ನಾಳೆ ಫಲಿತಾಂಶ, ದಕ್ಷಿಣ ಕನ್ನಡ ಕ್ಷೇತ್ರದ ಅಭ್ಯರ್ಥಿಗಳಲ್ಲಿ ತಲ್ಲಣ
ಮಂಗಳೂರು ಮೇ 22: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತದಾರರು ತಿಂಗಳ ಹಿಂದೆ ನೀಡಿದ್ದ ತೀರ್ಪು ಮತಯಂತ್ರದೊಳಗೆ ಭದ್ರವಾಗಿದೆ. ಇನ್ನೇನು ಕ್ಷೇತ್ರ ಜನಾದೇಶ ಪ್ರಕಟಗೊಳ್ಳಲು ಕೆಲವೇ ಗಂಟೆಗಳು ಬಾಕಿ ಇವೆ. ಮತದಾನದ ನಂತರದ ಸುದೀರ್ಘ 35 ದಿನಗಳ ಕಾತರ, ಕುತೂಹಲಕ್ಕೆ ತೆರೆ ಬೀಳಲು ಕ್ಷಣಗಣನೆ ಶುರುವಾಗಿದೆ .ಪಕ್ಷಗಳ ಸೋಲು-ಗೆಲುವಿನ ಲೆಕ್ಕಾಚಾರದ ನಡುವೆ ಸುರತ್ಕಲ್ ನ ಎನ್ಐಟಿಕೆಯಲ್ಲಿ ನಾಳೆ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭಗೊಳ್ಳಲಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಎಸ್ಡಿಪಿಐ, ಬಿಎಸ್ ಪಿ, ಉತ್ತಮ ಪ್ರಜಾಕೀಯ ಪಾರ್ಟಿ, ಹಿಂದೂಸ್ತಾನ್ ಜನತಾ ಪಾರ್ಟಿ ಮತ್ತು 7 ಮಂದಿ ಪಕ್ಷೇತರರು ಸೇರಿದಂತೆ ಒಟ್ಟು 13 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ. ಇವರಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲು ಮತ್ತು ಕಾಂಗ್ರೆಸ್ನ ಮಿಥುನ್ ಎಂ. ರೈ ನಡುವೆ ಭಾರೀ ಹಣಾಹಣಿ ನಿರೀಕ್ಷಿತ. ಈ ಹಿನ್ನೆಲೆಯಲ್ಲಿ ಎಲ್ಲರ ಕಣ್ಣು ಇವರ ಮೇಲೆ ಕೇಂದ್ರೀಕೃತವಾಗಿರಲಿದೆ .

ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಒಟ್ಟು 17,24,460 ಮತದಾರರಿದ್ದು, ಈ ಬಾರಿ 13,43,378 ಮಂದಿ ಮತ ಚಲಾಯಿಸಿದ್ದಾರೆ. ಶೇ.77.90 ಮತದಾನ ದಾಖಲಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಶೇ.77.19 ಮತ್ತು 2018ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಒಟ್ಟು ಶೇ.77.63 ಮತದಾನವಾಗಿತ್ತು.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮತದಾನದ ಪ್ರಮಾಣದಲ್ಲಿ ಆಗಿರುವ ಹೆಚ್ಚಳ ಮತ್ತು ಕ್ಷೇತ್ರದಲ್ಲಿ ವ್ಯಕ್ತವಾಗಿರುವ ರಾಜಕೀಯ ಬದಲಾವಣೆಗಳನ್ನು ಮೂಲವಾಗಿರಿಸಿಕೊಂಡು ಗೆಲುವಿನ ಸಾಧ್ಯತೆಗಳ ಲೆಕ್ಕಾಚಾರ ನಡೆಯುತ್ತ ಬಂದಿದೆ.












Click it and Unblock the Notifications