ದಕ್ಷಿಣ ಕನ್ನಡದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಗೆ ಸ್ವಪಕ್ಷಿಯರಿಂದಲೇ ಭಾರೀ ವಿರೋಧ
ಮಂಗಳೂರು, ಮಾರ್ಚ್ 25:ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆಯಾಗಿದೆ. ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ನಾಮ ಪತ್ರ ಸಲ್ಲಿಕೆಗೆ ಕ್ಷಣಗಣನೆ ಆರಂಭವಾಗಿದೆ.
ನಳಿನ್ ಕಮಾರ್ ಕಟೀಲ್ ವಿರುದ್ಧ ಯುವ ನಾಯಕನನ್ನು ಕಣಕ್ಕಿಳಿಸಿದ ಕಾಂಗ್ರೆಸ್ ಗೆ ಬಂಡಾಯದ ಆಘಾತ ಆರಂಭವಾಗಿದೆ. ಮಿಥುನ್ ರೈ ಗೆ ಟಿಕೆಟ್ ನೀಡಿರುವುದಕ್ಕೆ ಕಾಂಗ್ರೆಸ್ ಮುಖಂಡರಿಂದಲೇ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ
ಮಿಥುನ್ ರೈ ವಿರುದ್ಧ ದಕ್ಷಿಣ ಕನ್ನಡದ ಕಾಂಗ್ರೆಸ್ ಪಾಳಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಯುವ ಕಾಂಗ್ರೆಸ್ ನಾಯಕರ ಶೀತಲ ಸಮರ ಈ ಚುನಾವಣೆ ಸಂದರ್ಭದಲ್ಲಿ ಬಹಿರಂಗವಾಗಿ ಬೀದಿಗೆ ಬಂದಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿ ಪ್ರಚಾರಕ್ಕೆ ಧುಮುಕುತ್ತಿರುವಾಗಲೇ ಕಾಂಗ್ರೆಸ್ಸಿನ ಮತ್ತೊಂದು ಗುಂಪು ಮಿಥುನ್ ರೈ ವಿರುದ್ಧ ಕಿಡಿಕಾರಿದೆ.

ಕಾಂಗ್ರೆಸ್ ನ ಕಾರ್ಮಿಕ ಸಂಘಟನೆ ಇಂಟಕ್ ನ ಅಧ್ಯಕ್ಷ ಪುನಿತ್ ಶೆಟ್ಟಿ ಅವರು ಮಾತನಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುನೀತ್ ಶೆಟ್ಟಿ ಬಹಿರಂಗವಾಗಿಯೇ ಮಿಥುನ್ ರೈ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಿಥುನ್ ರೈ ಪಬ್ ದಂಧೆ ಸೇರಿದಂತೆ ಹಲವಾರು ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಪುನೀತ್ ಶೆಟ್ಟಿ ಆರೋಪಿಸಿದ್ದಾರೆ.
ಮಿಥುನ್ ರೈ ಒಬ್ಬ ಗುಂಡಾ, ಭೂಗತ ಜಗತ್ತಿನ ನಂಟಿದೆ. ಜಿಲ್ಲೆಯಲ್ಲಿ ತಲ್ಲಣ ಮೂಡಿಸಿದ್ದ ಕಾಂಗ್ರೆಸ್ ಮುಖಂಡ ಜಲೀಲ್ ಕರೋಪಾಡಿ ಹತ್ಯೆ ಪ್ರಕರಣದಲ್ಲಿ ಮಿಥುನ್ ರೈ ಪ್ರಮುಖ ಆರೋಪಿ ಎಂದು ಕಿಡಿಕಾರಿದ್ದು, ಕೋಮುಗಲಭೆಯಲ್ಲಿ ಮಿಥುನ್ ರೈ ಭಾಗವಹಿಸಿದ್ದಾರೆ ಎಂದು ಪುನೀತ್ ದೂರಿದ್ದಾರೆ.
ಮಿಥುನ್ ರೈ ಬದಲು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ನ್ನು ಪಕ್ಷದ ಹಿರಿಯರಿಗೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಪುನೀತ್ ಶೆಟ್ಟಿ ಸ್ವತಃ ವಿಡಿಯೋ ರೆಕಾರ್ಡ್ ಮಾಡಿ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ಕಾಂಗ್ರೆಸ್ ನಾಯಕರ ಆಂತರಿಕ ಕಲಹ ಬಹಿರಂಗವಾಗಿದ್ದು, ಮಿಥುನ್ ರೈ ವಿರುದ್ಧ ಬಿಜೆಪಿಗೆ ಪ್ರಮುಖ ಅಸ್ತ್ರ ಸಿಕ್ಕಂತಾಗಿದೆ.












Click it and Unblock the Notifications