ವೈರಲ್ ವಿಡಿಯೋ: ಮಗು ಮತ್ತು ದೈವದ ಮೌನ ಸಂಭಾಷಣೆಗೆ ನೋಡುಗರು ಫಿದಾ
ಇದೊಂದು ನೋಡಲು ಸುಂದರ ಹಾಗೂ ಮನಸ್ಸಿಗೆ ಮುದ ನೀಡುವ ವಿಡಿಯೋ ಸದ್ಯ ಕರಾವಳಿಯ ಬಹುತೇಕರ ಸಾಮಾಜಿಕರ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದನ್ನು ದೈವದ ಪ್ರೀತಿ ಹಾಗೂ ಮಗುವಿನ ಮುಗ್ಧತೆಯನ್ನು ಕಾಣಬಹುದಾಗಿದೆ.
ಮಂಗಳೂರು, ಜನವರಿ 28: ದೈವಾರಾಧನೆ ಎನ್ನುವುದು ತುಳುವ ಜೀವನದ ನಂಬಿಕೆಯ ಅವಿಭಾಜ್ಯ ಅಂಗ. ಹೀಗಾಗಿಯೇ ತುಳುವಿನಲ್ಲಿ ದೈವಕ್ಕೆ 'ಪೆದ್ದಿ ಅಪ್ಪೆ ಆದ್ ತಾಂಕಿ ತಮ್ಮಲೆ ಆದ್ ರಕ್ಷಣೆ ಮಲ್ತೊಂದು ಬರ್ಪೆ' ಎಂಬ ಮಾತಿದೆ. ಅಂದರೆ 'ಹೆತ್ತ ತಾಯಿಯಂತೆಯೂ ಸಾಕಿ ಸಲಹಿದ ಮಾವನಂತೆಯೂ ರಕ್ಷಣೆ ಮಾಡುತ್ತಾ ಬರುತ್ತೇನೆ ಇದು ದೈವದ ಅಭಯ ನುಡಿಯಾಗಿದೆ.
ಈ ಮಾತಿನಂತೆಯೇ ದೈವ ನಂಬಿದವರೆಲ್ಲರನ್ನೂ ಪೊರೆಯುತ್ತಾ ಬಂದಿದೆ. ವಾತ್ಸಲ್ಯಮಯಿ ತಾಯಿಯಂತೆಯೂ, ತುಂಟ ಮಾವನಂತೆಯೂ ಮಗುವಿನೊಂದಿಗೆ ದೈವವೇ ಕ್ಷಣ ಕಾಲ ಬೆರೆತು ಕಲೆತ ಅಪರೂಪದ ದೃಶ್ಯವೊಂದು ವೈರಲ್ ಆಗಿದೆ. ಈ ವಿಡಿಯೋ ಇದೀಗ ಎಲ್ಲರ ವಾಟ್ಸ್ಆ್ಯಪ್ ಸ್ಟೇಟಸ್ಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ರಾರಾಜಿಸುತ್ತಿದೆ.
ಮಂಗಳೂರಿನ ಬಿಕರ್ನಕಟ್ಟೆಯ ಬಜ್ಜೋಡಿಯಲ್ಲಿ ಗುರುವಾರ ದೊಂಪದಬಲಿ ನಡೆದಿದೆ. ಈ ವೇಳೆ ಕಾಂತೇರಿ ಜುಮಾದಿ ದೈವವು ನೇಮ ಸುಮಾರು 11ಗಂಟೆ ಸುಮಾರಿಗೆ ನಡೆಯುತ್ತಿತ್ತು. ದೈವವು ಬೇಟೆಯ ಪರಿಕಲ್ಪನೆಯನ್ನು ನರ್ತನದ ಮೂಲಕ ಬಿಂಬಿಸುತ್ತಿದ್ದ ವೇಳೆ ಅಲ್ಲಿಯೇ ನೆಲದಲ್ಲಿ ಕುಳಿತು ಮಗುವೊಂದು ಸ್ವೀಟ್ ಕಾರ್ನ್ ತಿನ್ನುತ್ತಾ ನೇಮ ವೀಕ್ಷಿಸುತ್ತಿತ್ತು. ನೇರ ಅಲ್ಲಿಗೆ ಬಂದ ಕಾಂತೇರಿ ಜುಮಾದಿ ದೈವ ತನಗೂ ತಿನಿಸು ಕೊಡುವಂತೆ ಕೈ ಚಾಚಿದೆ.
