ಅರ್ಧ ಶತಕದಿಂದ ಕಾಡಿನಲ್ಲೇ ನೆಲೆಸಿರುವ ಕೆಂಚಪ್ಪನ ರೋಚಕ ಕಥೆ!
ಸುಕ್ಕು ಕಟ್ಟಿದ ಬತ್ತಿರುವ ಸಣಕಲ ಜೀವ, ಮುರಿದು ಬಿದ್ದಿರುವ ಸೂರು, ಕಲ್ಲಿನ ಹಾಸಿಗೆಯಲ್ಲಿ ನಿದ್ರೆ. ತನ್ನವರನ್ನೆಲ್ಲಾ ತೊರೆದು ಏಕಾಂತದಿಂದ ಒಬ್ಬಂಟಿಯಾಗಿ ಕಾಡಿನಲ್ಲಿ ವಾಸ. ಕಾಡಿನ ಹುಳು ಹುಪ್ಪಟೆಗಳು, ಪಕ್ಷಿಗಳು ಈತನ ಒಡನಾಡಿ, ಕಾಡಿನ ಗೆಡ್ಡೆ ಗೆಣಸೇ ಈತನ ಆಹಾರ. ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಬಾಳೆಡಿ ಎಂಬ ಕಾಡಿನಲ್ಲಿ ಸುಮಾರು 50 ಕ್ಕೂ ಹೆಚ್ಚು ವರ್ಷದಿಂದ ಈ ರೀತಿಯ ಒಬ್ಬಂಟಿ ಜೀವನ ನಡೆಸುತ್ತಿರುವ ವ್ಯಕ್ತಿ ಕೆಂಚಪ್ಪ.
ಇವರಿಗೆ ಒಟ್ಟು ಎರಡು ಜನ ತಮ್ಮಂದಿರು ಮತ್ತು ನಾಲ್ಕು ಜನ ತಂಗಿಯಂದಿರು. ಮದುವೆಯಾಗಿಲ್ಲ. ಇವರ ಕಾಡಿನ ವಾಸದ ಕತೆ ಕೇಳಿದರೆ ಎಂತವರನ್ನು ಒಮ್ಮೆ ಬೆಚ್ಚಿ ಬೀಳೀಸುವುದಂತೂ ಸತ್ಯ, ಈಗ ಇವರಿಗೆ ಸುಮಾರು 75 ವರ್ಷ ದಾಟಿರಬಹುದು.[ಕಾಡಿನಲ್ಲಿನ ಲಟಾರಿ ಕಾರೇ ಸುಳ್ಯದ ಸಾಹುಕಾರನ 'ಅರಮನೆ']
ಸುಮಾರು 25 ವರ್ಷದವರಿರುವಾಗ ಮನೆಯವರೊಡನೆ ಸೊಪ್ಪಿಗೆಂದು ಕಾಡಿಗೆ ಬಂದಿದ್ದರಂತೆ, ಸುಮಾರು 50 ವರ್ಷಗಳ ಹಿಂದೆ ಅಂದರೆ ಈಗ ಬಾಳೆಡಿ ಎಂಬುದು ಕಾಡು , ಆಗ ಕಗ್ಗತ್ತಲ ಕಾಡು, ಸಣ್ಣ ಕವಲು ದಾರಿ, ಪೊದೆಗಳ ಮಧ್ಯೆ ಹುಲಿ ಇದ್ದರೂ ಗೊತ್ತಾಗುತ್ತಿರಲಿಲ್ಲ. ರಾತ್ರಿ ಮಾನವ ಸಂಚರಿಸುತ್ತಿರಲಿಲ್ಲ ಹಗಲಿನಲ್ಲೇ ಭಯದಿಂದ ಸಂಚರಿಸುತ್ತಿದ್ದ.
ಇಂತಹ ಸನ್ನಿವೇಶವಿರುವಾಗ ಸೊಪ್ಪಿಗೆಂದು ಮನೆಯವರೊಡನೆ ಬಂದು ಕತ್ತಿಯನ್ನು ಕಾಡಿನಲ್ಲಿ ಮರೆತು ಮನೆಗೆ ಹೋಗಿದ್ದರಂತೆ. ಕತ್ತಿ ತರುತ್ತೇನೆಂದು ಮನೆಯವರ ಬಳಿ ಹೇಳಿ ಹೋದ ಬಳಿಕ ಈ ಮನುಷ್ಯ ಮತ್ತೆ ಮನೆಗೆ ಹಿಂತಿರುಗಲೇ ಇಲ್ಲ. ಮುಂದೇನಾಯ್ತು? ಓದಿ... [ಕೆಂಚಪ್ಪನ ಸಂಕ್ಷಿಪ್ತ ಕಥೆ ಸುದ್ದಿ ದನಿ ವಿಡಿಯೋಗಾಗಿ ಕ್ಲಿಕ್ಕಿಸಿ]

