Nalin Kumar Kateel: ಕಾಂಗ್ರೆಸ್ ಮೋಸಗಾರರ ಪಾರ್ಟಿ ಎಂದ ನಳಿನ್ ಕುಮಾರ್ ಕಟೀಲ್
ಮಂಗಳೂರು, ಜೂನ್, 01: ಕಾಂಗ್ರೆಸ್ ನಾಯಕರು ನಾವು ಅಧಿಕಾರಕ್ಕೆ ಬಂದ ತಕ್ಷಣ ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳಿದ್ದರು. ಆದರೆ ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವಾರವಾದರೂ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿಲ್ಲ. ಕಾಂಗ್ರೆಸ್ ಸುಳ್ಳುಗಾರರ ಪಾರ್ಟಿ, ಮೋಸಗಾರರ ಪಾರ್ಟಿ ಎಂದು ಜನರಿಗೆ ಸ್ಪಷ್ಟವಾಗಿದೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮಂಗಳೂರಿನಲ್ಲಿ ವಾಗ್ದಾಳಿ ನಡೆಸಿದರು.
ಚುನಾವಣೆ ವೇಳೆ ಖರ್ಗೆ, ರಾಹುಲ್ ಗಾಂಧಿ ಸೇರಿ ಪ್ರಮುಖರು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದರು. ಗ್ಯಾರಂಟಿ ಕಾರ್ಡ್ ಹಿಡಿದು ಇದು ಎಲ್ಲಾ ಜನರಿಗೆ ಉಪಯೋಗ ಎಂದು ಹೇಳಿದ್ದರು. ಆದರೆ ಈವರೆಗೂ ಅದನ್ನು ಜಾರಿಗೊಳಿಸದ ಕಾಂಗ್ರೆಸ್ ಜನರ ಬಳಿ ಕ್ಷಮೆ ಯಾಚನೆ ಮಾಡಿ ತಕ್ಷಣ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಬೇಕು. ಸಿದ್ಧರಾಮಯ್ಯಗೆ ಇದು ಆರ್ಥಿಕವಾಗಿ ಕಷ್ಟ ಎಂದು ಗೊತ್ತಿದೆ. ಆದರೂ ಹಣಕಾಸು ಸಚಿವರಾಗಿ ಅನುಭವ ಹೊಂದಿದ ಸಿದ್ಧರಾಮಯ್ಯ ಸುಳ್ಳು ಹೇಳಿದ್ದಾರೆ ಎಂದರು.

ಕಾಂಗ್ರೆಸ್ ಅಡ್ಡದಾರಿ ಹಿಡಿದು ಅಧಿಕಾರ ಪಡೆದಿದೆ. ಜನ ಆಕ್ರೋಶಗೊಂಡು ಆಗುವ ಅನಾಹುತಕ್ಕೆ ಸರ್ಕಾರವೇ ಹೊಣೆ ಆಗುತ್ತದೆ. ಈಗ ಕಾಂಗ್ರೆಸ್ ನಾಯಕರು ಜನರ ಹಾದಿ ತಪ್ಪಿಸಲು ಮೋದಿ 15 ಲಕ್ಷ ಕೊಟ್ಟಿದ್ದಾರೆಯೇ ಎಂದು ಕೇಳುತ್ತಿದ್ದಾರೆ. ಆದರೆ ಮೋದಿ ಯಾವತ್ತೂ ಗ್ಯಾರಂಟಿ ಕಾರ್ಡ್ ಕೊಟ್ಟಿಲ್ಲ. ಕಾಂಗ್ರೆಸ್ನವರ ಗ್ಯಾರಂಟಿ ಯೋಜನೆಯಿಂದ ಸರ್ಕಾರಿ ನೌಕರರು ಬೀದಿಯಲ್ಲಿ ಏಟು ತಿನ್ನುವ ಪರಿಸ್ಥಿರಿಯಿದೆ ಎಂದರು.
ಇನ್ನು ಮನೆಯೊಳಗೆ ಜಗಳ, ಮನೆಮನೆಗೆ ಬೆಂಕಿ ಹಾಕುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಈ ಗ್ಯಾರಂಟಿ ಯೋಜನೆ ಜಾರಿಗೆ ತರದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮತ್ತೊಂದೆಡೆ ದೇಶದಲ್ಲಿ 2014ರ ನಂತರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಚಿಂತನೆಯಡಿ ಬಿಜೆಪಿ ಸರ್ಕಾರ ಬಂದಿದೆ. ನಿರಂತರ ಒಂಭತ್ತು ವರ್ಷಗಳಿಂದ ಮೋದಿ ಆಡಳಿತ ಇದೆ. ದೇಶದಲ್ಲಿ ವಿಚಾರಗಳನ್ನು ಮಂಡಿಸಬೇಕಿದ್ದರೆ ಪರಿವರ್ತನೆಯ ಭಾರತದ ಉಲ್ಲೇಖದ ಅವಶ್ಯಕತೆಯಿದೆ ಎಂದರು.
