ಮೈಸೂರು : ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭ
ಮೈಸೂರು, ಜೂನ್ 23 : ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಕಂದಾಯ ಇಲಾಖೆ ಅಧಿಕಾರಿಗಳು ನಂಜನಗೂಡು ಗ್ರಾಮಗಳಲ್ಲಿರುವ ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆ ನಡೆಸುತ್ತಿರುವ ರೈತರ ಜಮೀನುಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಜಮೀನು ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆ ನಡೆಸುತ್ತಿರುವ ರೈತರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹೀಗಾಗಿ ರೈತರು ತೆರವು ಕಾರ್ಯಾಚರಣೆಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. [ಅಂತೂ-ಇಂತೂ ಉಣಕಲ್ ಕೆರೆ ಸ್ವಚ್ಛತೆ ಆರಂಭ]

ನಂಜನಗೂಡು ತಾಲೂಕಿನ ಹಾಡ್ಯ ಗ್ರಾಮದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಗ್ರಾಮಕ್ಕೆ ಸೇರಿದ ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದ ಸುಮಾರು ಎರಡು ಎಕರೆಯನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. [ಬೆಂಗಳೂರಿನ ಕೆರೆಗಳು ನಕ್ಷೆಯಲ್ಲಿ ಮಾತ್ರ ಇವೆ]
ಹಾಡ್ಯ ಗ್ರಾಮದಲ್ಲಿರುವ ಕೆರೆಯು ಸುಮಾರು 4 ಎಕರೆ 5 ಗುಂಟೆ ಅಚ್ಚುಕಟ್ಟು ವ್ಯಾಪ್ತಿಯನ್ನು ಹೊಂದಿತ್ತು. ಹಿಂದೆ ಉತ್ತಮವಾಗಿ ಮಳೆಯಾಗುತ್ತಿದ್ದರಿಂದ ಕೆರೆಯು ತುಂಬಿ ತುಳುಕುತ್ತಿತ್ತು. ಇದರಿಂದ ರೈತರಿಗೆ ವ್ಯವಸಾಯಕ್ಕೆ, ಜಾನುವಾರುಗಳಿಗೆ ಕುಡಿಯಲು ಅನುಕೂಲವಾಗುತ್ತಿತ್ತು. ಕ್ರಮೇಣ ಮಳೆ ಕಡಿಮೆಯಾದ ಕಾರಣ ಕೆರೆ ತುಂಬದೆ ಸುತ್ತಲಿನ ಪ್ರದೇಶ ಖಾಲಿಯಾಗಿತ್ತು. [ಹುಣಸೂರು ಹೈರಿಗೆ ಕೆರೆಗೆ ಹೈಟೆಕ್ ತಂತ್ರಜ್ಞಾನ, ರೈತರಲ್ಲಿ ಸಂತಸ]

ಈ ಪ್ರದೇಶವನ್ನು ಕೆಲವರು ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆ ಆರಂಭಿಸಿದ್ದರು. ಇದೀಗ ಎಚ್ಚೆತ್ತು ಕೊಂಡ ಕಂದಾಯ ಇಲಾಖೆ ಹುಲ್ಲಹಳ್ಳಿ ನಾಡ ಕಚೇರಿಯ ಕಂದಾಯ ನಿರೀಕ್ಷಕ ನಂಜುಂಡಸ್ವಾಮಿ ನೇತೃತ್ವದಲ್ಲಿ ಪಿಎಸ್ಐ ಪೂಣಚ್ಚ ಹಾಗೂ ಸಿಬ್ಬಂದಿಗಳ ನೆರವಿನೊಂದಿಗೆ ಗ್ರಾಮಲೆಕ್ಕಿಗ ಪ್ರಕಾಶ್ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡರು.
ಈಗಾಗಲೇ ಒತ್ತುವರಿ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಕೈಗೊಂಡಿದ್ದ ಕೆಲ ರೈತರು ಒತ್ತುವರಿ ತೆರವಿಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಗಳು ಸರ್ಕಾರಿ ಭೂ ಪ್ರದೇಶ ಹಾಗೂ ಕೆರೆ ಒತ್ತುವರಿ ತೆರವಿಗೆ ಅಡ್ಡಿಪಡಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಇದರಿಂದ ಒತ್ತುವರಿ ಭೂ ಪ್ರದೇಶವನ್ನು ಬಿಟ್ಟುಕೊಡಲು ರೈತರು ಸಮ್ಮತಿ ಸೂಚಿಸಿದರು. ಅನಂತರ ಕೆರೆ ಭೂ ಪ್ರದೇಶವನ್ನು ಜೆಸಿಬಿ ಯಂತ್ರದ ಮೂಲಕ ಗುರುತಿಸಿ ಒತ್ತುವರಿ ಮಾಡಿಕೊಂಡಿದ್ದ ಪ್ರದೇಶವನ್ನು ತೆರವು ಮಾಡಲಾಯಿತು.
ಗ್ರಾಮೀಣ ಪ್ರದೇಶದಲ್ಲಿ ಬಹಳಷ್ಟು ಕೆರೆಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದ್ದು ಒತ್ತುವರಿ ತೆರವುಗೊಳಿಸಿ ಹೂಳನ್ನು ತೆಗೆದು ಕೆರೆಗಳನ್ನು ಅಭಿವೃದ್ಧಿ ಪಡಿಸಿದ್ದೇ ಆದರೆ ಬರವನ್ನು ತಡೆಯಲು ಸಾಧ್ಯವಾಗುತ್ತದೆ. ಸರ್ಕಾರ ಆ ಕೆಲಸವನ್ನು ಮಾಡುತ್ತದೆಯೇ ಎಂಬುದೇ ಪ್ರಶ್ನೆಯಾಗಿದೆ.












Click it and Unblock the Notifications