ವಾಜಪೇಯಿ ಸಾವಿನ ಬಗ್ಗೆಯೂ ವಿಕೃತಿ ತೋರಿದ 'ಮಂಗಳೂರು ಮುಸ್ಲಿಮ್ಸ್': ಗಮನಿಸಬೇಕಾದ ಸಂಗತಿಗಳು
ಮಂಗಳೂರು, ನವೆಂಬರ್. 13:ತನ್ನ ವಿಕೃತ ಬರಹಗಳಿಂದಲೇ ಕುಖ್ಯಾತಿ ಪಡೆದಿರುವ 'ಮಂಗಳೂರು ಮುಸ್ಲಿಮ್ಸ್' ಫೇಸ್ಬುಕ್ ಪೇಜ್ ಕೇಂದ್ರ ಸಚಿವ ಅನಂತಕುಮಾರ್ ಅವರ ಸಾವಿನ ಬಗ್ಗೆ ಬರೆದ ಬರಹವನ್ನು ಸಮರ್ಥಿಸಿಕೊಂಡಿದೆ.
ಅನಂತ ಕುಮಾರ್ ಅವರ ಚಿತ್ರವನ್ನು ಒಳಗೊಂಡ ಅವಹೇಳನಕಾರಿ ಪೋಸ್ಟ್ ಬಗ್ಗೆ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ತನ್ನ ವಿಕೃತಿ ಮುಂದುವರೆಸಿರುವ 'ಮಂಗಳೂರು ಮುಸ್ಲಿಮ್ಸ್' ಈಗ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಸಾವಿನ ಕುರಿತಾಗಿಯೂ ಕೀಳುಮಟ್ಟದ ಪೋಸ್ಟ್ ಪ್ರಕಟಿಸಿದೆ.
ತನ್ನ ಫೇಸ್ ಬುಕ್ ಖಾತೆಯಲ್ಲಿ ನಿಧನರಾದ ಅನಂತ್ ಕುಮಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿ ಅವರನ್ನು ಭಯೋತ್ಪಾದಕ ಎಂದು ಉಲ್ಲೇಖಿಸಿದೆ. ಜೊತೆಗೆ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಸಾವಿನ ಬಗ್ಗೆಯೂ ವಿಕೃತ ಭಾವನೆ ಹೊಂದಿರುವುದನ್ನು ಮತ್ತೊಮ್ಮೆ ತೋರಿಸಿದೆ.
'ಮುಸ್ಲಿಮರ ಸಾವಿಗೆ ಕಾರಣರಾಗಿ ದೇಶದಲ್ಲಿ ಜಾತಿಯ ವಿಷ ಬೀಜ ಬಿತ್ತಿದ ಇಂತಹ ಜಾತಿ ವಿಷಕಾರಿ ಜಂತುಗಳ ಸಾವಿಗೆ ದುಃಖ ಪಡುವ ಅವಶ್ಯಕತೆಯಿಲ್ಲ. ಇಂತಹವರಿಗೆ ಕ್ಯಾನ್ಸರ್ಗಿಂತ ಭಯಾನಕವಾಗಿ ಜ್ಞಾಪಕಶಕ್ತಿ ಕಳೆದುಕೊಂಡು ವಾಜಪೇಯಿ ಹುಚ್ಚನಂತೆ ನರಳಿ ನರಳಿ ಸತ್ತಂತೆ ಸಾವು ಬರಲಿ ಎಂದು ಅಲ್ಲಾಹುವಿನಲ್ಲಿ ಪ್ರಾರ್ಥಿಸುತ್ತೇವೆ ' ಎಂದು ಪೇಜ್ನಲ್ಲಿ ಸಮರ್ಥಿಸಿಕೊಂಡಿದೆ.

ವಿವಾದಿತ ಪೋಸ್ಟ್ ಪ್ರಕಟ
ಸೋಮವಾರ (ನ.12) ಕೇಂದ್ರ ಸಚಿವ ಅನಂತ್ ಕುಮಾರ್ ಅವರ ನಿಧನವನ್ನು ಸಂಭ್ರಮಿಸಿದ 'ಮಂಗಳೂರು ಮುಸ್ಲಿಮ್ಸ್' ಫೇಸ್ ಬುಕ್ ಪೇಜ್ ಬಳಿಕ ಪ್ರಧಾನಿ ಮೋದಿ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್, ಎಲ್ ಕೆ ಅಡ್ವಾಣಿ ಅವರ ಸಾವನ್ನು ಬಯಸಿ ವಿವಾದಿತ ಪೋಸ್ಟ್ ಪ್ರಕಟಿಸಿತ್ತು.

