ಹೊಸ ವರ್ಷ ಹಿನ್ನಲೆ; ಲಕ್ಷಾಂತರ ಹೂವುಗಳಿಂದ ಸಿಂಗಾರಗೊಂಡ ಧರ್ಮಸ್ಥಳ ದೇಗುಲ
ಮಂಗಳೂರು, ಜನವರಿ 1: ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಅದ್ಭುತವಾಗಿ ಸಿಂಗಾರಗೊಂಡಿದೆ. ಕುಡುಮ ಕ್ಷೇತ್ರವನ್ನು ಲಕ್ಷಲಕ್ಷ ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ. ವಿವಿಧ ಜಾತಿಯ ಹೂವುಗಳು, ಹಣ್ಣುಗಳು ಮತ್ತು ಪ್ರಾಕೃತಿಕವಾಗಿ ಸಿಗುವ ಎಲೆಗಳನ್ನು ಬಳಸಿ ಶ್ರೀಕ್ಷೇತ್ರ ಧರ್ಮಸ್ಥಳವನ್ನು ಅಲಂಕರಿಸಲಾಗಿದ್ದು, ಲಕ್ಷಾಂತರ ಭಕ್ತರ ಮನಸೂರೆಗೊಳಿಸಿದೆ.
ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಬೆಂಗಳೂರಿನ ಭಕ್ತರು ಈ ಸೇವೆ ಮಾಡಿದ್ದು, ಧರ್ಮಸ್ಥಳ ದೇಗುಲವನ್ನು ಹೂವುಗಳ ಲೋಕದಲ್ಲಿ ಮಿಂದೇಳಿಸಲಾಗಿದೆ. ಬೆಂಗಳೂರಿನ ಚಂದ್ರ ಲೇಔಟ್ನಲ್ಲಿರುವ ಸಾಯಿ ಪ್ಲವರ್ ಡೆಕೊರೇಟರ್ಸ್ನ ಗೋಪಾಲ ರಾವ್, ಶ್ರವಣ ಮೂರ್ತಿ ಮತ್ತು ಅನಂದ್ ನೇತೃತ್ವದಲ್ಲಿ ಧರ್ಮಸ್ಥಳ ಕ್ಷೇತ್ರವನ್ನು ಅಲಂಕರಿಸಲಾಗಿದೆ. ಧರ್ಮಸ್ಥಳ ದೇವಸ್ಥಾನ, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ನಿವಾಸ, ನೆಲ್ಯಾಡಿ ಬೀಡು ಸೇರಿದಂತೆ ಧರ್ಮಸ್ಥಳದ ಪ್ರಮುಖ ಕಟ್ಟಡಗಳನ್ನು ಹೂವಿನಿಂದ ಅಲಂಕರಿಸಲಾಗಿದೆ.

ಹೂವು ಮತ್ತು ಹಣ್ಣಗಳಿಂದ ಅಲಂಕಾರ
ದೇವಸ್ಥಾನದ ಹೊರ ಭಾಗದಲ್ಲಿ ಅದ್ಭುತ ಪರಿಕಲ್ಪನೆಯಲ್ಲಿ ಹೂವು ಮತ್ತು ಹಣ್ಣಗಳಿಂದ ಅಲಂಕಾರ ಮಾಡಲಾಗಿದೆ. ಎರಡು ಭಾಗದಲ್ಲಿ ಸೊಂಡಿಲೆತ್ತಿ ನಮಸ್ಕಾರ ಸ್ಥಿತಿಯಲ್ಲಿ ಗಜರಾಜ, ಲಕ್ಷ್ಮಿ ದೇವತೆಗಳು, ಗಣಪತಿ, ಶಿವ- ಪಾರ್ವತಿ ಮತ್ತು ನಡು ಭಾಗದಲ್ಲಿ ಶಿವಲಿಂಗವನ್ನು ಇರಿಸಲಾಗಿದೆ. ಈ ವಿಶೇಷ ಅಲಂಕಾರಕ್ಕಾಗಿ ಕೆಜಿಗಟ್ಟಲೆ ದಾಳಿಂಬೆ, ಬೇಲದ ಕಾಯಿ, ಜೋಳ, ಎಳನೀರು, ಬಾಳೆ ಹಣ್ಣು, ಅಡಿಕೆ, ತೆಂಗು, ಕಬ್ಬು ಬಳಸಲಾಗಿದೆ.
ಇನ್ನು ಗುಲಾಬಿ, ಸೇವಂತಿಗೆ, ಕ್ರಿಸ್ ಅಂತೋರಿಯಂ, ಸುಗಂಧರಾಜ, ಕಾರ್ನಿಶೀಯಾ ಮತ್ತು ಅರ್ಕಿಡ್ ಪುಷ್ಪಗಳನ್ನು ಬಳಸಲಾಗಿದೆ. ತೆಂಗಿನಗರಿ, ಎಳೆಗರಿ, ಸೈಟ್ರೋಸ್, ಡ್ರೇಸಿಯಾ ಎಲೆಗಳನ್ನು ಅಲಂಕಾರಕ್ಕಾಗಿ ಬಳಸಲಾಗಿದೆ. ಕಿಂಚಿತ್ತೂ ಪ್ಲಾಸ್ಟಿಕ್ ಬಳಸದೇ ಕೇವಲ ಪ್ರಕೃತಿದತ್ತವಾಗಿ ಸಿಗುವ ವಸ್ತುಗಳನ್ನೇ ಬಳಸಿ ಪರಿಸರ ಸಂರಕ್ಷಣೆಯ ಸಂದೇಶವನ್ನು ಈ ಅಲಂಕಾರದಲ್ಲಿ ತೋರಿಸಲಾಗಿದೆ.

