ಪುಲ್ವಾಮಾ ಉಗ್ರರ ದಾಳಿ ಬಗ್ಗೆ ಮೊದಲು ಕರಂದ್ಲಾಜೆ ಮಾತನಾಡಲಿ: ಕೆಪಿಸಿಸಿ ಅಧ್ಯಕ್ಷ
ಮಂಗಳೂರು, ಫೆಬ್ರವರಿ 24: ಬೆಂಗಳೂರಿನಲ್ಲಿ ಏರ್ ಶೋದಲ್ಲಿ ಆದ ಬೆಂಕಿ ಅನಾಹುತವು ರಾಜ್ಯ ಸರಕಾರದ ವೈಫಲ್ಯ ಎಂದು ಟೀಕಿಸಿರುವ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಕೆಪಿಸಿಸಿ ಅಧ್ಯಕ್ಷರ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪುಲ್ವಾಮಾ ದಾಳಿಯ ವೈಫಲ್ಯದ ಬಗ್ಗೆ ಶೋಭಾ ಮಾತಾಡಲಿ ಎಂದು ಕಿಡಿ ಕಾರಿದ್ದಾರೆ.
ಪುಲ್ವಾಮಾ ಉಗ್ರರ ದಾಳಿಯ ಕುರಿತು ಗುಪ್ತಚರ ವರದಿ ಬಗ್ಗೆ ಮೋದಿ ಸುಮ್ಮನಿದ್ದರೇಕೆ ಅನ್ನುವುದನ್ನು ಮೊದಲು ಹೇಳಲಿ. ಶೋಭಾ ಏನು ಮಾತಾಡುತ್ತಾರೆಂದು ಅವರಿಗೇ ಗೊತ್ತಿಲ್ಲ. ಏರ್ ಶೋ ನಡೆಯುವ ಯಲಹಂಕ ವಾಯುನೆಲೆ ಕೇಂದ್ರ ಸರಕಾರದ ಸುಪರ್ದಿಯಲ್ಲಿದೆ ಎಂದು ಹೇಳಿದ್ದಾರೆ.
ಪುಲ್ವಾಮಾ ದಾಳಿಗೂ ಏರ್ ಶೋ ದುರಂತಕ್ಕೂ ತಳುಕು ಹಾಕುವುದು ಬುದ್ಧಿಭ್ರಮಣೆಯಿಂದ ಮಾತ್ರ ಎಂದು ಶೋಭಾ ಕರಂದ್ಲಾಜೆ ವಿರುದ್ದ ವಾಗ್ದಾಳಿ ನಡೆಸಿದ ಅವರು, ಏನಾದರೂ ವೈಫಲ್ಯ ಆಗಿದ್ದರೆ ಅದು ರಕ್ಷಣಾ ಇಲಾಖೆ ವೈಫಲ್ಯ ಅನ್ನಬೇಕಷ್ಟೆ ಎಂದಿದ್ದಾರೆ.

ಅಲ್ಲದೇ ಇಡೀ ಕಾರ್ಯಕ್ರಮಕ್ಕೆ ಸಹಕಾರ ಕೊಡುವುದಷ್ಟೆ ರಾಜ್ಯ ಸರಕಾರದ ಕೆಲಸ. ಶೋಭಾ ಕರಂದ್ಲಾಜೆ ಅವರು ಉಡುಪಿ ಹಾಗೂ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾಗಿ ಕ್ಷೇತ್ರಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದನ್ನು ಮೊದಲು ಹೇಳಲಿ. ಆ ಕ್ಷೇತ್ರದಲ್ಲಿ ಏನೂ ಕೆಲಸ ಮಾಡದೆ ಈ ರೀತಿ ಹೇಳಿಕೆಯಿಂದ ಪ್ರಚಾರ ಗಿಟ್ಟಿಸಿಕೊಳ್ತಾರೆ ಅಷ್ಟೆ ಎಂದು ಅವರು ಲೇವಡಿ ಮಾಡಿದ್ದಾರೆ.












Click it and Unblock the Notifications