ಊರಿನವರು ನಂಬಿಕೆ ಬಗ್ಗೆ ಏನು ಹೇಳುತ್ತಾರೆ
ಕತ್ತಿ ತರಲೆಂದು ಬಂದಾಗ ಅಲ್ಲೊಂದು ಪ್ರಾಣಿಯನ್ನು ದುಷ್ಟ ಶಕ್ತಿಗಳು ಭಕ್ಷಿಸುತ್ತಿದ್ದವಂತೆ ಇದನ್ನು ನೋಡಿದ ಕೆಂಚಪ್ಪ ಅವರಿಗೆ ಸೋಂಕು ಆಯಿತು ಎನ್ನುತ್ತಾರೆ. ಆ ಬಳಿಕ ಅವರ ನಡೆ ನುಡಿ ಎಲ್ಲಾ ಬದಲಾಯಿತಂತೆ, ಮನೆಯವರು ಎಷ್ಟೇ ಪ್ರಯತ್ನ ಪಟ್ಟರೂ ಈ ಇಳಿ ವಯಸ್ಸಿನಲ್ಲೂ ಕೂಡ ಮನೆಯವರಿಗೆ ಅವರ ಮನ ಒಲಿಸಿ ಕಾಡಿನಿಂದ ಮನೆಗೆ ಕರೆತರಲು ಆಗಲೇ ಇಲ್ಲ. ಇದರ ಹಿಂದಿನ ನಿಗೂಢ ಸತ್ಯ ಇಂದಿಗೂ ಯಾರಿಗೂ ತಿಳಿದಿಲ್ಲ.

ಕಾಡಿನಲ್ಲಿ ಕೆಂಚಪ್ಪನ ಜೀವನ ಹೇಗಿದೆ?
ಕಾಡಿಗೆ ಬಂದ ಯೌವನದ ಸಮಯದಲ್ಲಿ ಪ್ರಾಣಿಗಳಿಂದ ಬಚಾವಾಗಲು ಮರದ ಮೇಲೆ ಸೊಪ್ಪಿನ ಮನೆ ಮಾಡಿ ವಾಸಿಸುತ್ತಿದ್ದರು. ನಂತರ ತಿನ್ನಲು ಸ್ವತಃ ಗೆಡ್ಡೆ ಗೆಣಸು ಬೆಳೆಸುತ್ತಿದ್ದರು ಕೂಡ ಪಕ್ಕದಲ್ಲೇ ಒಂದು ಸಣ್ಣ ಹಳ್ಳ ಅಲ್ಲಿಂದ ನೀರು ತರಲು ಬಿದಿರಿನಿಂದ ಮಾಡಿದ ಉಪಕರಣ ಬಳಸುತ್ತಿದ್ದರು. ಆ ಕಾಲದಲ್ಲಿ ಅವರ ಗುಡಿಸಲಲ್ಲಿ ಒಂದು ದಿನನೂ ಬೆಂಕಿ ತಪ್ಪಿದಿಲ್ಲವೆನ್ನುತ್ತಾರೆ ಊರಿನವರು. ಯಾಕೆಂದರೆ ಬೇಕಾದಷ್ಟು ಕಟ್ಟಿಗೆಗಳು ಸಿಗುತ್ತಿದ್ದವು.

ಆನೆ ದಾಳಿ ಮಾಡಿದರೆ ಏನು ಮಾಡುತ್ತಾರೆ?
ಸುಳ್ಯ ತಾಲೂಕಿನ ಅನೇಕ ಗ್ರಾಮಗಳು ಆನೆಗಳ ಸಾಮ್ರಾಜ್ಯ.ಕೆಂಚಪ್ಪ ವಾಸಿಸುತ್ತಿರುವ ಬಾಳೆಡಿ ಕಾಡಲ್ಲಿ ಅದೆಷ್ಟೋ ಬಾರಿ ದಾಳಿ ಮಾಡಿ ಇವರ ಸೂರನ್ನೆಲ್ಲ ನಾಶ ಮಾಡಿವೆ ಆದರೂ ಕುಗ್ಗದೆ ಮತ್ತೆ ಮತ್ತೆ ಗುಡಿಸಲು ನಿರ್ಮಿಸಿದ್ದಾರೆ. ಆನೆ ದಾಳಿ ಮಾಡುವಾಗ ಪಕ್ಕದಲ್ಲೇ ಇರುವ ದೊಡ್ಡ ಮರವೊಂದಕ್ಕೆ ಹತ್ತಿ ತನ್ನ ಜೀವವನ್ನು ಉಳಿಸಿಕೊಂಡಿದ್ದಾರೆ. ಆದರೆ ಕಳೆದ ವರ್ಷ ಆನೆ ಇವರನ್ನು ಎತ್ತಿ ಬಿಸಾಕಿದ್ದಾಗ ಇವರ ಸೋದರ ಮನೆಗೆ ಕರೆದೊಯ್ದಿದ್ದು ಬಿಟ್ಟರೆ ಉಳಿದಂತೆ ಕಾಡಲ್ಲೇ ವಾಸ.