ಸಂತೋಷದ ಮುಂದೆ ಹಣವೆಲ್ಲಾ ಗೌಣ
ಈ ವಿಶೇಷ ಸೇವೆಯ ಬಗ್ಗೆ ಮಾತನಾಡಿದ ಸೇವಾಕರ್ತ ಗೋಪಾಲರಾವ್, ಸುಮಾರು ಐದು ದಿನಗಳಿಂದ 45 ಮಂದಿ ಈ ಅಲಂಕಾರವನ್ನು ಮಾಡಿದ್ದಾರೆ. ಪ್ರತಿವರ್ಷ ಹೊಸವರ್ಷದ ಮೊದಲನೇಯ ದಿನ ಈ ಸೇವೆ ಮಾಡುತ್ತಿದ್ದೇವೆ. ಈ ಸೇವೆ ಮಾಡಿದ ಬಳಿಕ ವ್ಯವಹಾರದಲ್ಲಿ ಬಹಳ ಲಾಭವನ್ನು ಗಳಿಸಿದ್ದೇವೆ. ಎಲ್ಲಕ್ಕಿಂತ ಮಿಗಿಲಾಗಿ ಈ ಸೇವೆ ಮಾಡಿದ ಬಳಿಕ ಮನೆ ಮತ್ತು ಮನದಲ್ಲಿ ಶಾಂತಿ ನೆಮ್ಮದಿ ಸಂತೋಷ ಇದೆ. ಈ ಸೇವೆ ಮಾಡಿದ ಬಳಿಕ ಧರ್ಮಸ್ಥಳವನ್ನು ನೋಡುವಾಗ ಆಗುವ ಅತೀವ ಸಂತೋಷದ ಮುಂದೆ ಹಣವೆಲ್ಲಾ ಗೌಣವಾಗುತ್ತದೆ. ಪ್ರತಿವರ್ಷ ಹೊಸ ಹೊಸ ಕಲ್ಪನೆಯೊಂದಿಗೆ ಈ ಅಲಂಕಾರ ಮಾಡುತ್ತಿದ್ದೇವೆ. ಇದಕ್ಕಾಗಿ ಬೆಂಗಳೂರು ಭಕ್ತರ ತಂಡ ಎಲ್ಲಾ ಶ್ರಮವನ್ನು ಹಾಕಿ ಭಕ್ತಿಯಿಂದ ಈ ಸೇವೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಡಾ.ಡಿ. ವೀರೇಂದ್ರ ಹೆಗ್ಗಡೆ ಮಾತು
ಇನ್ನು ಈ ಸೇವೆಯ ಬಗ್ಗೆ ಮಾತನಾಡಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ, ಪ್ರತಿವರ್ಷ ಬೆಂಗಳೂರಿನ ಭಕ್ತರು ಈ ಸೇವೆ ಮಾಡುತ್ತಾರೆ. ನಾವು ಯಾರೂ ಅವರಿಗೆ ಹೀಗೆ ಮಾಡಿ ಅಂತಾ ನಿರ್ದೇಶನ ಕೊಡುವುದಿಲ್ಲ. ಅವರ ಮನಸ್ಸು ಪೂರ್ತಿ ಕ್ಷೇತ್ರಕ್ಕೆ ಬಂದು ಅವರ ಸೇವೆ ಮಾಡುತ್ತಾರೆ. ಬಹಳ ಅದ್ಭುತವಾಗಿ ಈ ಸೇವೆ ಮಾಡಿಕೊಂಡು ಬರುತ್ತಿದ್ದಾರೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ಸನ್ನಿಧಿಯನ್ನು ಕಂಡು ಭಕ್ತರೂ ಪುಳಕಿತ
ಇನ್ನು ಈ ವಿಶೇಷ ಅಲಂಕಾರದಲ್ಲಿ ಮಂಜುನಾಥ ಸನ್ನಿಧಿಯನ್ನು ಕಂಡು ಭಕ್ತರೂ ಪುಳಕಿತಗೊಂಡಿದ್ದಾರೆ. ಧರ್ಮಸ್ಥಳದ ಅದ್ಭುತ ಪುಷ್ಪ ಅಲಂಕಾರವನ್ನು ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರಿಸಿ ಖುಷಿಪಟ್ಟಿದ್ದಾರೆ. ಹೊಸ ವರ್ಷದ ಮೊದಲ ದಿನ ಧರ್ಮಸ್ಥಳದಲ್ಲೇ ಕಳೆಯಬೇಕೆಂದು ಭಕ್ತರು ಡಿ.31ರಂದೇ ಕ್ಷೇತ್ರಕ್ಕೆ ಆಗಮಿಸುತ್ತಾರೆ. ರಾತ್ರಿ ಇಡೀ ಕ್ಷೇತ್ರದ ಉತ್ಸವಾದಿ ಕಾರ್ಯದಲ್ಲಿ ಭಾಗವಹಿಸಿ ಮೊದಲ ವರ್ಷದ ಮೊದಲ ದಿನ ಮಂಜುನಾಥ ಸ್ವಾಮಿಯ ದರ್ಶನ ಮಾಡಿ ಮತ್ತೆ ತಮ್ಮ ಊರುಗಳಿಗೆ ಮರಳುವುದು ಭಕ್ತರ ವಾಡಿಕೆಯಾಗಿದೆ.












Click it and Unblock the Notifications