಿತವಾಗಿ ಪ್ರಯಾಣಿಸಲು ಬಸ್ಸುಗಳನ್ನು ಪೂರೈಸಿ ವ್ಯವಸ್ಥೆ ಮಾಡಿದೆ. ಡಿ.ಕೆ.ಶಿವಕುಮಾರ್ಗೆ ಈಗ ಮಾಡಲು ಕೆಲಸವಿಲ್ಲ. ಕೋವಿಡ್-19 ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಡಿ.ಕೆ.ಶಿವಕುಮಾರ್ ರಾಜಕಾರಣ ಮಾಡುತ್ತಿದ್ದಾರೆ. ಎಂದಮೇಲೆ ಅವರ ಚಿಂತನೆಯೆಷ್ಟು ಎನ್ನುವುದನ್ನು ಜನರೇ ತಿಳಿಯಬೇಕು ಎಂದು ಸೂಚ್ಯವಾಗಿ ಉತ್ತರಿಸಿದರು.

ಇದುವರೆಗೂ ತಾವು ಮಂಗಳೂರು ಸೇರಿದಂತೆ 28 ಜಿಲ್ಲೆಗಳ ಕೃಷಿ ಪರಿಸ್ಥಿಗಳ ಬಗ್ಗೆ ಅಧ್ಯಯನ ಮಾಡಿದ್ದೇನೆ. ಸರಣಿ ಪರಿಶೀಲನಾ ಸಭೆಗಳನ್ನು ನಡೆಸಿದ್ದೇನೆ. 19 ಜಿಲ್ಲೆಗಳ ಕೃಷಿ ಸ್ಥಿತಿಗತಿ - ಪರಿಹಾರ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಅವರಿಗೆ ವರದಿ ಸಲ್ಲಿಸಿದ್ದೇನೆ. ಇನ್ನೂ ಉಳಿದ ಜಿಲ್ಲೆಗಳ ಪರಿಶೀಲನೆ ನಂತರ ಮತ್ತೊಮ್ಮೆ ಸಮಗ್ರ ವರದಿ ಸಲ್ಲಿಸುತ್ತೇನೆ ಎಂದು ವಿವರಿಸಿದರು.












Click it and Unblock the Notifications