ಕಾಡು ಮಾಯವಾದರೂ ಊರಿಗೆ ಹಿಂತಿರುಗಿಲ್ಲ
ಈಗ ಕಾಲ ಬದಲಾಗಿದೆ ರಣ ಕಾಡು ಮಾಯವಾಗಿದೆ. ಕಾಲು ದಾರಿ ಮಾರ್ಗವಾಗಿ ಮಾರ್ಪಟ್ಟಿದೆ. ಹಿಂದೆ ಇದ್ದ ಸೊಪ್ಪಿನ ಗುಡಿಸಲು ಇಲ್ಲ. ಈಗ ಮಲಗುತ್ತಿರುವುದು ಕಲ್ಲಿನ ಹಾಸಿಗೆ ಮೇಲೆ, ಕೆಂಚಪ್ಪ ಅವರಿಗೆ ಈಗ ಮುಪ್ಪು, ದೇಹದಲ್ಲಿ ಶಕ್ತಿ ಕುಂದಿದೆ. ಅದೆಷ್ಟೋ ಬಾರಿ ಅರಣ್ಯ ಇಲಾಖೆ ಬಂದು ಇವರ ಗುಡಿಸಲನ್ನು ಕೆಡವಿ ಹೋಗಿದ್ದಾರೆ ಆದರೂ ಇವರು ಅಲ್ಲಿಂದ ಕದಲಲಿಲ್ಲ. ಮಳೆಗಾಲದಲ್ಲಿ ಮನೆಯವರು ಬಂದು ಗುಡಿಸಲು ನಿರ್ಮಿಸಿ ಕೊಟ್ಟು ಹೋಗುತ್ತಾರೆ.

ಕಾಡು ಉಳಿಸಲು ಗಿಡ, ಮರ ಪೋಷಿಸುವ ಕೆಂಚಪ್ಪ
ತಾನು ವಾಸಿಸುವ ಪ್ರದೇಶದ ಸುತ್ತ ಮುತ್ತ ಮಾವಿನ ಗಿಡ, ತೆಂಗಿನ ಗಿಡ ನೆಟ್ಟಿದ್ದಾರೆ, ಅನೇಕ ಬಾರಿ ಆನೆಗಳ ಹಾವಳಿಗೆ ತುತ್ತಾಗಿ ತೆಂಗಿನ ಮರಗಳು ನಾಶವಾಗಿವೆ. ಮಾವಿನ ಮರಗಳು ಫಲಕೊಡುತ್ತಿವೆ. ಈಗ ಒಂದು ಹೊತ್ತಿನ ಊಟಕ್ಕಾಗಿ ಸಂಬಂಧಿಕರ ಮನೆಗಳಿಗೆ ಹೋಗುತ್ತಾರೆ, ಸುಮ್ಮನೆ ಕೈ ಬಿಸಿಕೊಂಡು ಹೋಗುವುದಿಲ್ಲ. ಸೊಪ್ಪು ತಪ್ಪಿದರೆ ಕಟ್ಟಿಗೆಯನ್ನು ಹೊತ್ತುಕೊಂಡು ಅವರ ಮನೆಯ ಅಂಗಳಕ್ಕೆ ಹಾಕಿ ಊಟ ಮಾಡಿ ಬರುತ್ತಾರೆ.

