ಅಗಲಿದ ಧನಂಜಯ ಕುಮಾರ್ ಗೆ ಗಣ್ಯರಿಂದ ಅಂತಿಮ ನಮನ
ಮಂಗಳೂರು, ಮಾರ್ಚ್ 05: ಮಂಗಳೂರಿನಲ್ಲಿ ನಿನ್ನೆ ಸೋಮವಾರ (ಮಾರ್ಚ್.04)ನಿಧನರಾದ ಮಾಜಿ ಕೇಂದ್ರ ಸಚಿವ ಧನಂಜಯ ಕುಮಾರ್ ಅಂತ್ಯಕ್ರಿಯೆ ಇಂದು ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆಯಲಿದೆ. ಮಂಗಳೂರಿನ ಕದ್ರಿಯಲ್ಲಿರುವ ಮನೆಯಲ್ಲಿ ಬೆಳಗ್ಗೆ 10 ಗಂಟೆವರೆಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಸಂಸದ ನಳಿನ್ ಕುಮಾರ್ ಕಟೀಲ್, ಉಸ್ತುವಾರಿ ಸಚಿವ ಯು.ಟಿ.ಖಾದರ್ , ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಶಾಸಕ ವೇದವ್ಯಾಸ ಕಾಮತ್ ಮತ್ತಿತರರು ಆಗಮಿಸಿ, ಧನಂಜಯ ಕುಮಾರ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಕೇಂದ್ರ ಮಾಜಿ ಸಚಿವ ಧನಂಜಯ ಕುಮಾರ್ ಇನ್ನಿಲ್ಲ
ಆದರೆ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಯುಟಿ ಖಾದರ್ ಹೊರತುಪಡಿಸಿ ಬಿಜೆಪಿಯ ರಾಜ್ಯ ನಾಯಕರಾಗಲೀ, ಜಿಲ್ಲೆಯ ಇತರೆಡೆಯ ಶಾಸಕರಾಗಲೀ, ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡರಾಗಲಿ ಅಂತಿಮ ದರ್ಶನಕ್ಕೆ ಆಗಮಿಸಿರಲಿಲ್ಲ.
ಯಡಿಯೂರಪ್ಪ ಕಟ್ಟಾ ಬೆಂಬಲಿಗ ಧನಂಜಯ ಕುಮಾರ್ ಇನ್ನು ನೆನಪು ಮಾತ್ರ
ಬಿಜೆಪಿಯಲ್ಲಿ ಒಂದು ಕಾಲದಲ್ಲಿ ಪ್ರಭಾವಿ ನಾಯಕನಾಗಿದ್ದ ಧನಂಜಯ ನಿಧನರಾದ ಸಂದರ್ಭದಲ್ಲಿ ಅವರ ಅಂತಿಮ ದರ್ಶನಕ್ಕೆ ಬಿಜೆಪಿಯ ಯಾರೊಬ್ಬ ರಾಜ್ಯ ನಾಯಕರೂ ಬಂದಿಲ್ಲ. ತನ್ನ ಕೊನೆಯ ಕಾಲದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದ ಧನಂಜಯ ಕುಮಾರ್, ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರ ಬಗ್ಗೆ ವಾಗ್ದಾಳಿ ನಡೆಸಿದ್ದರು.