ಬೆಳ್ತಂಗಡಿ; ಗಡಾಯಿಕಲ್ಲು ಪ್ರವೇಶಕ್ಕೆ ಟಿಕೆಟ್ ನೀಡದೆ ಅಕ್ರಮ, ಆರೋಪ
ಮಂಗಳೂರು, ಡಿಸೆಂಬರ್ 30; ಪಶ್ಚಿಮ ಘಟ್ಟದ ತಪ್ಪಲಲ್ಲಿ ಇರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಸಹಜ ಪೃಕೃತಿ ಸೌಂದರ್ಯದ ಗಣಿ. ಬೆಳ್ತಂಗಡಿಯಲ್ಲಿ ಹತ್ತಾರು ಪ್ರವಾಸಿ ತಾಣಗಳಿದ್ದರೂ, ಎಲ್ಲರ ಆಕರ್ಷಣೆಗೊಳಗಾಗಿರೋದು ನರಸಿಂಹ ಗಢ. ಜಮಾಲಾಬಾದ್ ಕೋಟೆ, ಗಡಾಯಿಕಲ್ಲು ಅಂತಾನೂ ಕರೆಸಿ ಕೊಳ್ಳುವ ನರಸಿಂಹಘಢ ಬೆಳ್ತಂಗಡಿಯ ಆಕರ್ಷಣೀಯ ಕೇಂದ್ರವಾಗಿದೆ.
ಆದರೆ ಈಗ ನರಸಿಂಹಘಢದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಪ್ರವಾಸಿಗರಿಂದ ಬೆಟ್ಟ ಹತ್ತಲು ಪ್ರವಾಸಿಗರಿಂದ ಹಣ ಪಡೆಯುವ ಪುರಾತತ್ವ ಇಲಾಖೆ ಪ್ರವಾಸಿಗರಿಗೆ ಪ್ರವೇಶ ಟಿಕೆಟ್ ನೀಡದೆ ಅಕ್ರಮ ಎಸಗಿದೆ ಎಂಬ ಗಂಭೀರ ಆರೋಪ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಡ ಗ್ರಾಮ ವ್ಯಾಪ್ತಿಯ ವನ್ಯಜೀವಿ ವಿಭಾಗದ ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗಿರುವ ಐತಿಹಾಸಿಕ ನರಸಿಂಹಘಢ ಅತ್ಯಂತ ಆಕರ್ಷಣೆಯ, ಚಾರಣಿಗರಿಗೆ, ಪ್ರವಾಸಿಗರಿಗೆ ಪ್ರಿಯ ತಾಣ. ಸಮುದ್ರ ಮಟ್ಟದಿಂದ 1788 ಅಡಿ ಎತ್ತರದಲ್ಲಿರುವ ಗಡಾಯಿಕಲ್ಲಿನ 2,800 ಮೆಟ್ಟಿಲುಗಳನ್ನೇರಿದಾಗ ಮೇಲ್ಭಾಗ ತಲುಪಬಹುದು.

ಇಂಡೋ ಸಾರ್ಸೆನಿಕ್ ಶೈಲಿಯನ್ನು ಹೋಲುವ ಶಿಲ್ಪ ಚಿತ್ರಗಳು ಇಲ್ಲಿನ ಒಂದನೇ ಮಹಾ ದ್ವಾರಗಳಲ್ಲಿ ಕಂಡುಬರುತ್ತವೆ. ಗಡಾಯಿಕಲ್ಲಿನ ಮೇಲ್ಭಾಗದಲ್ಲಿ ಎರಡು ಕಟ್ಟಡಗಳನ್ನು ಕಾಣಬಹುದಾಗಿದೆ. ಸುಣ್ಣದ ಕಲ್ಲಿನ ಗಾರೆಯಿಂದ ಇದನ್ನು ನಿರ್ಮಿಸಿದ್ದು ಶಸ್ತ್ರಾಸ್ರಗಳನ್ನು ಮತ್ತು ಮದ್ದು ಗುಂಡುಗಳನ್ನು ಸಂಗ್ರಹಿಸಲು ನಿರ್ಮಿಸಲಾಗಿದೆ. ಎರಡನೇ ಕಟ್ಟಡದಲ್ಲಿ ಕೋವಿ ಕಿಂಡಿ ಕಾಣಬಹುದು. ಈ ಕಲ್ಲಿನ ಮೇಲ್ಭಾಗದಲ್ಲಿ ಅನೇಕ ಕಟ್ಟಡಗಳ ಅವಶೇಷಗಳು ಸೂಕ್ಷ್ಮವಾಗಿ ಗಮನಿಸಿದರೆ ಕಂಡುಬರುತ್ತವೆ. ಇವೆಲ್ಲವೂ ಸೈನಿಕರು ಉಳಿಯುತ್ತಿದ್ದ ಮತ್ತು ಆಹಾರ ದಾಸ್ತಾನು ಮಾಡುತ್ತಿದ್ದ ಕೊಠಡಿಗಳಾಗಿರಬಹುದೆಂದು ಊಹಿಸಬಹುದಾಗಿದೆ.
