'ಮಂಗಳೂರು ದಕ್ಷಿಣ' ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ ಸಿಪಿಐಎಂ
ಮಂಗಳೂರು, ಫೆಬ್ರವರಿ 24: ಮುಂಬರುವ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ತಾಲೀಮು ಆರಂಭಿಸಿವೆ. ಕಾಂಗ್ರೆಸ್, ಬಿಜೆಪಿ ಹಾಗು ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಕಸರತ್ತು ನಡೆಸುತ್ತಿದ್ದರೆ ಇನ್ನೊಂದೆಡೆ ಸಿಪಿಐಎಂ ನೇರ ಪ್ರಚಾರ ಆರಂಭಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಈ ಬಾರಿ ಸಿಪಿಐಎಂ ತೀರ್ಮಾನಿಸಿದೆ. ಮಂಗಳೂರು , ಮಂಗಳೂರು ದಕ್ಷಿಣ, ಮಂಗಳೂರು ಉತ್ತರ ಹಾಗು ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರಗಳಿಂದ ಸಿಪಿಐಎಂ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಅಬ್ಬರದ ನಡುವೆ ಸಿಪಿಐಎಂ ಪಕ್ಷ ಆಟಕ್ಕೂಂಟು ಲೆಕ್ಕಕ್ಕಿಲ್ಲದ ಪರಿಸ್ಥಿತಿ ಇದೆ . ಆದರೆ ಜಿಲ್ಲೆಯಲ್ಲಿ 1963ರಲ್ಲಿ ಕಮ್ಯೂನಿಸ್ಟ್ ಪಕ್ಷ ಖಾತೆ ತೆರೆದಿತ್ತು. ಆಗ ಸಿಪಿಐನ ಕೃಷ್ಣ ಶೆಟ್ಟಿ ಉಳ್ಳಾಲ ಕ್ಷೇತ್ರದಲ್ಲಿ ಶಾಸಕರಾಗಿದ್ದರು. 1975ರಲ್ಲಿ ಕಾಂಗ್ರೆಸ್ ಮೈತ್ರಿಯ ಫಲವಾಗಿ ಸಿಪಿಐ ನಿಂದ ಬಿ.ವಿ.ಕಕ್ಕಿಲ್ಲಾಯ ವಿಟ್ಲ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. 1983ರಲ್ಲಿ ಉಳ್ಳಾಲದಲ್ಲಿ ಸಿಪಿಎಂನ ರಾಮಚಂದ್ರ ರಾವ್ ಶಾಸಕರಾಗಿದ್ದರು. ನಂತರ ದಿನಗಳಲ್ಲಿ ಕಮ್ಯೂನಿಸ್ಟ್ ಸಿದ್ಧಾಂತ ರಾಜಕಾರಣ ಜಿಲ್ಲೆಯಲ್ಲಿ ಅಧಪತನದತ್ತ ಸಾಗಿತು. 1983 ರ ಬಳಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾರೂ ಶಾಸಕರಾಗಿ ಆಯ್ಕೆಯಾಗಿಲ್ಲ.
ಆದರೆ ಈ ಬಾರಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಈಗಾಗಲೇ ಸಿಪಿಐಎಂ ಅಭ್ಯರ್ಥಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಇಲ್ಲಿ ಸಿಪಿಐಎಂ ಪಕ್ಷದ ದಕ್ಷಿಣ ಸಮಿತಿ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಈಗಾಗಲೇ ಪ್ರಚಾರಕ್ಕೆ ಧುಮುಕಿದ್ದಾರೆ. ಈ ಹಿನ್ನೆಲೆಯಲ್ಲಿ ಸುನೀಲ್ ಕುಮಾರ್ ಬಜಾಲ್ ಅವರ ಚುನಾವಣಾ ಪ್ರಚಾರದ ಪೋಸ್ಟರ್ ಗಳು ಮಂಗಳೂರು ನಗರದಲ್ಲಿ ಕಂಡುಬರತೊಡಗಿವೆ.

ಈ ಪೋಸ್ಟರ್ ಗಳಲ್ಲಿ ಸ್ವಚ್ಛ, ಸುಂದರ, ಸಮೃದ್ಧಿ, ಸೌಹಾರ್ದತೆ ಮಂಗಳೂರು ನಮ್ಮ ಕನಸು. ಸೌಹಾರ್ದತೆ-ಅಭಿವೃದ್ಧಿಗೆ ನಮ್ಮ ಆಯ್ಕೆ-ಸುನೀಲ್ ಕುಮಾರ್ ಬಜಾಲ್, ಜನಪರ ಹೋರಾಟಗಾರ, ಬದಲಾವಣೆ ನಮ್ಮಿಂದಲೇ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ' ಎಂದು ಬರೆಯಲಾಗಿದೆ. ಪೋಸ್ಟರ್ ಗಳನ್ನು ನಗರದ ಎಲ್ಲಾ ಆಯಕಟ್ಟಿನ ಪ್ರದೇಶಗಳಲ್ಲಿ ಅಂಟಿಸಲಾಗಿದೆ.
ಮಾಹಿತಿಯ ಪ್ರಕಾರ ಮಂಗಳೂರು ದಕ್ಷಿಣ ವಿಧಾನ ಸಭಾಕ್ಷೇತ್ರದ ಪ್ರತಿ ವಾರ್ಡ್ ಗಳಿಗೆ ತೆರಳುತ್ತಿರುವ ಕಾರ್ಯಕರ್ತರು ಸಿಪಿಎಂ ಅಭ್ಯರ್ಥಿಯನ್ನು ಬೆಂಬಲಿಸುವಂತೆ ವಿನಂತಿಸುತ್ತಿದ್ದಾರೆ. ಮನೆ ಮನೆ ಭೇಟಿಯನ್ನೂ ಸಿಪಿಐಎಂ ಸಂಭವ್ಯ ಅಭ್ಯರ್ಥಿ ಸುನೀಲ್ ಕುಮಾರ್ ಬಜಾಲ್ ಆರಂಭಿಸಿದ್ದಾರೆ.
ಮಂಗಳೂರು ಉತ್ತರ ಕ್ಷೇತ್ರದಿಂದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಕಣಕ್ಕಿಳಿಯಲಿದ್ದಾರೆ. ಮೂಡುಬಿದಿರೆಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ಕಣಕ್ಕಿಳಿಯುವುದು ಖಚಿತವಾಗಿದೆ. ಆದರೆ ಮಂಗಳೂರು ಕ್ಷೇತ್ರದಲ್ಲಿ ಅಭ್ಯರ್ಥಿಯ ಆಯ್ಕೆ ಅಂತಿಮಗೊಂಡಿಲ್ಲ ಎಂದು ಹೇಳಲಾಗಿದೆ.
2013ರ ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂ ಮೂರು ಕಡೆಗಳಲ್ಲಿ ಮಾತ್ರ ಸ್ಪರ್ಧಿಸಿತ್ತು. ಮಂಗಳೂರು ದಕ್ಷಿಣದಲ್ಲಿ ವಸಂತ ಆಚಾರಿ, ಮಂಗಳೂರಿನಲ್ಲಿ ಕೃಷ್ಣಪ್ಪ ಸಾಲಿಯಾನ್ ಮತ್ತು ಬೆಳ್ತಂಗಡಿಯಲ್ಲಿ ಬಿ.ಎಂ.ಭಟ್ ಸ್ಪರ್ಧಿಸಿ ಸೋತಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಯಾದವ ಶೆಟ್ಟಿ ಸಿಪಿಎಂ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.












Click it and Unblock the Notifications