ಮಂಗಳೂರಿನಲ್ಲಿ ಚಂಡಮಾರುತದ ಭೀತಿ: ಲಂಗರು ಹಾಕಿದ ಸಾವಿರಾರು ಬೋಟ್ಗಳು
ಮಂಗಳೂರು, ಅಕ್ಟೋಬರ್. 07: ಹವಾಮಾನ ಇಲಾಖೆಯ ವರದಿಯಂತೆ ಅರಬ್ಬೀ ಸಮುದ್ರದಲ್ಲಿ ಈಗಾಗಲೇ ವಾಯುಭಾರ ಕುಸಿತವಾಗಿ ಚಂಡಮಾರುತವಾಗಿ ಪರಿವರ್ತನೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಶುಕ್ರವಾರ ಸಂಜೆ ಮಂಗಳೂರಿನಾದ್ಯಂತ ಕಾರ್ಮೋಡಗಳು ಆವರಿಸಿ ಜನರಲ್ಲಿ ಭಯ ಹುಟ್ಟಿಸಿದ್ದವು.
ಸಂಜೆಯಾಗುತ್ತಿದ್ದಂತೆ ಮಳೆ ಸುರಿಯಲು ಆರಂಭವಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಭಾರೀ ಮಳೆಯಾಗುವ ಆತಂಕ ಜನರಲ್ಲಿ ಮನೆ ಮಾಡಿತ್ತು.
ಆದರೆ ಶನಿವಾರ ಮುಂಜಾನೆಯಿಂದ ಬಾನು ತಿಳಿಯಾಗಿದೆ. ಮುಂಜಾನೆಯಿಂದ ಬಿಸಿಲು ಕಾಣಿಸಿಕೊಂಡಿದೆ. ಅದರೆ ಈ ನಡುವೆ ಕರಾವಳಿಯಾದ್ಯಂತ ಅಲರ್ಟ್ ಘೋಷಿಸಲಾಗಿದೆ. ಕಳೆದೆರಡು ದಿನಗಳಿಂದ ಕರಾವಳಿಯಲ್ಲಿ ಗುಡುಗು-ಸಿಡಿಲು ಸಹಿತ ಮಳೆ ಕಾಣಿಸಿಕೊಂಡಿತ್ತು.
ಶನಿವಾರದಿಂದ ಮತ್ತೆ ಭಾರೀ ಮಳೆ ಬೀಳುವ ಹಾಗೂ ಕಡಲ ಅಬ್ಬರ ಹೆಚ್ಚಾಗೋ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದ್ದು, ಹವಾಮಾನ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ತೀರ ಪ್ರದೇಶದಲ್ಲಿ ವಾಸಿಸುವವರಿಗೆ ಸಮುದ್ರಕ್ಕೆ ಇಳಿಯದಂತೆ ಸಂದೇಶ ರವಾನಿಸಲಾಗಿದೆ.

ಕಿನಾರೆಗೆ ಮರಳಿದ ಬೋಟುಗಳು
ಇನ್ನು ಅರಬ್ಬೀ ಸಮುದ್ರ ಪ್ರಕ್ಷುಬ್ಧವಾಗುವ ಕಾರಣದಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ದೋಣಿಗಳು ಕಿನಾರೆಗೆ ಮರಳಿವೆ. ಈಗಾಗಲೇ ಸಾವಿರಕ್ಕೂ ಹೆಚ್ಚು ಮೀನುಗಾರಿಕಾ ಬೋಟುಗಳು ಕರಾವಳಿಯ ಮೀನುಗಾರಿಕಾ ಬಂದರುಗಳಲ್ಲಿ ಲಂಗರು ಹಾಕಿವೆ. ಇನ್ನಷ್ಟು ಬೋಟುಗಳು ತೀರ ಪ್ರದೇಶಕ್ಕೆ ಆಗಮಿಸುತ್ತಿವೆ.

ಬೋಟ್ ಗಳ ಸ್ಥಳವಕಾಶಕ್ಕೆ ಸಮಸ್ಯೆ
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸರಿಸುಮಾರು 1,250 ಮೀನುಗಾರಿಕಾ ಬೋಟ್ ಗಳಿವೆ. ಇದರಲ್ಲಿ 800-900 ಸ್ಟೀಲ್ ಬೋಟ್ ಗಳು ಆಳಸಮುದ್ರ ಮೀನುಗಾರಿಕೆಗೆ ತೆರಳುತ್ತವೆ. ಉಳಿದ ಮರದ ಬೋಟ್ ಗಳು ಮೀನುಗಾರಿಕೆ ನಡೆಸಿ 1 ಅಥವಾ 3, 5 ದಿನಗಳಲ್ಲಿ ವಾಪಾಸ್ ಬರುತ್ತಿವೆ.
ಈ ಎಲ್ಲಾ ಬೋಟ್ ಗಳು ಒಮ್ಮೆಲೆ ಹಳೆ ಬಂದರಿಗೆ ಮರಳಿರುವ ಕಾರಣ ಬೋಟ್ ಗಳ ಸ್ಥಳವಕಾಶ ಸಮಸ್ಯೆ ಎದುರಾಗಿದೆ.

ಪರಿಸ್ಥಿತಿ ಎದುರಿಸಲು ಸಜ್ಜು
ಅಕ್ಟೋಬರ್ 8 ರಿಂದ 10ರವರೆಗೆ ಕರಾವಳಿಯಲ್ಲಿ ಭಾರೀ ಮಳೆ, ಗಾಳಿ, ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆಯ ಬಗ್ಗೆ ಹವಾಮಾನ ಇಲಾಖೆ ನೀಡಿದ ಮಾಹಿತಿಯನ್ವಯ ದಕ್ಷಿಣ ಕನ್ನಡ ಜಿಲ್ಲಾಡಳಿತ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ ಸೂಚನೆ
ಚಂಡಮಾರುತದ ಭೀತಿ ಕರಾವಳಿಗೆ ತೀವ್ರವಾಗಿ ಕಾಡಿದ್ದು, ಮುಂದಿನ ಮೂರು ದಿನಗಳ ಕಾಲ ವರುಣನ ಅರ್ಭಟ ಜೋರಾಗುವ ಎಲ್ಲಾ ಸಾಧ್ಯತೆಗಳೂ ಕೂಡ ಇವೆ. ಇನ್ನು ಸಮುದ್ರದ ತೀರ ನಿವಾಸಿಗಳಿಗೆ ಮುನ್ನೆಚ್ಚರಿಕೆ ಸಲುವಾಗಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸೂಚಿಸಿದೆ.












Click it and Unblock the Notifications