ನರಸಿಂಹಘಢ ರಕ್ಷಿತಾ ಸ್ಮಾರಕದ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಪ್ರಾಚೀನ ಸ್ಮಾರಕಗಳ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿದ್ದು, ಗಡಾಯಿಕಲ್ಲನ್ನು ರಕ್ಷಿತಾ ಸ್ಮಾರಕ ಎಂದು ಘೋಷಿಸಿದೆ. ಈ ಪ್ರದೇಶ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೊಳಪಡುವುದರಿಂದ ಗಡಾಯಿಕಲ್ಲು ಚಾರಣಕ್ಕೆ ವಯಸ್ಕರಿಗೆ 50, ವಿದ್ಯಾರ್ಥಿಗಳಿಗೆ 25 ರೂ. ಟಿಕೆಟ್ ನೀಡಲಾಗುತ್ತದೆ. ಬಹುತೇಕ ಸಂದರ್ಭ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಾಗೂ ವನ್ಯಜೀವಿ ವಿಭಾಗದ ಸಿಬ್ಬಂದಿಗಳು ಪ್ರತ್ಯೇಕ ಪ್ರತ್ಯೇಕವಾಗಿ ಟಿಕೆಟ್ ನೀಡಿ ಹಣ ವಸೂಲಿ ನಡೆಸುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶನಿವಾರ, ಭಾನುವಾರ ಹಾಗೂ ರಜಾದಿನಗಳಲ್ಲಿ ಸರಾಸರಿ 400-500 ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದು, ಇತರೆ ಸಂದರ್ಭ 50-70 ಪ್ರವಾಸಿಗರು ಮಾತ್ರ ಆಗಮಿಸುತ್ತಾರೆ. ಬಹುತೇಕ ಸಂದರ್ಭ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ವನ್ಯಜೀವಿ ವಿಭಾಗದ ಸಿಬ್ಬಂದಿಗಳು ಪ್ರವಾಸಿಗರಿಂದ ಹಣ ಪಡೆದು ಟಿಕೆಟ್ ನೀಡದೇ ರಕ್ಷಿತ ಸ್ಮಾರಕ ಜಮಲಾಬಾದ್ಗೆ ಪ್ರವೇಶ ನೀಡುತ್ತಿದ್ದಾರೆ. ಸಿಬ್ಬಂದಿಗಳಲ್ಲಿ ಹಣ ನೀಡಿದ ಪ್ರವಾಸಿಗರು ಟಿಕೆಟ್ ಕೇಳಿದ್ದಲ್ಲಿ ಟಿಕೆಟ್ ಖಾಲಿಯಾಗಿದೆ ಎಂಬುದಾಗಿ ಸಿಬ್ಬಂದಿಗಳು ಉತ್ತರ ನೀಡುತ್ತಿದ್ದಾರೆ.
ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಾಗೂ ವನ್ಯಜೀವಿ ವಿಭಾಗದ ಸಿಬ್ಬಂದಿ ಕಳ್ಳಾಟ ಮೇಲಧಿಕಾರಿಗಳಿಗೆ ತಿಳಿದಿಲ್ಲ ಅಂತಾ ಹೇಳಲಾಗಿದೆ. ಪ್ರವಾಸಿಗರಿಗೆ ಗುಡ್ಡದ ತುದಿಲ್ಲಿರುವ ಕೋಟೆಗೆ ತೆರಳಲು ಮಾತ್ರ ಅವಕಾಶ, ಆದರೆ ಬಹುತೇಕ ಪ್ರವಾಸಿಗರು ಕುದುರೆ ಮುಖ ರಾಷ್ಟ್ರೀಯ ಉದ್ಯಾನ ಪ್ರವೇಶಿಸಿ ಕಸ, ಪ್ಲಾಸಿಕ್, ಮದ್ಯದ ಬಾಟಲಿ ತ್ಯಾಜ್ಯ ಬಿಸಾಡುತ್ತಿದ್ದಾರೆ. ಪಡ್ಡೆ ಹುಡುಗರಂತೂ ಇಲ್ಲಿನ ಇಂಡೋ ಸಾರ್ಸೆನಿಕ್ ಶೈಲಿಯನ್ನು ಹೋಲುವ ಶಿಲ್ಪ ಚಿತ್ರಗಳನ್ನು ವಿರೂಪಗೊಳಿಸುತ್ತಿರುವುದೂ ಕಂಡುಬಂದಿದೆ. ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಇಲ್ಲಿ ಮೋಜು- ಮಸ್ತಿ, ಅನೈತಿಕತೆಯಲ್ಲಿ ತೊಡಗಿಕೊಂಡರೂ ಕೇಳುವವರಿಲ್ಲದ ಸ್ಥಿತಿ ನಿರ್ಮಾಣಗೊಂಡಿದೆ. ಈ ಆರೋಪದ ಬಗ್ಗೆ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
"ನರಸಿಂಹಘಢದ ಕೋಟೆಯ ಜವಾಬ್ದಾರಿಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಸಿಬ್ಬಂದಿ ನೋಡಿಕೊಳ್ಳುತ್ತಾರೆ. ಈ ಪ್ರದೇಶ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಗೆ ಒಳಪಡುವುದರಿಂದ ಪ್ರವೇಶಕ್ಕಾಗಿ ಪ್ರವಾಸಿಗರಿಂದ ಶುಲ್ಕ ಪಡೆಯಲಾಗುತ್ತದೆ. ಸಂಗ್ರಹಿಸಿದ ಶುಲ್ಕವನ್ನು ಕರ್ತವ್ಯದಲ್ಲಿರುವ ಸಿಬ್ಬಂದಿ ಇಲಾಖೆಗೆ ತಂದೊಪ್ಪಿಸುತ್ತಾರೆ" ಎಂದು ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ ಸಾರ್ವಜನಿಕರ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications