24 ವರ್ಷ ಯು. ಟಿ. ಖಾದರ್ ಜೊತೆಗಿದ್ದ ನಾಯಕ ಬಿಜೆಪಿ ಸೇರ್ಪಡೆ!
ಮಂಗಳೂರು, ಮಾರ್ಚ್ 12; ಮಾಜಿ ಸಚಿವ, ಕಾಂಗ್ರೆಸ್ ನಾಯಕ ಯು. ಟಿ. ಖಾದರ್ ಪ್ರತಿನಿಧಿಸುವ ಮಂಗಳೂರಿನ ಉಳ್ಳಾಲದ ಕಾಂಗ್ರೆಸ್ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಖಾದರ್ ಪರಮಾಪ್ತ, ಕಳೆದ 24 ವರ್ಷಗಳಿಂದ ಯು. ಟಿ. ಖಾದರ್ ಜೊತೆಗಿದ್ದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಂತೋಷ್ ಶೆಟ್ಟಿ ಕಾಂಗ್ರೆಸ್ ತೊರೆಯುತ್ತಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿದ ಸಂತೋಷ್ ಶೆಟ್ಟಿ ಯು. ಟಿ. ಖಾದರ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ನ ನೂರಕ್ಕೂ ಅಧಿಕ ಕಾರ್ಯಕರ್ತರ ಜೊತೆ ಬಿಜೆಪಿ ಸೇರುತ್ತೇವೆ ಎಂದು ಬಹಿರಂಗವಾಗಿ ಘೋಷಣೆ ಮಾಡಿದರು. ಕಾಂಗ್ರೆಸ್ ತೊರೆಯುವುದಕ್ಕೆ ಯು. ಟಿ. ಖಾದರ್ ಭ್ರಷ್ಟಾಚಾರವೇ ಕಾರಣ ಎಂದು ದೂರಿದ್ದಾರೆ.
"ಯು. ಟಿ. ಖಾದರ್ ಅತ್ಯಂತ ಭ್ರಷ್ಟ ರಾಜಕಾರಣಿ. ಅವರ ನಡವಳಿಕೆಯಿಂದ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೇಮೆ ನೀಡಿದ್ದೇವೆ. ಅತೀ ಶೀಘ್ರದಲ್ಲಿ ಎಲ್ಲರೂ ಬಿಜೆಪಿ ಸೇರುತ್ತೇವೆ. ಉಳ್ಳಾಲ ಕ್ಷೇತ್ರ ಅಭಿವೃದ್ಧಿಯೇ ಆಗಿಲ್ಲ. ಖಾದರ್ ಅಲ್ಪ ಸ್ವಲ್ಪ ಅನುದಾನದ ಕಾಮಗಾರಿ ಮಾಡಿ ಫೋಸ್ ನೀಡುತ್ತಾರೆ. ಯು. ಟಿ. ಖಾದರ್ಗೆ ದೇಶಾದ್ಯಂತ ಮನೆ ಇದೆ. ಆದರೆ ಉಳ್ಳಾಲದ ಬಡವರಿಗೆ ಮನೆ ಇಲ್ಲ" ಎಂದು ಸಂತೋಷ್ ಶೆಟ್ಟಿ ಆಕ್ರೋಶ ವ್ಯಕ್ಯಪಡಿಸಿದ್ದಾರೆ.

"ಯು. ಟಿ. ಖಾದರ್ ಕಾರ್ಯವೈಖರಿಗೆ ಬೇಸತ್ತಿದ್ದೇವೆ. ಹೀಗಾಗಿ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇವೆ. ಖಾದರ್ ನಾಲ್ಕು ಬಾರಿ ಉಳ್ಳಾಲದಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕೇವಲ ಶಾಸಕರಾಗಿರೋದು ಮಾತ್ರವಲ್ಲದೇ ವಸತಿ ಸಚಿವರಾಗಿ, ಆರೋಗ್ಯ ಸಚಿವರಾಗಿ, ನಗರಾಭಿವೃದ್ಧಿ ಸಚಿವರಾಗಿ, ದಕ್ಷಿಣ ಕನ್ನಡ ಉಸ್ತುವಾರಿ ಸಚಿವರಾಗಿಯೂ ಅಧಿಕಾರದಲ್ಲಿದ್ದರು" ಎಂದರು.
"ಸಚಿವರಾಗಿದ್ದ ಆರು ವರ್ಷದ ಅವಧಿಯಲ್ಲಿ ಅಭಿವೃದ್ಧಿ ಮಾಡುವ ಅವಕಾಶ ಇತ್ತು. ಆದರೆ ಖಾದರ್ ಜನರ ಮನಸ್ಸಿನಲ್ಲಿ ಉಳಿಯುವಂತಹ ಯಾವುದೇ ಕೆಲಸ ಮಾಡಿಲ್ಲ" ಎಂದು ಸಂತೋಷ್ ಶೆಟ್ಟಿ ಆರೋಪ ಮಾಡಿದರು.
"ರಾಜ್ಯದ 224 ಶಾಸಕರ ಪೈಕಿ ಅತೀ ಭ್ರಷ್ಟ ರಾಜಕಾರಣಿ ಯು. ಟಿ. ಖಾದರ್ ಆಗಿದ್ದಾರೆ. ಖಾದರ್ ಅಬ್ಬಕ್ಕ ನಾಡು ಉಳ್ಳಾಲ ಅಂತಾ ಹೇಳುತ್ತಾರೆ. ಆದರೆ ಉಳ್ಳಾಲದಲ್ಲಿ ಅಬ್ಬಕ್ಕನ ಹೆಸರಿನಲ್ಲಿ ಮಹಿಳಾ ಕಾಲೇಜು ಮಾಡಿಲ್ಲ. ಮನುಷ್ಯತ್ವ ಇಲ್ಲದ, ಕರುಣೆ ಇಲ್ಲದ, ಮಾನವೀಯತೆ ಇಲ್ಲದ ಸ್ವಾರ್ಥಿ ಯು. ಟಿ. ಖಾದರ್" ಎಂದು ವಾಗ್ದಾಳಿ ನಡೆಸಿದರು.
"ಖಾದರ್ ಜನಸಾಮಾನ್ಯರ ಸಮಸ್ಯೆಗೆ ಸ್ಪಂದನೆ ಮಾಡುವುದಿಲ್ಲ. ಕೇವಲ ಮದುವೆ, ಮುಂಜಿ, ಮಗು ನಾಮಕರಣಕ್ಕೆ ಹೋಗುತ್ತಾರೆ. ಜನರ ಸಮಸ್ಯೆ ಏನು? ಅಂತಾ ಖಾದರ್ ಕೇಳಿದವರಲ್ಲ. ರೋಡ್ ಶೋ ಮಾಡಿ ಸರಳ ರಾಜಕಾರಣಿ ಅಂತಾ ಬಿಂಬಿಸಲು ಹೊರಟಿದ್ದಾರೆ. ಖಾದರ್ ಸುತ್ತಾ ಹೊಗಳುಭಟ್ಟರು ಮತ್ತು ಕೋಮುವಾದಿಗಳ ಕೋಟೆ ಇದೆ. 24 ವರ್ಷ ಕಾಂಗ್ರೆಸ್ನಲ್ಲಿ ಕೆಲಸ ಮಾಡಿದ್ದೇನೆ. ಇವರ ಜೊತೆ ರಾಜಕಾರಣ ಮಾಡವುದು ಆತ್ಮಹತ್ಯೆ ಮಾಡಿಕೊಂಡ ರೀತಿ" ಎಂದು ಸಂತೋಷ್ ಶೆಟ್ಟಿ ಹೇಳಿದ್ದಾರೆ.












Click it and Unblock the Notifications