ದಕ್ಷಿಣ ಕನ್ನಡ: ಹೊಸ ಗ್ರಾ.ಪಂ ಕಟ್ಟಡದಲ್ಲಿ ಕುಟುಂಬ ಸಮೇತ ವಾಸವಾದ ಪಂಚಾಯತ್ ಸದಸ್ಯೆ!
ಮಂಗಳೂರು, ಮಾರ್ಚ್ 5: ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಗ್ರಾಮ ಪಂಚಾಯತ್ ಕಟ್ಟಡದಲ್ಲಿ ಪಂಚಾಯತ್ ಸದಸ್ಯೆಯೋರ್ವರು ಒಲೆ ಉರಿಸಿ ಗೃಹಪ್ರವೇಶ ಮಾಡಿದ ಅಪರೂಪದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಗ್ರಾಮ ಪಂಚಾಯತ್ ಆಡಳಿತವು ಅಧಿಕಾರಿಗಳೊಂದಿಗೆ ಸೇರಿ ತನ್ನ ಹೆಸರಿನಲ್ಲಿರುವ ಭೂಮಿಯಲ್ಲಿ ಅಕ್ರಮವಾಗಿ ಪಂಚಾಯತ್ ಕಟ್ಟಡ ನಿರ್ಮಿಸಿದ್ದಾರೆ ಎಂದು ಆರೋಪಿಸಿರುವ ಈ ಮಹಿಳೆ, ಯಾವುದೇ ಕಾರಣಕ್ಕೂ ತನ್ನ ಭೂಮಿಯನ್ನು ಪಂಚಾಯತ್ಗೆ ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ದೇವಸ್ಥಾನದ ಉಳಿವಿಗಾಗಿ ದಿಟ್ಟ ನಿರ್ಧಾರ ಕೈಗೊಂಡ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಜಾರು ಎಂಬಲ್ಲಿ ತೆಕ್ಕಾರು ಗ್ರಾಮ ಪಂಚಾಯತ್ಗಾಗಿ ನೂತನ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ಎರಡು ಅಂತಸ್ತಿನ ಕಟ್ಟಡ ನಿರ್ಮಾಣಗೊಂಡು, ಇನ್ನು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳುವ ಹಂತಕ್ಕೂ ತಲುಪಿದೆ.
1980ರಲ್ಲಿ ಯಮುನಾ ಪತಿ ನೇಮು ನಾಯ್ಕರಿಗೆ ಜಾಗ ಮಂಜೂರು
ಆದರೆ ಏಕಾಏಕಿ ಪಂಚಾಯತ್ನ ಸದಸ್ಯೆ ಯಮುನಾ ನಾಯ್ಕ ಎಂಬುವರು ಈ ಕಟ್ಟಡದಲ್ಲಿ ಒಲೆ ಉರಿಸಿ, ಗೃಹಪ್ರವೇಶ ಮಾಡಿ ತನ್ನ ಕುಟುಂಬ ಸದಸ್ಯರೊಂದಿಗೆ ವಾಸಿಸಲು ಆರಂಭಿಸಿದ್ದಾರೆ. ಯಮುನಾ ನಾಯ್ಕರ ಪ್ರಕಾರ ತೆಕ್ಕಾರು ಗ್ರಾಮ ಪಂಚಾಯತ್ ನೂತನವಾಗಿ ನಿರ್ಮಿಸುತ್ತಿರುವ ಕಟ್ಟಡದ ಭೂಮಿ ತನ್ನ ಹೆಸರಲ್ಲಿದ್ದು, 1980ರಲ್ಲಿ ಯಮುನಾ ಪತಿ ನೇಮು ನಾಯ್ಕರಿಗೆ ಸರಕಾರವು ಪರಿಶಿಷ್ಟ ಪಂಗಡ ಕೋಟಾದಡಿ ಈ ಜಾಗವನ್ನು ಮಂಜೂರು ಮಾಡಿದೆ.
