ಸೀರಿಯಲ್ ಕಿಲ್ಲರ್ ಸೈನೈಡ್ ಮೋಹನ್ ಗೆ 7ನೇ ಪ್ರಕರಣದಲ್ಲೂ ಜೀವನ ಪರ್ಯಂತ ಜೀವಾವಧಿ ಶಿಕ್ಷೆ
ಮಂಗಳೂರು, ಫೆಬ್ರವರಿ 24: ದೇಶದಾದ್ಯಂತ ಸಂಚಲನ ಮೂಡಿಸಿದ ಸರಣಿ ಹಂತಕ ಸೈನೈಡ್ ಮೋಹನ್ ನ 7ನೇ ಪ್ರಕರಣದಲ್ಲೂ ಆರೋಪ ಸಾಬೀತಾಗಿದೆ. ಈ ಪ್ರಕರಣದಲ್ಲಿ ಜೀವನ ಪರ್ಯಂತ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಬಂಟ್ವಾಳ ಮಾಣಿ ಗ್ರಾಮ ಪಂಚಾಯತ್ ನ 25 ವರ್ಷದ ಯುವತಿಯೊಬ್ಬರನ್ನು ಸೈನೈಡ್ ಕಿಲ್ಲರ್ ಮೋಹನ್ ಕುಮಾರ್ ವೆನ್ಲಾಕ್ ಆಸ್ಪತ್ರೆಯಲ್ಲಿ ಪರಿಚಯಿಸಿಕೊಂಡಿದ್ದ. ಈ ಸಂದರ್ಭ ತನ್ನನ್ನು ಸದಾನಂದ ನಾಯ್ಕ ಎಂದು ಪರಿಚಯಿಸಿಕೊಂಡಿದ್ದ ಮೋಹನ್, ಯುವತಿ ಕೈಯಲ್ಲಿ ಮೊಬೈಲ್ ಇಲ್ಲದ ಕಾರಣ ಆಕೆಯ ನೆರೆಮನೆಯ ವ್ಯಕ್ತಿಯ ಮೊಬೈಲ್ ನಂಬರ್ ಪಡೆದುಕೊಂಡಿದ್ದ .
ನಂತರ ಆಕೆಗೆ ಮದುವೆಯಾಗುವುದಾಗಿ ನಂಬಿಸಿದ್ದ. ಬಳಿಕ 2008ರ ಜನವರಿ 2ರಂದು ಪುತ್ತೂರು ಬಸ್ ನಿಲ್ದಾಣಕ್ಕೆ ಚಿನ್ನಾಭರಣ ಧರಿಸಿ ಬರಲು ಹೇಳಿದ್ದ. ಅದರಂತೆ ಯುವತಿ ಬಂದ ಬಳಿಕ ಇಬ್ಬರೂ ಮಡಿಕೇರಿಗೆ ತೆರಳಿ ಅಲ್ಲಿನ ಖಾಸಗಿ ವಸತಿ ಗೃಹದಲ್ಲಿ ರೂಮ್ ಪಡೆದುಕೊಂಡಿದ್ದಾರೆ.
ಸರಣಿ ಅತ್ಯಾಚಾರಿ, ಕೊಲೆಗಾರ ಸೈನೈಡ್ ಮೋಹನ್ 4ನೇ ಕೇಸಿನಲ್ಲೂ ದೋಷಿ
ಲಾಡ್ಜ್ ನಲ್ಲಿ ಮೋಹನ ತನ್ನನ್ನು ಆನಂದ ನಾಯ್ಕ ಎಂದು ಪರಿಚಯಿಸಿ ರಿಜಿಸ್ಟ್ರಿ ಬರೆದಿದ್ದ. ಬಳಿಕ ಯುವತಿಯ ವಿರೋಧದ ಮಧ್ಯೆಯೂ ರಾತ್ರಿ ಅತ್ಯಾಚಾರ ಎಸಗಿದ್ದ.