ಚಿನ್ನಪ್ಪ ಗೌಡ , ಕೆಂಚಪ್ಪ ಅವರ ತಮ್ಮ ಹೇಳಿಕೆ
"ಮನೆಗೆ ಕರೆತರಲು ಅದೆಷ್ಟೋ ಪ್ರಯತ್ನ ಮಾಡಿ ಸೋತು ಹೋಗಿದ್ದೇವೆ. ಒತ್ತಾಯ ಪೂರ್ವಕವಾಗಿ ಮನೆಗೆ ಬಂದರೂ ಸ್ಪಲ್ಪ ಹೊತ್ತು ತನ್ನಷ್ಟಕ್ಕೆ ಇದ್ದು ಮತ್ತೆ ರಾತ್ರಿ ಮಲಗಲು ಅಲ್ಲಿಗೆ ಹೋಗುತ್ತಾನೆ. ಕಳೆದ ವರ್ಷ ಆನೆ ಎತ್ತಿ ಬಿಸಾಕಿದಾಗ ಮನೆಗೆ ಕರೆ ತಂದಿದ್ದೆ 15 ದಿನ ಕಷ್ಟದಲ್ಲಿ ಮನೆಯಲ್ಲಿದ್ದ. ಮಳೆಗಾಲ ಗುಡಿಸಲು ನಿರ್ಮಿಸಿ ಕೊಡಲು ಹೋಗುತ್ತೇವೆ. ಇಲ್ಲಿವರೆಗೆ ಯಾವುದೇ ಆರೋಗ್ಯದ ಸಮಸ್ಯೆ ಬಂದಿಲ್ಲ. ಅಂದು ಈ ರೀತಿ ಆದಾಗ ಅದೆಷ್ಟೋ ಕಡೆಗಳಿಗೆ ಮದ್ದಿಗೆಂದು ಕರೆದುಕೊಂಡು ಹೋಗಿದ್ದೇವೆ ಆದರೂ ಸರಿ ಹೋಗಿಲ್ಲ.

ಊರಿನವರರಾದ ಭವಾನಿಶಂಕರ್ ಅಭಿಪ್ರಾಯ
ಇವರಿಂದ ಯಾರಿಗೂ ತೊಂದರೆಯಾಗಿಲ್ಲ, ಊರಿನವರು ಸಹಕಾರ ನೀಡುತ್ತಾರೆ ತಿನ್ನಲು ಏನಾದ್ರು ಈಗೀಗ ತಂದು ಕೊಡುತ್ತಾರೆ. ಮಾತು ಬಹಳ ಬಹಳ ಕಡಿಮೆ ಒಂದೆರಡು ಅಷ್ಟೇ. ಹೆಚ್ಚು ಮಾತನಾಡಿದರೆ ಮಾತಲ್ಲಿ ಸ್ಪಷ್ಟತೆ ಇಲ್ಲ ಮಾನಸಿಕವಾಗಿ ಕುಗ್ಗಿದ್ದಾರೆ. - ಭವಾನಿಶಂಕರ ಕುದನಕೋಡಿ ಸ್ಥಳೀಯರು.

ಕೆಂಚಪ್ಪ ಅವರ ಬಗ್ಗೆ ಸ್ಥಳೀಯರ ಅಭಿಪ್ರಾಯ
ಕಾಡಿಗೆ ಹೋದಾಗ ಸೋಂಕು ಆಯಿತು ಅಂತ ಹೇಳ್ತಾರೆ. ರಕ್ಕಸರು ಮಾಂಸ ತಿನ್ನುತ್ತಿರುವಾಗ ಇವರು ಹೋಗಿದ್ದರು ಹಾಗಾಗಿ ಈ ರೀತಿ ಆಯಿತು ಎಂದು ಹಿರಿಯರು ಹೇಳುತ್ತಾರೆ. ವಿಶೇಷ ಅಂದರೆ ಇತ್ತೀಚಿನ ವರ್ಷಗಳವರೆಗೆ ಇವರ ಗುಡಿಸಲಿನಲ್ಲಿ ಬೆಂಕಿ ಆರಿದ್ದಿಲ್ಲ, ಬೆಂಕಿಗೆ ಗೆಡ್ಡೆ ಗೆಣಸು ಹಾಕಿ ತಿನ್ನುತ್ತಿದ್ದರು. ಈಗ ಪ್ರಾಯವೂ ಆಯ್ತು ಬೆಂಕಿ ಆರಿದೆ - ಮನಮೋಹನ ಗೌಡ ಪುರ ಸ್ಥಳೀಯರು.
ಕಾಡಿನಲ್ಲೇ ಉಳಿದ ಕೆಂಚಪ್ಪನ ಕಥೆ ಸುದ್ದಿ ದನಿ
ಕಾಡಿನಲ್ಲೇ ಉಳಿದ ಕೆಂಚಪ್ಪನ ಸಂಕ್ಷಿಪ್ತ ಕಥೆ ಸುದ್ದಿ ದನಿಯಲ್ಲಿ ವಾಗಿ ಆಲಿಸಿ












Click it and Unblock the Notifications