ದಕ್ಷಿಣ ಕನ್ನಡ ಜಿಲ್ಲೆಗೆ ಡೆಲ್ಟಾ ಆತಂಕ: ಕೇರಳದಿಂದ ಬಸ್ನಲ್ಲಿ ಬರುವವರ ತಪಾಸಣೆಯೇ ಇಲ್ಲ
ಮಂಗಳೂರು, ಜುಲೈ 2: ಕೇರಳದಲ್ಲಿ ಡೆಲ್ಟಾ ಪ್ಲಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ- ಕೇರಳ ಗಡಿಯಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ತಪಾಸಣೆ ಮಾಡಲಾಗುತ್ತಿದೆ. ಮಂಗಳೂರಿನ ತಲಪಾಡಿ ಗಡಿಯಲ್ಲಿ ಪೊಲೀಸರು ತಪಾಸಣೆ ತೀವ್ರಗೊಳಿಸಿದ್ದು, ಕೇರಳದಿಂದ ಆಗಮಿಸುವ ಎಲ್ಲಾ ವಾಹನಗಳ ತೀವ್ರ ತಪಾಸಣೆ ಮಾಡಲಾಗುತ್ತಿದೆ.
ಗಡಿಯಲ್ಲಿ ಪೊಲೀಸರ ವಾಹನ ತಪಾಸಣೆಯಿಂದ ವಾಹನಗಳು ಸಾಲು ನಿಂತಿದ್ದು, 72 ಗಂಟೆಗಳ ಒಳಗಿನ ನೆಗೆಟಿವ್ ರಿಪೋರ್ಟ್ ಇಲ್ಲದವರಿಗೆ ಗಡಿಯಲ್ಲೇ Random ಟೆಸ್ಟ್ ಮಾಡಲಾಗುತ್ತಿದೆ. ಆರೋಗ್ಯ ಇಲಾಖೆಯ ಎರಡು ತಂಡದಿಂದ ಗಡಿಯಲ್ಲಿ Random ಟೆಸ್ಟ್ ಮಾಡಲಾಗುತ್ತಿದೆ.
ನಿತ್ಯ ಉದ್ಯೋಗ, ವ್ಯವಹಾರಕ್ಕೆ ಬರುವವರಿಗೆ ಇಂದಿನಿಂದ 15 ದಿನಗಳಿಗೊಮ್ಮೆ ರಿಪೋರ್ಟ್ ಸಲ್ಲಿಕೆ ಕಡ್ಡಾಯವಾಗಿದ್ದು, ತಲಪಾಡಿ ಗಡಿಯಲ್ಲಿ ಬೈಕ್, ಕಾರುಗಳ ತೀವ್ರ ತಪಾಸಣೆಯನ್ನು ಪೊಲೀಸರು ಮಾಡುತ್ತಿದ್ದಾರೆ. ರಿಪೋರ್ಟ್ ಇಲ್ಲದೇ ಮಂಗಳೂರು ಪ್ರವೇಶಕ್ಕೆ ಪೊಲೀಸರು ತಡೆ ಮಾಡಿದ್ದು, ಟೆಸ್ಟ್ ಮಾಡಿಸಿದ ಬಳಿಕವೇ ಮಂಗಳೂರಿಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ.

ಆದರೆ, ಗಡಿಯಲ್ಲಿ ಬೇರೆ ವಾಹನ ತಪಾಸಣೆ ಕಟ್ಟುನಿಟ್ಟಾದರೂ ಬಸ್ಗಳನ್ನು ತಪಾಸಣೆ ಮಾಡಲಾಗುತ್ತಿಲ್ಲ. ಕರ್ನಾಟಕ- ಕೇರಳ ಗಡಿ ತಲಪಾಡಿಯಲ್ಲಿ ಬಸ್ ಸಂಚಾರ ಮುಕ್ತವಾಗಿದ್ದು, ಕೇರಳದಿಂದ ಯಾವುದೇ ಅತಂಕವಿಲ್ಲದೇ ಕರ್ನಾಟಕಕ್ಕೆ ಬಸ್ಗಳು ಪ್ರವೇಶಿಸುತ್ತಿದೆ.

ತಲಪಾಡಿ ಗಡಿಯಲ್ಲಿ ಕೇರಳದ ಖಾಸಗಿ ಮತ್ತು ಸರ್ಕಾರಿ ಬಸ್ಗಳಿಗೆ ಮುಕ್ತ ಪ್ರವೇಶವಾಗುತ್ತಿದೆ. ಗಡಿಯಲ್ಲಿ ಕೇರಳದ ಪ್ರಯಾಣಿಕರನ್ನು ಇಳಿಸಿ ಮತ್ತೆ ಕೇರಳಕ್ಕೆ ಬಸ್ಗಳು ವಾಪಸ್ ಹೋಗುತ್ತಿದ್ದು, ಕೇರಳ ಬಸ್ ಇಳಿದ ಪ್ರಯಾಣಿಕರನ್ನು ಹತ್ತಿಸಿಕೊಂಡು ಮಂಗಳೂರಿಗೆ ಕರ್ನಾಟಕ ಸಾರಿಗೆ ಮತ್ತು ಮಂಗಳೂರಿನ ಖಾಸಗಿ ಬಸ್ಗಳು ಕರೆದುಕೊಂಡು ಬರುತ್ತಿವೆ.

ಬಸ್ ಪ್ರಯಾಣಿಕರಿಗೂ 72 ಗಂಟೆಯ ನೆಗೆಟಿವ್ ವರದಿ ಕಡ್ಡಾಯ ಮಾಡಿದ್ದರೂ ತಪಾಸಣೆಯನ್ನು ಮಾಡಲಾಗುತ್ತಿಲ್ಲ. ನಿರ್ವಾಹಕರೂ ಬಸ್ ಪ್ರಯಾಣಿಕರ ನೆಗೆಟಿವ್ ರಿಪೋರ್ಟ್ ಕೇಳುತ್ತಿಲ್ಲ. ಪ್ರತಿನಿತ್ಯ ಮಂಗಳೂರಿಗೆ ಕೇರಳದಿಂದ ನೂರಾರು ಜನರ ಪ್ರಯಾಣ ಮಾಡುತ್ತಿದ್ದು, ಡೆಲ್ಟಾ ಆತಂಕ ದಕ್ಷಿಣ ಕನ್ನಡ ಜಿಲ್ಲೆಯನ್ನು ಆವರಿಸಿದೆ.












Click it and Unblock the Notifications