2014ರ ನಂತರ ಮತ್ತು 2014ರ ಹಿಂದೆ ಎಂಬ ಎರಡು ಕಾಲಗಳಿವೆ. ಹಿಂದಿನ ಪ್ರಧಾನಿಗಳು ಭಾರತವನ್ನು ಸಿಂಗಾಪುರ ಮತ್ತು ಅಮೆರಿಕಾ ಮಾಡುತ್ತೇವೆ ಅಂತಾ ಭರವಸೆ ನೀಡಿದರು. ಆದರೆ ಈಗ ಅಮೆರಿಕಾದ ಚುನಾವಣೆಯಲ್ಲೂ ಭಾರತದ ಮಾಡೆಲ್ ಚರ್ಚೆಯಾಗುತ್ತಿದೆ. ಮುಂದೆ ಜಗತ್ತಿನ ನಾಯಕತ್ವ ಭಾರತ ವಹಿಸಿಕೊಳ್ಳುವ ಹಂತಕ್ಕೆ ಬಂದಿದ್ದೇವೆ. ಈ ಹಿಂದೆ ಪರಿವಾರ ವಾದ, ಕುಟುಂಬ ವಾದಗಳಿತ್ತು, ಆದರೆ ಈಗ ವಿಕಾಸ ವಾದ ಇದೆ. ಇವತ್ತು ಭಾರತ ಪರಿವರ್ತನೆಯ ಕಾಲಘಟ್ಟದಲ್ಲಿ ಇದೆ ಎಂದರು.
ಸಾಂಸ್ಕೃತಿಕ ಭಾರತದ ಕಲ್ಪನೆಯಡಿ ಕಾಶಿ ಕಾರೀಡರ್, ಅಯೋಧ್ಯೆ, ಕೇದಾರನಾಥ, ಯೋಗ ದಿನಾಚರಣೆವರೆಗೆ ಅಭಿವೃದ್ಧಿ ಆಗಿದೆ. ಪ್ರವಾಸೋದ್ಯಮ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ದೊಡ್ಡ ರೀತಿಯಲ್ಲಿ ಆಗಿದೆ. ಸರ್ಜಿಕಲ್ ಸ್ಟ್ರೈಕ್ನ ರೀತಿಯಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನೂ ನಿಯಂತ್ರಿಸಲಾಗಿದೆ. ಪೂರ್ಣ ಪ್ರಮಾಣದಲ್ಲಿ ಭಯೋತ್ಪಾದನೆ ಚಟುವಟಿಕೆ ನಿಗ್ರಹ ಮಾಡಲಾಗಿದೆ. ಈ ಮೂಲಕ ಕಾಶ್ಮೀರಕ್ಕೆ ಸ್ವಾವಲಂಬಿ ಕಲ್ಪನೆ ಕೊಡಲಾಗಿದೆ. ಹೀಗೆ ಸ್ವಾಭಿಮಾನಿ ಭಾರತ ಎದ್ದು ನಿಂತಿದೆ ಎಂದರು.
ಇವತ್ತು ದಿನಕ್ಕೆ 27 ಕಿಲೋ ಮೀಟರ್ ಚತುಷ್ಪಥ ರಸ್ತೆ ಆಗುತ್ತಿದೆ. ಬಿಜೆಪಿ ಸರ್ಕಾರ ಬಂದ ಮೇಲೆ 75 ಸಾವಿರ ಕಿಲೋ ಮೀಟರ್ ರಸ್ತೆ ಅಭಿವೃದ್ದಿ ಆಗಿದೆ. ಮೋದಿ ಸರ್ಕಾರದ ಅಧಿಕಾರದಲ್ಲಿ ಬಹಳಷ್ಟು ಪರಿವರ್ತನೆ ಆಗಿದೆ. ಹಾಗೆಯೆ ಕೇಂದ್ರ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಇಬ್ಬರು ಸಾಧಕರನ್ನು ಗುರುತಿಸಿದೆ. ಹರೇಕಳ ಹಾಜಬ್ಬ, ಮಹಾಲಿಂಗ ನಾಯ್ಕ ಅವರನ್ನು ಸರ್ಕಾರ ಗುರುತಿಸಿ ಪದ್ಮಶ್ರೀ ನೀಡಿದೆ. ಅಲ್ಲದೆ ಇವರಿಗೆ ಯಾವ ಪ್ರಭಾವವೂ ಇಲ್ಲದೇ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇನ್ನು ಮೋದೀ ನೇತೃತ್ವದ ಕೇಂದ್ರ ಸರ್ಕಾರ ಒಂಭತ್ತು ವರ್ಷದಲ್ಲಿ ಯಾವುದೇ ಭ್ರಷ್ಟಾಚಾರ ಇಲ್ಲದ ಆಡಳಿತ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಗೆ 35 ಸಾವಿರ ಕೋಟಿ ರೂಪಾಯಿ ಅನುದಾನ ಬಂದಿದೆ. ಮತ್ತೊಂದೆಡೆ ಸದ್ಯ 3,289 ಕೋಟಿ ರೂಪಾಯಿ ಕಾಮಗಾರಿ ನಡೆಯುತ್ತಾ ಇದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.












Click it and Unblock the Notifications