ಮಡಿಕೇರಿ ಬಸ್ ನಿಲ್ದಾಣ ಬಳಿ ಕರೆದೊಯ್ದ
ಮರುದಿನ ಬೆಳಗ್ಗೆ ಜನವರಿ 3ರಂದು ಮೋಹನ ಯುವತಿಯ ಬಳಿ 'ನಿನ್ನ ಚಿನ್ನಾಭರಣ, ಹಣ ರೂಮಿನಲ್ಲಿಡು, ನಾವು ಹೊರಗೆ ಹೋಗಿ ಬರೋಣ' ಎಂದು ನಂಬಿಸಿ, ಮಡಿಕೇರಿ ಬಸ್ ನಿಲ್ದಾಣ ಬಳಿ ಕರೆದೊಯ್ದಿದ್ದಾನೆ.
ಸರಣಿ ಅತ್ಯಾಚಾರಿ ಸೈನೈಡ್ ಮೋಹನ್ ಗೆ ಗಲ್ಲು ಶಿಕ್ಷೆ ಖಾಯಂ
ಚಿನ್ನಾಭರಣ ಸಹಿತ ಪರಾರಿ
ಬಳಿಕ ಯುವತಿಯ ಬಳಿ 'ನಿನ್ನೆ ಲೈಂಗಿಕ ಸಂಪರ್ಕ ಮಾಡಿದ ಕಾರಣ ಗರ್ಭಿಣಿಯಾಗದಂತೆ ತಡೆಯಲು ಶೌಚಾಲಯಕ್ಕೆ ಹೋಗಿ ಈ ಮಾತ್ರೆ ಸೇವಿಸು' ಎಂದು ಸೈನೈಡ್ ತುಂಬಿದ ಮಾತ್ರೆ ನೀಡಿದ್ದ. ಇದನ್ನು ನಂಬಿದ ಯುವತಿ ಮಾತ್ರೆ ಸೇವಿಸಿ, ಅಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಳು. ಇದಾದ ಕೂಡಲೇ ಮೋಹನ್ ರೂಮಿಗೆ ತೆರಳಿ ಚಿನ್ನಾಭರಣ ಸಹಿತ ಅಲ್ಲಿಂದ ಪರಾರಿಯಾಗಿದ್ದ.
ನಾಪತ್ತೆ ಪ್ರಕರಣ ದಾಖಲು
ಕೊಲೆ ಘಟನೆ ನಡೆದು ಕೆಲವು ದಿನದ ಬಳಿಕ ಯುವತಿಯ ನೆರೆಮನೆಯ ಯುವಕನ ಮೊಬೈಲ್ಗೆ ಕರೆ ಮಾಡಿದ ಮೋಹನ, ಯುವತಿಯ ತಂಗಿಯ ಜತೆ ಮಾತನಾಡಿ 'ನಾನು ಆಕೆಯನ್ನು ವಿವಾಹವಾಗಿದ್ದು, ಕ್ಷೇಮವಾಗಿದ್ದೇವೆ. ಒಂದು ವಾರದೊಳಗೆ ಊರಿಗೆ ಮರಳಿ ಬರುತ್ತೇವೆ. ನಮ್ಮನ್ನು ಹುಡುಕುವ ಪ್ರಯತ್ನ ಮಾಡಬೇಡಿ' ಎಂದು ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ವಿಟ್ಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಜೀವಾವಧಿ ಶಿಕ್ಷೆ ತೀರ್ಪು
2009 ಅಗಸ್ಟ್ 26ರಂದು ಬರಿಮಾರು ಯುವತಿಯೊಬ್ಬಳ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದಾಗ ಆರೋಪಿ ಮೋಹನ ಮಾಣಿಯ ಯುವತಿಯ ಕೊಲೆ ಮಾಡಿದ ಬಗ್ಗೆ ಬಾಯ್ಬಿಟ್ಟಿದ್ದ. ಈ ಪ್ರಕರಣದ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಪರಾಧಿ ಮೋಹನ್ ಗೆ ಜೀವನ ಪರ್ಯಂತ ಜೀವಾವಧಿ ಶಿಕ್ಷೆ ತೀರ್ಪು ನೀಡಿದೆ.