ಭಯೋತ್ಪಾದನೆ ವಿರುದ್ಧ ಹೋರಾಡಲು ಕಾಂಗ್ರೆಸ್ ನಾಯಕರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ: ಅಶೋಕ್ ಗೆಹ್ಲೋಟ್
ಮಂಗಳೂರು, ಮೇ. 02: ಭಯೋತ್ಪಾದನೆ ವಿರುದ್ಧ ಹೋರಾಡಲು ತಮ್ಮ ಪ್ರಾಣವನ್ನು ತ್ಯಜಿಸಿದ ನಾಯಕರನ್ನು ಕಾಂಗ್ರೆಸ್ ಪಕ್ಷ ಹೊಂದಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಂಗಳವಾರ ಹೇಳಿದ್ದಾರೆ. ಈ ಮೂಲಕ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ನ ಇತಿಹಾಸವು "ಭಯೋತ್ಪಾದನೆ ಮತ್ತು ಭಯೋತ್ಪಾದಕರನ್ನು ಓಲೈಸುವುದು" ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ ದಿನವೇ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಈ ಹೇಳಿಕೆ ನೀಡಿದ್ದಾರೆ.

"ಯಾವುದೇ ನಾಗರಿಕರು ಭಯೋತ್ಪಾದನೆಯನ್ನು ಒಪ್ಪಿತ್ತಾರೆಯೇ..? ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ, ಮತ್ತು ಪಂಜಾಬ್ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರು ಭಯೋತ್ಪಾದನೆ ವಿರುದ್ಧ ಹೋರಾಡಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಇಂತಹ ನಾಯಕರನ್ನು ಕಾಂಗ್ರೆಸ್ ಹೊಂದಿದೆ" ಎಂದು ಅಶೋಕ್ ಗೆಹ್ಲೋಟ್ ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುವಾಗ ಹೇಳಿದ್ದಾರೆ.
ಇನ್ನು, ಅಶೋಕ್ ಗೆಹ್ಲೋಟ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿಯ ಹಿರಿಯ ಶಾಸಕ ವಾಸುದೇವ್ ದೇವ್ನಾನಿ, "ಕಾಂಗ್ರೆಸ್ ಯಾವಾಗಲೂ ಭಯವನ್ನು ಹುಟ್ಟುಹಾಕಲು ಕೆಲಸ ಮಾಡಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿಯ ಸಮಯದಲ್ಲಿ ತಮ್ಮ ವಿರುದ್ಧ ಮಾತನಾಡಿದವರನ್ನು ಜೈಲಿಗೆ ಹಾಕಿದರು. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಾತನಾಡಲು ಸ್ವಾತಂತ್ರ್ಯ ನೀಡುತ್ತಿದೆ" ಎಂದು ಸಮರ್ಥಿಸಿಕೊಂಡಿದ್ದಾರೆ.

"ರಾಹುಲ್ ಗಾಂಧಿಯಾಗಲಿ ಅಥವಾ ಅಶೋಕ್ ಗೆಹ್ಲೋಟ್ ಆಗಲಿ, ಅವರು ಭಯೋತ್ಪಾದನೆಯ ಬಗ್ಗೆ ಮೃದುವಾಗಿದ್ದಾರೆ. ಅವರು ಪುಲ್ವಾಮಾ ದಾಳಿಯ ಬಗ್ಗೆ ಸೇನೆಯಿಂದ ಪುರಾವೆ ಕೇಳುತ್ತಿದ್ದಾರೆ. ಮುಖ್ಯಮಂತ್ರಿಗಳು ಮೊದಲು ಗುಜರಾತ್ಗೆ ಹೋಗಿ ಅವರ ಸರ್ಕಾರದ ಯೋಜನೆಗಳನ್ನು ಹೊಗಳಿ ಪ್ರಚಾರ ಮಾಡಿದರು. ಆದರೆ ಅಲ್ಲಿ ಸೋಲನ್ನು ಎದುರಿಸಿದರು ಮತ್ತು ಕರ್ನಾಟಕದಲ್ಲೂ ಅದೇ ನಡೆಯುತ್ತದೆ" ಎಂದು ವ್ಯಂಗ್ಯವಾಡಿದ್ದಾರೆ.
ಇತ್ತ, ಕರ್ನಾಟಕ ಚುನಾವಣೆ ಹಿನ್ನೆಲೆ ಬಿಡುಗಡೆಯಾಗಿರುವ ಬಿಜೆಪಿಯ ಪ್ರಣಾಳಿಕೆಯನ್ನು ಸುಳ್ಳಿನ ಕಂತೆ ಎಂದು ಕರೆದ ಅಶೋಕ್ ಗೆಹ್ಲೋಟ್, ಬಿಜೆಪಿ ಎಂದಿಗೂ ಭರವಸೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿದ್ದಾರೆ. "ಅವರು ಇಲ್ಲಿಯವರೆಗೆ ಭರವಸೆ ನೀಡಿರುವುದನ್ನು ಎಂದಿಗೂ ಈಡೇರಿಲ್ಲ ಮತ್ತು ಸಾರ್ವಜನಿಕರಿಗೆ ಅವರ ಮೇಲೆ ವಿಶ್ವಾಸವಿಲ್ಲ" ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪ್ರಣಾಳಕೆಯನ್ನು ಸಮರ್ಥಿಸಿಕೊಂಡಿರುವ ಅವರು, "ಕಾಂಗ್ರೆಸ್ ತನ್ನ ಭರವಸೆಗಳನ್ನು ಈಡೇರಿಸುತ್ತದೆ. ಇಂದು ರಾಜಸ್ಥಾನವು ಚಿರಂಜೀವಿ ಯೋಜನೆಯಡಿಯಲ್ಲಿ ಪ್ರತಿ ಕುಟುಂಬವು 25 ಲಕ್ಷ ರೂಪಾಯಿಯ ಆರೋಗ್ಯ ವಿಮೆಯನ್ನು ಹೊಂದಿರುವ ಮಾದರಿ ರಾಜ್ಯವಾಗಿದೆ" ಎಂದು ಉದಾಹರಣೆ ನೀಡಿದ್ದಾರೆ.












Click it and Unblock the Notifications