ದೈವ ತನ್ನಲ್ಲಿಗೆ ಬಂದಾಗ ಕೊಂಚವೂ ಭೀತಿಗೊಳಗಾಗದ ಮಗು ಮುಗ್ಧತೆಯಿಂದ ಚಮಚದಲ್ಲಿ ಸ್ವೀಟ್ ಕಾರ್ನ್ ನೀಡಲು ಯತ್ನಿಸಿದೆ. ಆದರೆ ಅದು ಕೆಳಗಡೆ ಬಿದ್ದಿದೆ. ಈ ವೇಳೆ ದೈವ ನೇಮ ವೀಕ್ಷಣೆ ಮಾಡುವ ಭಕ್ತರತ್ತ ನೋಡಿ 'ತನಗೆ ಹಸಿವಾಗಿದೆ, ಮಗು ಏನೋ ಕೊಡುತ್ತಿದೆ' ಎಂದು ನಟಿಸಿ ತೋರಿಸಿ, ಮತ್ತೆ ಮಗುವಿನತ್ತ ಕೈಯೊಡ್ಡಿದೆ. ಆಗಲೂ ಸ್ವೀಟ್ ಕಾರ್ನ್ ನೀಡಲು ಹೋದ ಮಗುವಿನ ಮುಗ್ಧತೆಗೆ ತಲೆದೂಗಿದ ದೈವ ತನ್ನ ಹಣೆಯ ಬಣ್ಣವನ್ನೇ ಮಗುವಿನ ಹಣೆಗೆ ಆಶೀರ್ವಾದ ಪೂರ್ವಕವಾಗಿ ತಿಲಕವಿರಿಸಿದೆ.
ಈ ಸಂಪೂರ್ಣ ದೃಶ್ಯವು ಅಲ್ಲಿಯೇ ಇದ್ದವರೊಬ್ಬರ ಮೊಬೈಲ್ನಲ್ಲಿ ಸೆರೆಯಾಗಿದೆ. ದೈವ ಹಾಗೂ ಮಗುವಿನ ನಡುವೆ ನಡೆದ ಈ ಮುಗ್ಧ ಮೌನ ಸಂಭಾಷಣೆಗೆ ಫಿದಾ ಆಗಿರುವ ಕರಾವಳಿಗರ ಮೊಬೈಲ್ ಸ್ಟೇಟಸ್ನಲ್ಲಿ ಇದೀಗ ಈ ವೀಡಿಯೋ ರಾರಾಜಿಸುತ್ತಿದೆ. ಅಂದ ಹಾಗೆ ಆ ಮಗುವಿನ ಹೆಸರು ಶಮಿತ್. ಎರಡೂವರೆ ವರ್ಷದ ಈ ಬಾಲಕ ಶಕ್ತಿನಗರ, ಪ್ರಶಾಂತಿ ನಗರದ ದೀಪಕ್ ಹಾಗೂ ದೀಪ್ತಿ ದಂಪತಿಯ ಪುತ್ರನಾಗಿದ್ದಾನೆ.
ದೈವ ತನ್ನೆದುರಲ್ಲೇ ಕೂತರೂ ಸ್ವಲ್ಪವೂ ವಿಚಲಿತನಾಗದೇ ಮಗು ತನ್ನ ಕೈಯಲ್ಲಿದ್ದ ತಿಂಡಿಯನ್ನು ದೈವಕ್ಕೆ ನೀಡಿರುವುದು ಮಗುವಿನ ಮುಗ್ಧ ಮನಸ್ಸಿಗೆ ಹಿಡಿದ ಕೈಗನ್ನಡಿ ಅಂತಾ ಜನ ಕೊಂಡಾಡಿದ್ದಾರೆ. ಎಲ್ಲರಿಗೂ ಹಂಚಿ ತಿನ್ನಬೇಕು ಎನ್ನುವುದನ್ನು ಮಗು ತೋರಿಸಿದೆ ಎಂದು ಜನ ಪ್ರಶಂಸಿದ್ದಾರೆ.