ಮಂಗಳೂರಿನ ಕಾಂಗ್ರೆಸ್ ಮುಖಂಡನಿಗೆ ರವಿ ಪೂಜಾರಿಯಿಂದ ಬೆದರಿಕೆ ಕರೆ
ಮಂಗಳೂರು, ಸೆಪ್ಟೆಂಬರ್.19: ಮಂಗಳೂರಿನ ಉದ್ಯಮಿಗಳಿಗೆ ಭೂಗತ ಲೋಕದಿಂದ ಹಫ್ತಾಕ್ಕಾಗಿ ಜೀವ ಬೆದರಿಕೆ ಕರೆಗಳು ಬರುವುದು ಮುಂದುವರೆದಿದೆ. ಈ ಕರೆಗಳನ್ನು ಟ್ರೆಸ್ ಮಾಡಲು ಪೊಲೀಸ್ ಇಲಾಖೆ ಪ್ರಯತ್ನ ಮುಂದುವರೆಸಿದ್ದಾರೆ. ಆದರೆ ಈ ನಡುವೆ ಮತ್ತೊಮ್ಮೆ ಭೂಗತ ಲೋಕದ ಪಾತಕಿಗಳು ಸದ್ದುಮಾಡಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಮುಖಂಡ ಹಾಗು ಪ್ರಸಿದ್ಧ ಉದ್ಯಮಿ ಕಣಚೂರು ಮೋನು ಅವರಿಗೆ ಭೂಗತ ಲೋಕದ ಡಾನ್ ಒಬ್ಬನ ಹೆಸರಿನಿಂದ ಕರೆ ಬಂದಿದ್ದು, ಹಫ್ತಾ ನೀಡುವಂತೆ ಬೆದರಿಕೆ ಹಾಕಲಾಗಿದೆ.
ನಿನ್ನೆ ಮಂಗಳವಾರ (ಸೆ.18) ಕಣಚೂರು ಮೋನು ಅವರಿಗೆ ಥಾಯ್ ಲ್ಯಾಂಡ್ ನಿಂದ ಕರೆ ಮಾಡಿರುವ ಭೂಗತ ಲೋಕದ ಡಾನ್ ಎಂದೇ ಹೇಳಲಾಗುವ ರವಿ ಪೂಜಾರಿ ಹೆಸರಿನಲ್ಲಿ ದೂರವಾಣಿ ಕರೆ ಬಂದಿದ್ದು, ರಾಜಕೀಯ ಚಟುವಟಿಕೆ ಸ್ಥಗಿತಗೊಳಿಸಬೇಕು. ಬದುಕಬೇಕಾದರೆ ಹಫ್ತಾ ನೀಡಬೇಕೆಂದು ಕರೆಮಾಡಲಾಗಿದೆ.

ಈ ಕರೆ ದೂರದ ಥಾಯ್ ಲ್ಯಾಂಡ್ ನಿಂದ ಬಂದಿದೆ ಎಂದು ಹೇಳಲಾಗಿದೆ. ಅವರಿಗೆ ಕೆಟ್ಟ ಭಾಷೆ ಪ್ರಯೋಗಿಸಿ ಬೆದರಿಕೆ ಹಾಕಲಾಗಿದೆ. ಈ ಕುರಿತು ಕಣಚೂರು ಮೋನು ಮಂಗಳೂರು ಹೊರವಲಯದ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರವಿಪೂಜಾರಿ ಹೆಸರಲ್ಲಿ ಕರೆಮಾಡಿದ್ದ ಮಾಡಿದ್ದ ವ್ಯಕ್ತಿ ಖುದ್ದು ರವಿ ಪೂಜಾರಿಯೋ ಅಥವಾ ಆತನ ಸಹಚರರರೋ ಗೊತ್ತಾಗಿಲ್ಲ. ಅದರೆ ಕರೆಮಾಡಿದ ವ್ಯಕ್ತಿ ಮೋನು ಅವರಿಗೆ ಧಮಕಿ ಹಾಕಿದ್ದು ರಾಜಕೀಯ ಚಟುವಟಿಕೆಗಳಿಂದ ದೂರ ಇರಬೇಕು. ಮನೆ ಬಿಟ್ಟು ಹೊರ ಹೋದರೆ ಜೋಕೆ. ನಾನು ಹೇಳಿದಂತೆ ಕೇಳಬೇಕು ಎಂದು ಬೆದರಿಕೆ ಹಾಕಿದ್ದಾರೆ.
ಕರೆಯನ್ನು ಮೋನು ಅರ್ಧದಲ್ಲೇ ಕಟ್ ಮಾಡಿದ್ದಾರೆ. ಆದರೆ ಅದರ ನಂತರ ಸುಮಾರು 6 ಬಾರಿ ಸತತ ಕರೆಗಳು ಬಂದರೂ ಮೋನು ಅವರು ಕರೆಯನ್ನು ಸ್ವೀಕರಿಸಿಲ್ಲ. ಕಣಚೂರು ಮೋನು ಅವರಿಗೆ ಬಂದ ದೂರವಾಣಿ ಕರೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕಣಚೂರು ಮೋನು ರಾಜಕೀಯದಲ್ಲಿ ಮಾತ್ರವಲ್ಲದೇ ಇತ್ತೀಚೆಗೆ ವೈದ್ಯಕೀಯ ಕ್ಷೇತ್ರದಲ್ಲೂ ಉದ್ಯಮ ವಿಸ್ತರಿಸಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಇತ್ತೀಚೆಗೆ ಆಸ್ಪತ್ರೆ, ವೈದ್ಯಕೀಯ ಕಾಲೇಜು ಆರಂಭಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್ ಸಲಹ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.












Click it and Unblock the Notifications