ಯಮುನಾ ನಾಯ್ಕರಿಗೆ ಸರ್ವೆ ನಂಬರ್ 103/1 (A)ಯಲ್ಲಿ 69 ಸೆಂಟ್ಸ್ ಜಾಗ ಮತ್ತು 64 P 1/23 ಯಲ್ಲಿ 95 ಸೆಂಟ್ಸ್ ಜಾಗವಿದೆ. 103/1 A ಜಾಗದಲ್ಲಿ ಅಂಗನವಾಡಿ ಕಟ್ಟಡ ಕಟ್ಟಲು ಯಮುನಾ ನಾಯ್ಕ ಜಾಗ ಬಿಟ್ಟು ಕೊಟ್ಟಿದ್ದು, ಇದೀಗ ಅಂಗನವಾಡಿ ಕೇಂದ್ರದ ಪಕ್ಕದಲ್ಲೇ ತೆಕ್ಕಾರು ಗ್ರಾಮ ಪಂಚಾಯತ್ ತನ್ನ ನೂತನ ಕಚೇರಿಗಾಗಿ ಕಟ್ಟಡದ ಕಾಮಗಾರಿ ನಡೆಸುತ್ತಿದೆ.
ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆ ಹೆಸರು ಇನ್ಮುಂದೆ ರಾಣಿ ಅಬ್ಬಕ್ಕ ಆಸ್ಪತ್ರೆ; ಸುನೀಲ್ ಕುಮಾರ್
ಸಾಮಾನ್ಯ ಸಭೆಯಲ್ಲೇ ಯಮುನಾ ನಾಯ್ಕ ಆಕ್ಷೇಪ
ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದ ಸಂದರ್ಭದಲ್ಲೇ ಯಮುನಾ ನಾಯ್ಕ ಪಂಚಾಯತ್ ನಿರ್ಧಾರಕ್ಕೆ ಸಾಮಾನ್ಯ ಸಭೆಯಲ್ಲೇ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ಆದರೆ ಪಂಚಾಯತ್ ಆಡಳಿತ ಮಂಡಳಿ ಯಮುನಾ ಅವರ ಆಕ್ಷೇಪವನ್ನು ಮಾನ್ಯ ಮಾಡದೆ, 2019ರಲ್ಲಿ ಕಟ್ಟಡ ಕಟ್ಟುವ ಕಾಮಗಾರಿ ಆರಂಭಿಸಿತ್ತು.
ಈ ನಡುವೆ ಯಮುನಾ ಅವರು ಪುತ್ತೂರು ಸಹಾಯಕ ಆಯುಕ್ತರಿಗೆ ಈ ನಿರ್ಧಾರದ ವಿರುದ್ಧ ದೂರನ್ನೂ ಸಲ್ಲಿಸಿದ್ದರು. ಆದರೆ ಇದೀಗ ಕಟ್ಟಡದ ಎರಡಂತಸ್ತಿನ ಕಾಮಗಾರಿ ಮುಕ್ತಾಯಗೊಳ್ಳುವಂತೆಯೇ ಯಮುನಾ ಮತ್ತು ಅವರ ಕುಟುಂಬಸ್ಥರು ಕಟ್ಟಡದಲ್ಲಿ ವಾಸಿಸಲು ಆರಂಭಿಸಿದ್ದಾರೆ. ಯಾವುದೇ ಕಾರಣಕ್ಕೂ ತಮ್ಮ ಜಮೀನನ್ನು ಬಿಟ್ಟು ಕೊಡುವುದಿಲ್ಲ ಎಂದು ಯಮುನಾ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.
