ಸಣ್ಣ ಪುಸ್ತಕ ನಿಭಾಯಿಸದ ಬಿಜೆಪಿ ದೇಶ ಮುನ್ನಡೆಸುತ್ತಾ:ಪ್ರತಿಭಾ ಕುಳಾಯಿ
ಮಂಗಳೂರು, ಏಪ್ರಿಲ್ 4: ಬಿಜೆಪಿ ಇತ್ತೀಚೆಗೆ ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರದ ವಿರುದ್ಧ ಬಿಡುಗಡೆ ಮಾಡಿದ್ದ ಚಾರ್ಜ್ ಶೀಟ್ ನಲ್ಲಿ ಎಡವಟ್ಟು ಮಾಡಿಕೊಂಡಿದೆ. ಬೆಂಗಳೂರಿನಲ್ಲಿ ಸೀರೆ ಎಳೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಕಾರ್ಪೊರೇಟರ್ ಒಬ್ಬರ ಫೋಟೋ ಬಳಸಿಕೊಂಡು ತಪ್ಪೆಸಗಿದೆ.
ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದ ಕಾಂಗ್ರೆಸ್ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ. ನನ್ನ ಪೊಟೋ ಬಳಕೆ ಮಾಡಿರುವುದರಿಂದ ಬಿಜೆಪಿ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ.
ಬಿಜೆಪಿ ಬಿಡುಗಡೆ ಮಾಡಿದ ರಾಜ್ಯ ಸರಕಾರದ ವಿರುದ್ಧದ ಚಾರ್ಜ್ ಶೀಟ್ ನಲ್ಲಿ, ಬಿಬಿಎಂಪಿ ಕಾರ್ಯಕ್ರಮದಲ್ಲಿ ಜೆಡಿಎಸ್ ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣ ಸ್ವಾಮಿ ಸೀರೆ ಎಳೆದಾಡಿದ ಪ್ರಕರಣದ ಬಗ್ಗೆ ವಿಷಯ ಪ್ರಕಟಿಸಲಾಗಿತ್ತು.

ಮಂಜುಳಾ ಅವರ ಹೇಳಿಕೆ ಪ್ರಕಟಿಸುವಾಗ ನನ್ನ ಹೆಸರು ಮತ್ತು ಭಾವಚಿತ್ರ ಬಳಸಿದ್ದಾರೆ ಎಂದು ಪ್ರತಿಭಾ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ನಾಯಕರು ನನ್ನ ಭಾವಚಿತ್ರ ಮತ್ತು ಹೆಸರು ಬಳಸಿ, ಮಾನಸಿಕ ಹಿಂಸೆ ಮತ್ತು ಮಾನಹಾನಿ ಮಾಡಿದ್ದಾರೆ ಎಂದು ಪ್ರತಿಭಾ ಕುಳಾಯಿ ಆರೋಪಿಸಿದ್ದಾರೆ.
ಬಿಜೆಪಿ ಸಿದ್ದಪಡಿಸಿದ ಚಾರ್ಜ್ ಶೀಟ್ ನಲ್ಲಿ ನನಗೆ ಸಂಬಂಧ ಪಡದ ವಿಷಯದಲ್ಲಿ ನನ್ನ ಭಾವಚಿತ್ರ ಬಳಸಿರುವುದರ ವಿರುದ್ಧ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿದ್ದೇನೆ ಎಂದು ತಿಳಿಸಿದರು.
ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಕ್ಕೆ ಸಣ್ಣ ಪುಸ್ತಕವನ್ನು ನಿಭಾಯಿಸಲು ಸಾದ್ಯವಾಗುವುದಿಲ್ಲ ಅಂತಾದರೆ ದೇಶವನ್ನು ಮುನ್ನಡೆಸುವುದಾದರೂ ಹೇಗೆ ಎಂದು ಅವರು ವ್ಯಂಗ್ಯವಾಡಿದರು.












Click it and Unblock the Notifications