ಪಿಎಫ್ಐ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್, ಕಮಿಷನರ್ ವರ್ಗಾವಣೆಗೆ ಆಗ್ರಹ
ಪಿಎಫ್ಐ ಕಾರ್ಯಕರ್ತರ ಮೇಲಿನ ಲಾಠಿಚಾರ್ಜ್ ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಕಮಿಷನರ್ ಎಂ ಚಂದ್ರಶೇಖರ್ ವರ್ಗಾವಣೆ ಮಾಡುವಂತೆ ಸ್ವತಃ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ.
ಮಂಗಳೂರು, ಏಪ್ರಿಲ್ 5: ಪಿಎಫ್ಐ ಕಾರ್ಯಕರ್ತರ ಮೇಲಿನ ಲಾಠಿಚಾರ್ಜ್ ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಕಮಿಷನರ್ ಎಂ ಚಂದ್ರಶೇಖರ್ ವರ್ಗಾವಣೆ ಮಾಡುವಂತೆ ಸ್ವತಃ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ.
ಮಂಗಳವಾರ ಮಂಗಳೂರು ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಚ್ ನಡೆಸಿದ್ದರು. ಇದರಲ್ಲಿ 11 ಪೊಲೀಸರು, 65ಕ್ಕೂ ಹೆಚ್ಚು ಕಾರ್ಯಕರ್ತರು ಗಾಯಗೊಂಡಿದ್ದರು. 98 ಕಾರ್ಯಕರ್ತರನ್ನು ಬಂಧಿಸಲಾಗಿತ್ತು.[ಮಂಗಳೂರು: ಪಿಎಫ್ಐ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್, 100 ಜನ ವಶಕ್ಕೆ]

ಅಹ್ಮದ್ ಖುರೇಶಿ ಎಂಬಾತನ ಮೇಲೆ ಸಿಸಿಬಿ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಈ ಧರಣಿ ನಡೆಸಲಾಗಿತ್ತು.
ಪಿಎಫ್ಐ ಕಾರ್ಯಕರ್ತರ ಮೇಲೆ ಪೊಲೀಸರು ನಡೆಸಿದ ದಬ್ಬಾಳಿಕೆಯ ಪ್ರಹಾರವನ್ನು ಖಂಡಿಸಿ ಇಂದು ಮಂಗಳೂರು ನಗರದ ಬಂದರ್ನ ಝೀನತ್ ಬಕ್ಷ್ ಸಭಾಂಗಣದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನೊಳಗೊಂಡ ಸಭೆ ನಡೆಯಿತು.['ಅನುಮತಿ ಇಲ್ಲದೇ ಪ್ರತಿಭಟಿಸಿದ್ದಕ್ಕೆ ಲಾಠಿಚಾರ್ಜ್' - ಪೊಲೀಸ್ ಆಯುಕ್ತರ ಸ್ಪಷ್ಟನೆ]

ಈ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮೇಯರ್ ಅಶ್ರಫ್, ಪೊಲೀಸ್ ಇಲಾಖೆಗೆ 15 ದಿನಗಳ ಕಾಲಾವಕಾಶ ನೀಡಿದ್ದು, ಪೊಲೀಸರ ದೌರ್ಜನ್ಯದಿಂದ ಕಿಡ್ನಿಯನ್ನು ಕಳೆದುಕೊಂಡಿರುವ ಅಹ್ಮದ್ ಖುರೇಶಿಗೆ ಪರಿಹಾರವನ್ನು ಕೊಡಬೇಕು. ಮಾತ್ರವಲ್ಲದೆ ಸಂಪೂರ್ಣ ವೈದ್ಯಕೀಯ ಖರ್ಚನ್ನು ಸರಕಾರವೇ ಭರಿಸಬೇಕು. ಇದಲ್ಲದೆ ದೌರ್ಜನ್ಯ ಎಸಗಿರುವ ಸಿಸಿಬಿ ಪೊಲೀಸರನ್ನು ಅಮಾನತುಗೊಳಿಸಬೇಕು. ಈ ಘಟನೆಗೆ ಕಾರಣರಾಗಿರುವ ಪೊಲೀಸ್ ಕಮಿಷನರ್ ಎಂ.ಚಂದ್ರಶೇಖರ್ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಈಗಿರುವ ಸಿಸಿಬಿ ತಂಡವನ್ನು ಬರ್ಖಾಸ್ತುಗೊಳಿಸಿ ತಂಡಕ್ಕೆ ಹೊಸಬರ ನೇಮಕ ಮಾಡಬೇಕು. ಹಾಗೆಯೇ 15 ದಿನಗಳೊಳಗೆ ಬೇಡಿಕೆ ಈಡೇರದಿದ್ದರೆ ಮತ್ತೆ ಸಭೆ ಕರೆದು ಮುಂದಿನ ಹೋರಾಟಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅಶ್ರಫ್ ಎಚ್ಚರಿಕೆ ನೀಡಿದ್ದಾರೆ.
ಸಭೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಕಾಂಗ್ರೆಸ್ನ ಕಾರ್ಪೊರೇಟರ್ಗಳು, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಹಾಗೂ ಕಾಂಗ್ರೆಸ್ ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.












Click it and Unblock the Notifications