ಚಂಡಮಾರುತ ಪ್ರಭಾವ; ಅಲೆಗಳ ಅಬ್ಬರಕ್ಕೆ ಸ್ಮಶಾನ, ಮನೆ ಸಮುದ್ರ ಪಾಲಾಗುವ ಭೀತಿ
ಮಂಗಳೂರು, ಮೇ 14: ತೌಕ್ತೆ ಚಂಡಮಾರುತ ಕರಾವಳಿ ಕರ್ನಾಟಕವನ್ನು ಪ್ರವೇಶಿಸಲು ಕ್ಷಣಗಣನೆ ಆರಂಭವಾಗಿದ್ದು, ಇದರ ಮುನ್ಸೂಚನೆಯಂತೆ ಅರಬ್ಬೀ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ.
ಮಂಗಳೂರು ಭಾಗದ ಹಲವು ಪ್ರದೇಶಗಳಲ್ಲಿ ಕಡಲ್ಕೊರೆತ ತೀವ್ರವಾಗುತ್ತಿದೆ. ಸಮುದ್ರದ ಅಲೆಗಳು ಅಬ್ಬರಿಸುತ್ತಿದ್ದು, ದಡಕ್ಕೆ ಅಪ್ಪಳಿಸುತ್ತಿದೆ. ಮಂಗಳೂರಿನ ಸೋಮೇಶ್ವರ, ಉಳ್ಳಾಲ, ಪೆಣಂಬೂರು, ಸುರತ್ಕಲ್ ಕಡಲ ಕಿನಾರೆಗಳಲ್ಲಿ ಭಾರೀ ಕಡಲ್ಕೊರೆತವಾಗುತ್ತಿದ್ದು, ಹಲವು ಮನೆಗಳು ಅಪಾಯದ ಅಂಚಿನಲ್ಲಿದೆ.
ತೌಖ್ತೆ ಚಂಡಮಾರುತ; ಮೇ 14ರಿಂದ ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಣೆ
ಸೋಮೇಶ್ವರದ ಸ್ಮಶಾನದ ಆವರಣ ಗೋಡೆ ಕಡಲ್ಕೊರೆತದಿಂದಾಗಿ ಬಿರುಕು ಬಿಟ್ಟಿದ್ದು, ಸಮುದ್ರದಲ್ಲಿ ಅಬ್ಬರ ಹೆಚ್ಚಾದರೆ ಸ್ಮಶಾನವೇ ಸಮುದ್ರ ಪಾಲಾಗುವ ಆತಂಕ ಎದುರಾಗಿದೆ. ಇನ್ನು ಸೋಮೇಶ್ವರದ ಮೋಹನ್ ಉಚ್ಚಿಲ ಮತ್ತು ಯೋಗಿಶ್ ಎಂಬುವವರ ಮನೆಯೂ ಅಪಾಯದ ಅಂಚಿನಲ್ಲಿದ್ದು, ಚಂಡಮಾರುತದ ತೀವ್ರತೆಗೆ ಜಾಸ್ತಿಯಾದಲ್ಲಿ ಮನೆಗೆ ಹಾನಿಯಾಗುವ ಆತಂಕ ಎದುರಾಗಿದೆ.
ಕೇವಲ ಮಂಗಳೂರು ಮಾತ್ರವಲ್ಲದೆ ಉಡುಪಿ, ಉತ್ತರ ಕನ್ನಡದ ಕೆಲ ಕಡಲ ಕಿನಾರೆಗಳಲ್ಲಿ ಸಮುದ್ರದ ಅಬ್ಬರದಿಂದಾಗಿ ಕಡಲ್ಕೊರೆತ ತೀವ್ರವಾಗುತ್ತಿದೆ. ಬೀಚ್ ಬಳಿಯ ಹಲವು ತೆಂಗಿನ ಮರಗಳು ಸಮುದ್ರ ಪಾಲಾಗಿದೆ. ಈ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಮೀನುಗಾರಿಕಾ ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವ ಎಸ್.ಅಂಗಾರ, ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸುವಂತೆ ಸೂಚಿಸಿದ್ದಾರೆ.
ಸೋಮೇಶ್ವರ ಭಾಗಕ್ಕೆ ಮೀನುಗಾರಿಕಾ ಇಲಾಖೆ ಮತ್ತು ಬಂದರು ಇಲಾಖೆಯ ನಿರ್ದೇಶಕರು ಭೇಟಿ ನೀಡಿದ್ದು, ವರದಿ ನೀಡಿದ್ದಾರೆ. ತೌಖ್ತೆ ಚಂಡಮಾರುತ ಮೇ 15 ಮತ್ತು ಮೇ 16 ರಂದು ರಾಜ್ಯದ ಕರಾವಳಿಗೆ ಅಪ್ಪಳಿಸಲಿದ್ದು, ಎರಡು ದಿನಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.