ಮಂಗಳೂರಿನಲ್ಲಿ ಮತ್ತೆ ಐವರಿಗೆ ಡೆಂಗ್ಯೂ ಜ್ವರ
ಮಂಗಳೂರು ಜೂನ್ 25: ಮಂಗಳೂರಿನ ಗುಜ್ಜರ ಕೆರೆ ಪ್ರದೇಶದ ಗೋರಕ್ಷ ದಂಡು ಮತ್ತು ಅರೆಕೆರೆಬೈಲು ಭಾಗದಲ್ಲಿ ಡೆಂಗ್ಯೂ ಜ್ವರ ಶಂಕೆ ವ್ಯಕ್ತಗೊಂಡ 43 ಜನರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ 5 ಮಂದಿಯಲ್ಲಿ ಡೆಂಗ್ಯೂ ಜ್ವರ ದೃಢಫಟ್ಟಿದೆ. ದಿನದಿಂದ ದಿನಕ್ಕೆ ಡೆಂಗ್ಯೂ ಮಂಗಳೂರಿಗರನ್ನು ಆತಂಕಕ್ಕೀಡು ಮಾಡಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ದಕ್ಷಿಣ ಕನ್ನಡ ಜಿಲ್ಲಾಪಂಚಾಯತ್ ನ ಸಿಇಒ, ಡಿಎಚ್ ಒ ಡಾ.ರಾಮಕೃಷ್ಣ ರಾವ್ ನೇತೃತ್ವದಲ್ಲಿ ಡೆಂಗ್ಯೂ ಜ್ವರಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ.
ಮಂಗಳೂರಿನಲ್ಲಿ ಹೆಚ್ಚುತ್ತಿದೆ ಡೆಂಗ್ಯೂ ಪ್ರಕರಣ, ಜನರಲ್ಲಿ ಆತಂಕ
ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಮತ್ತು ಜಿಲ್ಲಾ ಮತ್ತು ಮಂಗಳೂರು ಮನಪಾ ಆರೋಗ್ಯ ಅಧಿಕಾರಿಗಳು ಡೆಂಗ್ಯೂ ಜ್ವರ ಕಾಣಿಸಿಕೊಂಡ ಗೋರಕ್ಷ ದಂಡು ಮತ್ತು ಅರೆಕೆರೆಬೈಲು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜ್ವರ ಕಾಣಿಸಿಕೊಂಡಿರುವವರ ಮನೆಗಳ ಸಮೀಕ್ಷೆ ನಡೆಸಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಿದ್ದಾರೆ.
ವೈದ್ಯರ ತಂಡವು ಈ ಪ್ರದೇಶದಲ್ಲಿ 43 ಮಂದಿಯನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿತ್ತು. ಅದರಲ್ಲಿ 23 ಮಂದಿಗೆ ಡೆಂಗ್ಯೂ ಮಾದರಿಯ ಜ್ವರ ಕಾಣಿಸಿಕೊಂಡಿದೆ. 5 ಮಂದಿಗೆ ಡೆಂಗ್ಯೂ ಜ್ವರ ಇರುವುದು ದೃಢಪಟ್ಟಿದೆ. ನರ್ಸಿಂಗ್ ವಿದ್ಯಾರ್ಥಿಗಳು ಮತ್ತು ಮಂಗಳೂರು ತಾಲ್ಲೂಕು ಆರೋಗ್ಯ ಕಾರ್ಯಕರ್ತರನ್ನು ಬಳಸಿಕೊಂಡು ಈಗಿರುವ ಪ್ರದೇಶದಿಂದ ಒಂದು ಕಿ.ಮೀ. ದೂರದಲ್ಲಿ ತಪಾಸಣೆ ಮಾಡಲಾಗುತ್ತದೆ. ಆ ಭಾಗದಿಂದ ಬೇರೆಡೆಗೆ ಜ್ವರ ಹರಡದಂತೆ ನಿಗಾವಹಿಸಲಾಗುತ್ತದೆ.