ಶಿವನ ಪಾದ ಸೇರಿ
ಹಿಂದೂ ಮುಸ್ಲಿಂ ಮಧ್ಯೆ ವಿಷ ಬಿತ್ತಿ ರಾಮ ಮಂದಿರ ತೋರಿಸಿದ ಇವನಿಗೆ ಭಕ್ತರೆ ಎಂದು ಬರೆದು ಪ್ರಕಟಿಸಲಾಗಿದ್ದು, ವಾಜಪೇಯ್, ಅಶೋಕ್ ಸಿಂಘಾಲ್ , ಅನಂತ್ ಕುಮಾರ್, ಮುಂದೆ ಮನೋಹರ್ ಪಾರಿಕ್ಕರ್ , ಅಡ್ವಾಣಿ, ಉಮಾಭಾರತಿ, ಮೋದಿ, ಯೋಗಿ... ಹೀಗೆ ದೇಶ ದ್ರೋಹಿಗಳ ಪಟ್ಟಿ ಬೆಳೆದರೂ ನಿಮ್ಮಿಂದ ಈ ಮುಂದೆ ಈ ದೇಶ ದ್ರೋಹಿಗಳ ಸಾವನ್ನು ನೋಡಬಹುದು ಹೊರತು ಸಾಮರಸ್ಯವಲ್ಲ. ಜಾತಿ ,ಮಸೀದಿ, ಮುಸ್ಲಿಂ ಅನ್ನುವ ವಿಷಬೀಜ ಬಿತ್ತಿ ಅಧಿಕಾರ ನಡೆಸಿ ದೇಶ ಹಾಳುಮಾಡುವ ಬದಲು ಇವರೆಲ್ಲ ನೀವು ನಂಬಿದ ಶಿವನ ಪಾದವೇ ಆದಷ್ಟು ಬೇಗ ಸೇರಲಿ' ಎಂದು ಬರೆದು ಪೋಸ್ಟ್ ಮಾಡಲಾಗಿತ್ತು.

ಹೆಚ್ಚುತ್ತಿದೆ ಒತ್ತಡ
ಬಿಜೆಪಿ ನಾಯಕರ ಸಾವಿನ ಕುರಿತು ವಿಕೃತಿ ಪ್ರದರ್ಶಿಸುತ್ತಿರುವ 'ಮಂಗಳೂರು ಮುಸ್ಲಿಮ್ಸ್' ಪೇಜ್ ವಿರುದ್ಧ ಈಗಾಗಲೇ ಆಕ್ರೋಶ ಭುಗಿಲೇಳುತ್ತಿದೆ. ಈ ವಿವಾದಿತ ಫೇಸ್ ಬುಕ್ ಪೇಜ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಡ ಹೆಚ್ಚುತ್ತಿದೆ.

ಸ್ವಯಂ ಪ್ರೇರಿತ ಪ್ರಕರಣ ದಾಖಲು
ಅನಂತಕುಮಾರ್ ನಿಧನದ ವಿಚಾರದಲ್ಲಿ ಅವಹೇಳನಕಾರಿ ವಿಕೃತ ಬರಹಗಳನ್ನು ಪ್ರಕಟಿಸಿರುವ 'ಮಂಗಳೂರು ಮುಸ್ಲಿಮ್ಸ್' ಫೇಸ್ಬುಕ್ ಪೇಜ್ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪೊಲೀಸರೇ ಪ್ರಕರಣ ದಾಖಲಿಸಿದ್ದಾರೆ. ಪಾಂಡೇಶ್ವರ ಠಾಣಾ ಪೊಲೀಸ್ ನಿರೀಕ್ಷಕರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಆದರೆ ಈ ವಿವಾದಿತ ಫೇಸ್ ಬುಕ್ ಅಕೌಂಟ್ ವಿರುದ್ಧ ಯಾವೊಬ್ಬ ಬಿಜೆಪಿ ಮುಖಂಡ ದೂರು ದಾಖಲಿಸದಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ಮಂಗಳೂರು ಫೇಸ್ಬುಕ್ ಪೇಜ್ ವಿರುದ್ಧ ಪೊಲೀಸರು ಐಟಿ ಕಾಯ್ದೆ ಸಕ್ಷನ್ 505(1) & (2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಳ್ಳಲು ನಿರ್ಧರಿಸಿದ್ದಾರೆ.












Click it and Unblock the Notifications