ಬಾಡಿಗೆ ಕಟ್ಟಡದಲ್ಲಿ ಕಾರ್ಯಚರಿಸುತ್ತಿರುವ ಪಂಚಾಯತ್
ವರ್ಷದ ಹಿಂದೆ ಬಾರ್ಯ ಗ್ರಾಮ ಪಂಚಾಯತ್ನಲ್ಲೇ ಇದ್ದ ತೆಕ್ಕಾರು ಇದೀಗ ಗ್ರಾಮ ಪಂಚಾಯತ್ ಆಗಿ ಮಾರ್ಪಟ್ಟಿದೆ. ಬಾಡಿಗೆ ಕಟ್ಟಡದಲ್ಲಿ ಕಾರ್ಯಚರಿಸುತ್ತಿರುವ ಈ ಪಂಚಾಯತ್ಗೆ ಸರಕಾರ ಸರ್ವೆ ನಂಬರ್ 64/ 1.P.1 ರಲ್ಲಿ 20 ಸೆಂಟ್ಸ ಜಾಗವನ್ನು ನೂತನ ಕಟ್ಟಡಕ್ಕೆಂದು ಮುಂಜೂರು ಮಾಡಿದೆ. ಈ ಜಾಗವು ಸದರಿ ಪಂಚಾಯತ್ ಕಟ್ಟುತ್ತಿರುವ ನೂತನ ಕಟ್ಟಡಕ್ಕಿಂದ 1 ಕಿಲೋಮೀಟರ್ ದೂರದಲ್ಲಿದ್ದು, ಯಮುನಾ ನಾಯ್ಕರ 103/1 ರಲ್ಲಿ ಕಟ್ಟುತ್ತಿರುವುದರ ಉದ್ದೇಶ ಗೊಂದಲಕ್ಕೆ ಕಾರಣವಾಗಿದೆ.
ಪೊಲೀಸರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು
ಈ ಸಂಬಂಧ ಪಂಚಾಯತ್ ಅಧ್ಯಕ್ಷರನ್ನು ಸಂಪರ್ಕಿಸಿದಾಗ, "ಕಟ್ಟಡ ಕಟ್ಟುತ್ತಿರುವ ಜಾಗವನ್ನು ಸರಕಾರ ಪಂಚಾಯತ್ಗೆ ಮಂಜೂರು ಮಾಡಿದೆ. ಆದರೆ ಕಳೆದ ನಾಲ್ಕು ವರ್ಷದಿಂದ ಜಾಗದ ಬಗ್ಗೆ ಯಾವುದೇ ತಕರಾರು ಎತ್ತದ ಪಂಚಾಯತ್ ಸದಸ್ಯೆ ಯಮುನಾ ನಾಯ್ಕ ಇದೀಗ ಏಕಾಏಕಿ ಕಟ್ಟಡದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ. ಈ ಸಂಬಂಧ ಪೊಲೀಸರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಜಾಗ ಯಾರದ್ದೇ ಆಗಿರಲಿ, ಸರಕಾರ ಓರ್ವ ವ್ಯಕ್ತಿಗೆ ಜಮೀನು ಮಂಜೂರು ಮಾಡಿರುವ ಸಂದರ್ಭದಲ್ಲಿ ಪಹಣಿ ಪತ್ರದ ಹಿಂದೆ ಸರಕಾರ ಯಾವಾಗ ಕೇಳಿದರೂ, ಭೂಮಿ ನೀಡಬೇಕು ಎನ್ನುವುದನ್ನೂ ನಮೂದಿಸಿದೆ ಎನ್ನುವ ಮೂಲಕ ಜಮೀನನ್ನು ತಮಗೆ ಬಿಟ್ಟು ಕೊಡುವುದು ಅನಿವಾರ್ಯ,'' ಅಂತಾ ಹೇಳುತ್ತಾರೆ.
ಸರಕಾರದ ವಿವಿಧ ಯೋಜನೆಯನ್ನು ಬಳಸಿಕೊಂಡು ತೆಕ್ಕಾರು ಗ್ರಾಮ ಪಂಚಾಯತ್ ಈ ಕಟ್ಟಡವನ್ನು ಕಟ್ಟಿದ್ದು, ತಮ್ಮ ಬಳಕೆಗೆ ಬರುವ ಮೊದಲೇ ಈ ಕಟ್ಟಡ ಪಂಚಾಯತ್ನ ಕೈ ತಪ್ಪುವ ಲಕ್ಷಣ ಕಂಡು ಬರುತ್ತಿದೆ. ಊರಿಗೆಲ್ಲಾ ಬುದ್ಧಿ ಹೇಳುವ ಸ್ಥಳೀಯ ಅಧಿಕಾರಿಗಳು ಯಾರದೋ ಜಾಗದಲ್ಲಿ ಕಟ್ಟಡ ನಿರ್ಮಿಸಿ ಪೇಜಿಗೆ ಸಿಲುಕುವ ಲಕ್ಷಣದಲ್ಲಿದ್ದಾರೆ.
Recommended Video