ತುಂಬೆ ಅಣೆಕಟ್ಟಿನಲ್ಲಿ ಉಳಿದಿರುವುದು ಕೇವಲ 4.90 ಮೀಟರ್ ನೀರು!
ಮಂಗಳೂರು, ಏಪ್ರಿಲ್ 28:ಮಂಗಳೂರು ನಗರಕ್ಕೆ ನೀರುಣಿಸುವ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ಸದ್ಯ 4.90 ಮೀಟರ್ ನೀರಿನ ಸಂಗ್ರಹವಿದ್ದು, ಇದನ್ನು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೇವಲ 28 ದಿನಗಳವರೆಗೆ ನೀರು ಪೂರೈಕೆ ಮಾಡಲು ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದರು.
ತುಂಬೆ ಅಣೆಕಟ್ಟೆಗೆ ಭೇಟಿ ನೀಡಿದ ಅವರು ನೀರಿನ ಲಭ್ಯತೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ತುಂಬೆ ಅಣೆಕಟ್ಟಿನಲ್ಲಿ ಇದೀಗ 4.90 ಮೀಟರ್ ನೀರಿನ ಸಂಗ್ರಹವಿದೆ. ಮಂಗಳೂರು ನಗರಕ್ಕೆ ನೀರಿನ ರೇಷನಿಂಗ್ ಮಾಡದೆ ನೀರು ಪೂರೈಕೆ ಮಾಡಿದರೆ ಮುಂದಿನ ಮೇ 28ರವರೆಗೆ ಮಾತ್ರ ನೀರಿನ ಪೂರೈಕೆ ಸಾಧ್ಯವಾಗಲಿದೆ. ಒಂದು ವೇಳೆ ರೇಷನಿಂಗ್ ವ್ಯವಸ್ಥೆಯ ಮೂಲಕ ನೀರು ಪೂರೈಕೆ ಮಾಡಿದರೆ ಜೂನ್ 15ರವರೆಗೆ ನೀರು ಪೂರೈಸಬಹುದಾಗಿದೆ ಎಂದು ಹೇಳಿದರು.
ಈ ಕುರಿತು ಇಂಜಿನಿಯರ್ ಗಳು ಲೆಕ್ಕಚಾರ ಹಾಕಿದ್ದಾರೆ. ಒಂದು ವೇಳೆ ನೀರಿನ ಅಭಾವ ಕಂಡುಬಂದರೆ ನೀರಿನ ಲಭ್ಯತೆ ಅನುಸರಿಸಿ ನಿರಂತರ 5 ದಿನ ಪಂಪಿಂಗ್ ಮಾಡಿ ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವುದು ಹಾಗೂ 2 ದಿನ ಪಂಪಿಂಗ್ ಸ್ಥಗಿತಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ಬಗ್ಗೆ ಜಿಲ್ಲೆಯ ಶಾಸಕರು, ಜಿಲ್ಲಾಡಳಿತ ಹಾಗೂ ಇಂಜಿನಿಯರ್ ಗಳ ಜೊತೆ ಮತ್ತೊಮ್ಮೆ ಚರ್ಚೆ ಮಾಡಿ ನೀರಿನ ರೇಷನಿಂಗ್ ಬಗ್ಗೆ ಮಾಹಿತಿ ನೀಡಲಾಗುವುದು ಎಂದ ಖಾದರ್ ಹೇಳಿದರು.
ನಗರಪಾಲಿಕೆ ವ್ಯಾಪ್ತಿಯ ಕಟ್ಟಡ ನಿರ್ಮಾಣದ ಉದ್ದೇಶಕ್ಕೆ ಬಳಸುವ ನೀರಿನ ಸಂಪರ್ಕವನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ. ಸರ್ಕಾರ ಮತ್ತು ಜಿಲ್ಲಾಡಳಿತ ಜನರಿಗೆ ತೊಂದರೆ ಕೊಡುವ ದೃಷ್ಟಿಯಿಂದ ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳುವುದಿಲ್ಲ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು ಎಂದು ಖಾದರ್ ಕರೆ ನೀಡಿದರು.












Click it and Unblock the Notifications