'ಪ್ರಕಾಶ್ ರೈ ಕಾಂಗ್ರೆಸ್ ಸೇರದಿದ್ರೆ ನಾವೇನು ಮಾಡೋಕಾಗುತ್ತೆ?'
ಮಂಗಳೂರು, ಫೆಬ್ರವರಿ 24:ಮುಂದಿನ ಲೋಕಸಭಾ ಚುನಾವಣಾ ಪಟ್ಟಿಯನ್ನು ಮೂರ್ನಾಲ್ಕು ದಿನಗಳೊಳಗಾಗಿ ಅಂತಿಮಗೊಳಿಸಲಾಗುವುದು. ಅದಕ್ಕಾಗಿ ನಾಳೆ ಬೆಂಗಳೂರಿನಲ್ಲಿ ಸಚಿವರಾದ ಹೆಚ್.ಡಿ.ರೇವಣ್ಣ,ಪರಮೇಶ್ವರ್ , ವಿಶ್ವನಾಥ್ ಹಾಗೂ ನಾನು ಸೇರಿ ನಾಲ್ಕು ಜನ ಸಭೆ ನಡೆಸಿ ಪಟ್ಟಿ ಅಂತಿಮಗೊಳಿಸಲಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರು ಭೇಟಿ ಹಿನ್ನೆಲೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಇನ್ನು ಕುಮಾರಸ್ವಾಮಿ ಬಿಜೆಪಿ ಜೊತೆಗೆ ಮೈತ್ರಿ ಮಾಡಲು ಒಲವು ತೋರುತ್ತಿದ್ದಾರೆ ಅನ್ನೋ ಈಶ್ವರಪ್ಪ ಹೇಳಿಕೆ ಪ್ರತಿಕ್ರಿಯಿಸಿದ ಗುಂಡೂರಾವ್, ಈಶ್ವರಪ್ಪ ಹೇಳಿಕೆಗೆ ಬೆಲೆ ಕೊಡಲ್ಲ, ಕೇಂದ್ರದಲ್ಲಿ ಸರಕಾರ ಹೋಗುತ್ತೆ ಅನ್ನೋ ಭಯದಿಂದ ಹತಾಶರಾಗಿ ಈ ರೀತಿಯ ಹುಚ್ಚು ಹುಚ್ಚಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಬೆಂಬಲದ ನಿರೀಕ್ಷೆಯಲ್ಲಿದ್ದ ಪ್ರಕಾಶ್ ರೈ ಗೆ ಕೈ ಕೊಟ್ಟ ಕಾಂಗ್ರೆಸ್
ಇನ್ನು ಬಹುಭಾಷಾ ನಟ ಪ್ರಕಾಶ್ ರೈ ಚುನಾವಣಾ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಕಾಶ್ ರೈ ಅವರಲ್ಲಿ ನಮ್ಮ ಪಕ್ಷವನ್ನು ಸೇರುವಂತೆ ಹೇಳಿದ್ದೇವೆ. ಅವರು ಪಕ್ಷ ಸೇರದೇ ಹೋದರೆ ನಾವು ಏನು ಮಾಡೋಕಾಗುತ್ತೆ ಎಂದರು.
ಅಲ್ಲದೇ ಸತೀಶ್ ಜಾರಕಿಹೊಳಿ ಅವರು ನೀಡಿರುವ ಮಾರ್ಚ್ 15 ರ ಬಳಿಕ ಮತ್ತೆ ಆಪರೇಷನ್ ಕಮಲ ಆರಂಭವಾಗುತ್ತೆ ಅನ್ನೋ ಹೇಳಿಕೆ ಪ್ರತಿಕ್ರಿಯಿಸಿದ ಗುಂಡೂರಾವ್, ನಮಗೇನೂ ಆಪರೇಷನ್ ಭಯವಿಲ್ಲ, ಆದರೆ ಬಿಜೆಪಿಯ ನೀತಿಗೆಟ್ಟ ರಾಜಕಾರಣಕ್ಕೆ ಸತೀಶ್ ಜಾರಕಿಹೊಳಿ ಈ ಹೇಳಿಕೆ ನೀಡಿದ್ದಾರೆ ಎಂದರು.
ಇನ್ನು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಹರಿಹಾಯ್ದ ಗುಂಡೂರಾವ್, ಹಾಗೆ ನೋಡಿದರೆ ದೇಶ ಆಳಬೇಕಾದವರು ಇಲ್ಲಿನ ಮೂಲವಾರಸ್ದಾರರ ರಕ್ತ. ಉಳಿದವರು ಎಲ್ಲರೂ ಬೇರೆ ಬೇರೆ ಕಡೆಯಿಂದ ಬಂದು ಇಲ್ಲಿ ನೆಲೆಸಿದವರು ಎಂದರು. ಅನಂತ್ ಕುಮಾರ್ ಹೆಗ್ಡೆ ಈ ರೀತಿ ಹೇಳಿಕೆ ನೀಡುವುದು ಬಿಟ್ಟು ತನ್ನ ಕ್ಷೇತ್ರದ ಅಭಿವೃದ್ಧಿಗೆ ಗಮನಹರಿಸಲಿ ಎಂದು ಸಂಸದ ಹೆಗ್ಡೆ ಅವರ 'ದೇಶ ಆಳಬೇಕಾದದ್ದು ಭಾರತೀಯ ರಕ್ತ ಆಗಬೇಕು, ಇಟಲಿ ರಕ್ತವಲ್ಲ' ಎನ್ನುವ ಹೇಳಿಕೆಗೆ ತಿರುಗೇಟು ನೀಡಿದರು.