ದಕ್ಷಿಣ ಕನ್ನಡದ ಖ್ಯಾತ ಜವಳಿ ಉದ್ಯಮಿ ಸಂಜೀವ ಶೆಟ್ಟಿ ನಿಧನ
ಮಂಗಳೂರು, ಅಕ್ಟೋಬರ್. 30: ದಕ್ಷಿಣಕನ್ನಡ ಜಿಲ್ಲೆಯ ಖ್ಯಾತ ಜವಳಿ ಉದ್ಯಮಿ ಸಂಜೀವ ಶೆಟ್ಟಿ (95) ಇಂದು ಮಂಗಳವಾರ ಬೆಳಗ್ಗೆ ನಿಧನರಾದರು.
ಇಂದು ಬೆಳ್ಳಂಬೆಳಗ್ಗೆ ಸಂಜೀವ ಶೆಟ್ಟಿ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಪುತ್ತೂರಿನ ಖಾಸಗಿ ಅಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆ ತಲುಪುತ್ತಲೇ ಅವರು ಅಸುನೀಗಿದರು ಎಂದು ಹೇಳಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 'ಸಂಜೀವ ಶೆಟ್ಟಿ ಬಟ್ಟೆ ಮಳಿಗೆ' ಮದುವೆ ಬಟ್ಟೆಗಳಿಗೆ ಹೆಸರುವಾಸಿ. ಅವಿಭಾಜಿತ ದಕ ಜಿಲ್ಲೆಯ ವಿವಿಧ ಮೂಲೆಗಳಿಂದ ಗ್ರಾಹಕರು ಹುಡುಕಿಕೊಂಡು ಬರುವಂತೆ ಈ ಮಳಿಗೆಯನ್ನು ರೂಪಿಸಿದ ಹೆಗ್ಗಳಿಕೆ ಸಂಜೀವ ಶೆಟ್ಟಿ ಅವರದ್ದು.

ಪಣಂಬೂರಿನ ದಿ.ಎಂ ಚಂದು ಶೆಟ್ಟಿ ಹಾಗೂ ದಿ. ಚೆನ್ನಯ ಶೆಟ್ಟಿಯವರ ಪುತ್ರನಾಗಿ 1924 ರಲ್ಲಿ ಸಂಜೀವ ಶೆಟ್ಟಿ ಜನಿಸಿದರು. ನಂತರ ತಮ್ಮ ವಿದ್ಯಾಭ್ಯಾಸವನ್ನು ಮಂಗಳೂರು ಹಾಗೂ ಪುತ್ತೂರಿನಲ್ಲಿ ಪೂರೈಸಿದರು.
ಹುಟ್ಟಿದ್ದು ಮಂಗಳೂರಿನಲ್ಲಿಯೇ ಆದರೂ ಕರ್ಮ ಭೂಮಿ ಪುತ್ತೂರು. ಮಂಗಳೂರಿನ ಖಾಸಗಿ ಕಂಪೆನಿಯಲ್ಲಿ ವೃತ್ತಿ ಜೀವನವನ್ನು ಆರಂಭಿಸಿದ ಸಂಜೀವ ಶೆಟ್ಟಿ ಸ್ವಉದ್ಯಮದ ಕನಸನ್ನು ಹೊತ್ತು 1944 ರಲ್ಲಿ ಅವರು ಬಟ್ಟೆ ವ್ಯಾಪಾರದತ್ತ ಮುಖ ಮಾಡಿದರು. ಸಣ್ಣ ಪ್ರಮಾಣದಲ್ಲಿ ಜವಳಿ ವ್ಯಾಪಾರ ಆರಂಭಿಸಿದ ಅವರು ಕಟ್ಟಿ ಬೆಳೆಸಿದ ರೀತಿ ಅದ್ಭುತವಾದದ್ದು.
ಬಿಜೆಪಿ ಪಕ್ಷದೊಂದಿಗೆ ಸಕ್ರಿಯವಾಗಿ ತೊಡಗಿಕೊಂಡಿದ್ದ ಸಂಜೀವ ಶೆಟ್ಟಿ ರಾಷ್ಟ್ರೀಯ ನಾಯಕರ ಒಡನಾಡಿಯಾಗಿದ್ದರು. ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿಯವರ ಜೊತೆ ಅತ್ಮೀಯತೆ ಹೊಂದಿದ್ದರು. ವಾಜಪೇಯಿ ಪುತ್ತೂರಿಗೆ ಆಗಮಿಸಿದ ಸಂದರ್ಭ ಶೆಟ್ಟಿಯವರ ಮನೆ ಹಾಗೂ ವ್ಯಾಪಾರ ಕೇಂದ್ರಕ್ಕೆ ಭೇಟಿ ನೀಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.












Click it and Unblock the Notifications