Breaking: ಮಳಲಿ ಮಸೀದಿ ವಿವಾದ: ತೀರ್ಪು ಪ್ರಕಟ ದಿನಾಂಕ ನ.9ಕ್ಕೆ ಮುಂದೂಡಿದ ಕೋರ್ಟ್
ಮಂಗಳೂರು ಅಕ್ಟೋಬರ್ 17 : ಮಳಲಿ ಮಸೀದಿ ವಿವಾದ ಕುರಿತಂತೆ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ತೀರ್ಪನ್ನು ನವೆಂಬರ್ 9ಕ್ಕೆ ಕಾಯ್ದಿರಿಸಿದೆ. ಮಳಲಿ ಮಸೀದಿಯಲ್ಲಿ ದೇವಾಲಯ ಮಾದರಿ ರಚನೆಯಲ್ಲಿದೆ ಎಂಬ ವಿವಾದಕ್ಕೆ ಸಂಬಂಧಿಸಿದ ಸೋಮವಾರವೇ ತೀರ್ಪು ನೀಡಬಹುದೆಂಬ ನಿರೀಕ್ಷೆಯಿತ್ತು. ಆದರೆ ಮತ್ತೆ ತೀರ್ಪನ್ನು ಮುಂದೂಡಲಾಗಿದೆ.
ಮಳಲಿ ಮಸೀದಿ ಜಾಗದಲ್ಲಿ ಕೋರ್ಟ್ ಕಮಿಷನರ್ ಮೂಲಕ ಸರ್ವೆ ನಡೆಸಲು ಆದೇಶ ನೀಡಬೇಕೆಂದು ವಿಶ್ವ ಹಿಂದೂ ಪರಿಷತ್ ಮನವಿ ಸಲ್ಲಿಸಿತ್ತು. ಈ ಮನವಿಯನ್ನು ಆಕ್ಷೇಪಿಸಿದ್ದ ಮಸೀದಿ ಮಂಡಳಿ, ಇಂಥ ಆದೇಶ ಮಾಡಲು ವಿಚಾರಣಾ ನ್ಯಾಯಾಲಯಕ್ಕೆ ಅಧಿಕಾರವಿಲ್ಲ. ವಿಶ್ವ ಹಿಂದೂ ಪರಿಷತ್ ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಬೇಕು ಎಂದು ಕೋರಿತ್ತು. ವಾದ-ಪ್ರತಿವಾದ ಆಲಿಸಿರುವ ನ್ಯಾಯಾಲಯವು ಸೋಮವಾರ ತೀರ್ಪನ್ನು ನೀಡಬೇಕಿತ್ತು , ಅದರೆ ತೀರ್ಪು ಕಾಯ್ದಿರಿಸಿದ್ದು, ನವೆಂಬರ್ 9ಕ್ಕೆ ಮುಂದೂಡಿದೆ.
ಈ ತೀರ್ಪು ಎರಡೂ ಸಮುದಾಯಗಳು ಎದುರು ನೋಡುತ್ತಿವೆ. ಏಕೆಂದರೆ ನ್ಯಾಯಾಲಯವು ಮಸೀದಿ ಮಂಡಳಿಯ ಅರ್ಜಿಯನ್ನು ಪುರಸ್ಕರಿಸಿದರೆ, ವಿಶ್ವ ಹಿಂದೂ ಪರಿಷತ್ನ ಕೋರಿಕೆಯಾಗಿರುವ ಸರ್ವೇಕ್ಷಣೆಯ ಮನವಿಯನ್ನು ತಿರಸ್ಕರಿಸಿದಂತಾಗುತ್ತದೆ, ಒಂದು ವೇಳೆ ವಿಶ್ವ ಹಿಂದೂ ಪರಿಷತ್ ಅರ್ಜಿಯನ್ನು ಪುರಸ್ಕರಿಸಿದರೆ ಮಳಲಿ ಮಸೀದಿ ಕಟ್ಟಡ ಸಮುಚ್ಚಯದ ವಿಡಿಯೊ ಸರ್ವೇಕ್ಷಣೆಗೆ ಆದೇಶ ನೀಡಬೇಕಾಗುತ್ತದೆ.
2022ರ ಏಪ್ರಿಲ್ನಲ್ಲಿ ಮಳಲಿ ಮಸೀದಿ ನವೀಕರಣದ ವೇಳೆ ಕಟ್ಟಡ ಕೆಡವಿದ ಸಂದರ್ಭ ಹಿಂದೂ ಶೈಲಿಯ ಮರದ ಕೆತ್ತನೆ ಪತ್ತೆ ಆಗಿತ್ತು. ಹಿಂದೂ ಶೈಲಿಯ ಮರದ ಕೆತ್ತನೆಯ ಮಸೀದಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ರಾಷ್ಟ್ರ ಮಟ್ಟದವರೆಗೂ ಈ ಸುದ್ದಿ ಹಬ್ಬಿತ್ತು.
ಈ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸ್ಥಳದಲ್ಲಿ ಪೊಲೀಸ್ ನಿಯೋಜನೆ ಮಾಡಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಈ ನಡುವೆ ಹಿಂದೂ ಸಂಘಟನೆಗಳು ಮಧ್ಯ ಪ್ರವೇಶಿಸಿ ಮಸೀದಿ ಇರುವ ಸ್ಥಳದ ಬಗ್ಗೆ ತಾಂಬೂಲ ಪ್ರಶ್ನೆ ಚಿಂತನೆಯನ್ನು ಇರಿಸಿತ್ತು. ತಾಂಬೂಲ ಪ್ರಶ್ನೆಯಲ್ಲಿ ಮಸೀದಿಯಲ್ಲಿ ಈ ಹಿಂದೆ ಗುರುಸಾನಿಧ್ಯ ಇದ್ದ ಬಗ್ಗೆ ಗೋಚರವಾಗಿತ್ತು ಹೇಳಲಾಗಿತ್ತು.
ಕೋರ್ಟ್ ಮೆಟ್ಟಿಲೇರಿದ್ದ ಹಿಂದೂ ಸಂಘಟನೆಗಳು ಬಳಿಕ ಈ ವಿಚಾರದಲ್ಲಿ ವಿಎಚ್ಪಿ ಕಾನೂನು ಹೋರಾಟ ನಡೆಸಲು ನಿರ್ಧರಿಸಿ ಕೋರ್ಟ್ ಮೆಟ್ಟಿಲೇರಿತ್ತು. 2022ರ ಮೇ ತಿಂಗಳಿನಿಂದ ಮಂಗಳೂರು ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ನಲ್ಲಿ ಮಳಲಿ ಮಸೀದಿ ವಿಚಾರದಲ್ಲಿ ವಿಚಾರಣೆ ನಡೆಯುತ್ತಿದೆ.