ಇಲ್ಲಿಯೇ ಲಸಿಕೆ ಕೊರತೆ ಇರುವಾಗ ಪಾಕ್ಗೆ ಪೂರೈಸಿದ್ದೇಕೆ? - ಕಾಂಗ್ರೆಸ್ ಶಾಸಕ ಖಾದರ್ ಪ್ರಶ್ನೆ
ಮಂಗಳೂರು, ಮೇ 22: ನಮ್ಮ ದೇಶದಲ್ಲಿ ಉತ್ಪಾದನೆಯಾಗುವ ಲಸಿಕೆಯನ್ನು ನಮ್ಮ ದೇಶದ ಹಿರಿಯ ನಾಗರಿಕರಿಗೆ ನೀಡದೆ ಪಾಕಿಸ್ತಾನ, ಬಾಂಗ್ಲಾದೇಶಕ್ಕೆ ನೀಡಿದ್ದೇಕೆ ಎಂದು ಮಂಗಳೂರು ಕಾಂಗ್ರೆಸ್ ಶಾಸಕ ಯು ಟಿ ಖಾದರ್ ಕೇಂದ್ರದ ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಖಾದರ್, ಕಳೆದ ಐದಾರು ತಿಂಗಳಿನಿಂದ ವಿಶ್ವದಲ್ಲಿ ೨೨ ಕಂಪನಿಗಳು ಲಸಿಕೆಯ ಉತ್ಪಾದನೆ ಮಾಡುತ್ತಿದೆ. ಆದರೆ ಬಿಜೆಪಿ ಸರ್ಕಾರವೇಕೆ ಭಾರತದಲ್ಲಿ ಅವಕಾಶ ನೀಡಿಲ್ಲ? ಬಳಿಕ ಬರೀ ಸ್ಪುಟ್ನಿಕ್ ಕಂಪನಿಗೆ ಮಾತ್ರ ಭಾರತದಲ್ಲಿ ಲಸಿಕೆ ಮಾರುಕಟ್ಟೆ ನಡೆಸಲು ಅವಕಾಶ ನೀಡಿದ ಉದ್ದೇಶವೇನು ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಈ ಲಸಿಕೆ ವಿಚಾರದಲ್ಲಿ ಪಾರದರ್ಶಕತೆ ಯಾಕಿಲ್ಲ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಶಾಸಕ, ಲಸಿಕೆಯ ಪ್ರಮಾಣ ಪತ್ರದಲ್ಲಿ ಫೋಟೋ ಭಿತ್ತರಿಸುವ ಮೂಲಕ ರಾಜಕೀಯ ಮಾಡುವುದು ಸರಿಯಲ್ಲ ಎಂದು ಮೋದಿ ಸರ್ಕಾರವನ್ನು ಟೀಕಿಸಿದರು.

ಇದು ನಿರಂಕುಶಾಧಿಕಾರಿ ಆಡಳಿತವೇ ಅಥವಾ ಪ್ರಜಾಪ್ರಭುತ್ವ ಆಡಳಿತವೇ? ಕೊರೊನಾ ಸೋಂಕು ಪರಿಸ್ಥಿತಿ ಈ ಮಟ್ಟಕ್ಕೆ ತಲುಪಿದ್ದರೂ ಕೇಂದ್ರ ಸಚಿವರುಗಳು ಎಲ್ಲಿದ್ದಾರೆ ಎಂದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲೇ ಟೂಲ್ ಕಿಟ್ ವಿಚಾರದಲ್ಲಿ ಮಾತನಾಡಿದ ಖಾದರ್, ಟೂಲ್ ಕಿಟ್ ಎಲ್ಲ ಪಕ್ಷದಲ್ಲಿರುವ ಪಾರದರ್ಶಕ ದಾಖಲೆ. ಈ ಆಧುನಿಕ ತಂತ್ರಜ್ಞಾನದಲ್ಲಿ ಎಲ್ಲ ಪಕ್ಷಗಳು ಈ ಟೂಲ್ ಕಿಟ್ ಬಳಸುತ್ತದೆ. ಆದರೆ ಬಿಜೆಪಿಯು ಕಾಂಗ್ರೆಸ್ ಟೂಲ್ ಕಿಟ್ ಅನ್ನು ನಕಲಿ ಮಾಡಿ ಕಾಂಗ್ರೆಸ್ ಅನ್ನು ದೂಷಿಸಲು ಪ್ರಾರಂಭಿಸಿ, ಕೊನೆಗೆ ಅವರೆ ಸಿಕ್ಕಿಬಿದ್ದಿದ್ದಾರೆ. ಅವರ ನಿಜವಾದ ಬಣ್ಣ ಇಂದು ಬಯಲಾಗಿದೆ. ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಪೊಲೀಸ್ ಆಯುಕ್ತರಿಗೆ ದೂರು ನೀಡಿ ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಚಿವೆ ಸ್ಮತಿ ಇರಾನಿ, ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೇರಿದಂತೆ ಸೇರಿದಂತೆ ಹಲವು ನಾಯಕರ ಮೇಲೆ ದೂರು ದಾಖಲು ಮಾಡಲಾಗಿದೆ. ಪ್ರಸ್ತುತ ಅವರದ್ದೆ ಸರ್ಕಾರವಿರುವಾಗ ತನಿಖೆ ನಡೆಸಲಿ ಎಂದು ಸವಾಲೆಸೆದರು.
ಬಿಜೆಪಿ ನಾಯಕರು ಅವರ ಪಕ್ಷ ಉಳಿಸಲು ಆಕ್ಸಿಜನ್ ಉಳಿಸಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಬಿಜೆಪಿ ನಾಯಕರಿಗೆ ಕಳಂಕ ಹೆಸರು ಬರುವ ಸಂದರ್ಭದಲ್ಲಿ ಬಿಜೆಪಿಗರು ಜನರ ಗಮನವನ್ನು ಬೇರೆಡೆ ತಿರುವುವ ಯತ್ನ ಮಾಡುತ್ತಾರೆ. ಆದರೆ ಈ ಬಾರಿ ಆ ಪ್ರಯತ್ನ ಮಾಡಿ ಇಡೀ ಜಗತ್ತಿನ ಮುಂದೆ ಸಿಕ್ಕಿ ಬಿದ್ದಿದ್ದಾರೆ. ಇದರಿಂದಾಗಿ ಬಿಜೆಪಿ ಪಕ್ಷವೇ ನಾಚಿಕೆ ಪಡುವಂತಾಗಿದೆ ಎಂದು ಲೇವಡಿ ಮಾಡಿದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications