ಆಗಸ್ಟ್ 15ರಿಂದ ದಕ್ಷಿಣ ಕನ್ನಡ ಬಾಲ ಕಾರ್ಮಿಕ ಮುಕ್ತ ಜಿಲ್ಲೆ
ಮಂಗಳೂರು, ಆಗಸ್ಟ್ 02 : ದಕ್ಷಿಣ ಕನ್ನಡ ಜಿಲ್ಲೆಯನ್ನು ಬಾಲ ಕಾರ್ಮಿಕ ಮುಕ್ತ ಜಿಲ್ಲೆ ಎಂದು ಘೋಷಣೆ ಮಾಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಆಗಸ್ಟ್ 15ರಂದು ಅಧಿಕೃತವಾಗಿ ಈ ಘೋಷಣೆಯನ್ನು ಮಾಡಲಾಗುತ್ತದೆ.
ಜಿಲ್ಲೆಯಲ್ಲಿ ಬಾಲಕಾರ್ಮಿಕ ಬಳಕೆಗೆ ಕಡಿವಾಣ ಹಾಕುವುದಕ್ಕೆ ಜಿಲ್ಲಾಧಿಕಾರಿಗಳು ಸಮಿತಿ ರಚನೆ ಮಾಡಿದ್ದಾರೆ. ಈಗಾಗಲೇ 4 ಸಭೆಗಳು ಮುಗಿದಿವೆ. ಜಿಲ್ಲೆಯಲ್ಲಿ ಯಾವುದೇ ಉದ್ಯೋಗದಾತರು 14 ವರ್ಷ ವಯಸ್ಸಿಗಿಂತ ಕಡಿಮೆ ಇರುವ ಮಕ್ಕಳನ್ನು ಕೆಲಸಕ್ಕೆ ಬಳಕೆ ಮಾಡಿಕೊಳ್ಳದಂತೆ ಕ್ರಮ ತೆಗೆದುಕೊಳ್ಳಲಾಗಿದೆ.[ತಂದೆಯ ಜೊತೆ ಕೂಲಿ ಮಾಡುತ್ತಿದ್ದ ಬಾಲಕ ಶಾಲೆ ಸೇರಿದ]

ಯಾವುದೇ ಬಾಲ ಕಾರ್ಮಿಕರು ತಮ್ಮ ಅಮೂಲ್ಯ ಬಾಲ್ಯವನ್ನು ಹಾಳು ಮಾಡಿಕೊಳ್ಳದಂತೆ ತಡೆಯುವುದಕ್ಕೆ ಜಿಲ್ಲಾಡಳಿತವು ವಿವಿಧ ಇಲಾಖೆಗಳ ಜತೆಗೂಡಿ ಇದನ್ನು ಜಾರಿಗೆ ತರುವಲ್ಲಿ ಕಾರ್ಯಪ್ರವೃತ್ತವಾಗಿವೆ. ಆಗಸ್ಟ್ 15ರಂದು ದಕ್ಷಿಣ ಕನ್ನಡ ಬಾಲ ಕಾರ್ಮಿಕ ಮುಕ್ತ ಜಿಲ್ಲೆ ಎಂದು ಘೋಷಣೆ ಮಾಡಲಾಗುತ್ತದೆ.[ಫಾತಿಮಾ ಎಂಬ ಮುಗ್ಧ ಬಾಲಕಿಯ ಹೃದಯ ಹಿಂಡುವ ಕಥೆ!]
ಈ ಘೋಷಣೆ ಹೊರಬಿದ್ದ ಬಳಿಕ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಬಾಲಕಾರ್ಮಿಕರ ಬಳಕೆ ನಿಷೇಧವಾಗಿದೆ. ಜಿಲ್ಲೆಯ ಬಾಲ ಕಾರ್ಮಿಕರು ಇಲ್ಲ ಎಂಬ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಲಾಗಿದೆ. ಪ್ರತಿ ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಮನೆ ಮನೆಗೆ ಭೇಟಿ ಮಾಹಿತಿ ಸಂಗ್ರಹಣೆ ಮಾಡಲಾಗಿದೆ.
ಈ ಸಮೀಕ್ಷೆಗೆ ಪಂಚಾಯತಿ ಹಂತದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಬಿಲ್ ಕಲೆಕ್ಟರ್ಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಮನೆ ಭೇಟಿ ವೇಳೆ ಕುಟುಂಬದ ಮಾಲೀಕರಿಂದ ಆ ಮನೆಯಲ್ಲಿ ಬಾಲ ಕಾರ್ಮಿಕರು ಇದ್ದಾರೆಯೇ ಅಥವಾ ಇಲ್ಲವೇ? ಎಂಬ ಮಾಹಿತಿ ಸಂಗ್ರಹಿಸಲಾಗಿದೆ.
ಉದ್ಯೋಗ ದಾತರಿಂದ ಹಾಗೂ ಮನೆ ಮುಖ್ಯಸ್ಥರಿಂದ ಘೋಷಣಾ ಪ್ರಮಾಣ ಪತ್ರ ಬರೆಸಿಕೊಂಡ ನಂತರವೂ ಕೆಲಸಕ್ಕೆ ಬಾಲ ಕಾರ್ಮಿಕರನ್ನು ಬಳಕೆ ಮಾಡಿಕೊಂಡಿರುವುದನ್ನು ಪತ್ತೆ ಮಾಡುವುದಕ್ಕೆ ಸಾರ್ವಜನಿಕರ ಸಹಕಾರ ಪಡೆಯಲಾಗುತ್ತಿದೆ.
ಬಾಲ ಕಾರ್ಮಿಕರನ್ನು ಯಾವುದೇ ಕೆಲಸಕ್ಕೆ ಬಳಸಿಕೊಳ್ಳುವಂತಿಲ್ಲ ಎಂದು ಜಾಗೃತಿ ಅಭಿಯಾನವನ್ನು ಆರಂಭಿಸಲಾಗಿದೆ. ಹೊರಗಿನಿಂದ ವಲಸೆ ಬಂದವರ ಮೇಲೆ ನಿಗಾ ಇಡಲಾಗಿದೆ. ವಿವಿಧ ಇಲಾಖೆಗಳ ಪರಿಶ್ರಮದಿಂದ ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಘೋಷಣೆ ಮಾಡುಲಾಗುತ್ತಿದೆ.












Click it and Unblock the Notifications