ಕರಾವಳಿಯಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯೆ 'ಚೌಕಿದಾರ್' ಸ್ಟಿಕ್ಕರ್ ವಾರ್ ಶುರು
ಮಂಗಳೂರು, ಏಪ್ರಿಲ್ 02: ಕರಾವಳಿಯ ಜಿಲ್ಲೆಗಳಲ್ಲಿ ಬಿರು ಬಿಸಿಲಿನ ನಡುವೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉಡುಪಿ-ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಜಿದ್ದಾಜಿದ್ದಿಯ ಅಖಾಡ ಸಿದ್ಧಗೊಂಡಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಬ್ಬರದ ಪ್ರಚಾರ ಆರಂಭಿಸಿದ್ದು, ಮತದಾರರ ಓಲೈಕೆಗೆ ಮುಂದಾಗಿವೆ. ಈ ನಡುವೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಸ್ಟಿಕ್ಕರ್ ವಾರ್ ಆರಂಭವಾಗಿದ್ದು, ಇದು ಮುಂಬರುವ ದಿನಗಳಲ್ಲಿ ಘರ್ಷಣೆಗೂ ತಿರುಗುವ ಆತಂಕ ವ್ಯಕ್ತವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಚೌಕಿದಾರ್ ಪದವನ್ನು ಬಳಸಲು ಪ್ರಾರಂಭ ಮಾಡಿದ ದಿನದಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚೌಕಿದಾರ್ ಪದಕ್ಕೆ ತಿರುಗೇಟು ನೀಡಿದ್ದರು. ಮೋದಿ ವಿರುದ್ಧ ಪ್ರಚಾರಕ್ಕೆ ಹೋದಲ್ಲಿ ಬಂದಲ್ಲಿ "ಚೌಕಿದಾರ್ ಚೋರ್ ಹೇ" ಎಂದಿದ್ದರು.

ಅಲ್ಲದೇ ರಫೇಲ್, ನೀರವ್ ಮೋದಿ ಬ್ಯಾಂಕ್ ಗೋಲ್ ಮಾಲ್, ಅದಾನಿ, ಅಂಬಾನಿ ವಿಚಾರ ಪ್ರಸ್ತಾಪಿಸುತ್ತಾ 'ಚೌಕಿದಾರ್ ಚೋರ್ ಹೈ' ಎಂದು ಕಿಡಿಕಾರಿದ್ದರು. ಈ ನಡುವೆ ಮೋದಿ ತಮ್ಮ ಪ್ರತಿ ಭಾಷಣದಲ್ಲಿ ಚೌಕಿದಾರ್ ಪದವನ್ನು ಟ್ರಂಪ್ ಕಾರ್ಡ್ ಆಗಿ ಬಳಸುತ್ತಿದ್ದಾರೆ. ಆದರೆ ಈ ಚೌಕಿದಾರ್ ಪದವನ್ನು ಕಾಂಗ್ರೆಸ್ ಬಿಜೆಪಿ ವಿರುದ್ಧ ಪ್ರಚಾರಕ್ಕೆ ಬಳಸಿಕೊಳ್ಳತೊಡಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು 'ಮೆ ಬೀ ಚೌಕಿದಾರ್' ಎಂದು ಸ್ಟಿಕ್ಕರ್ ಗಳನ್ನು ವಾಹನಗಳಿಗೆ ಅಂಟಿಸಿ ತಿರುಗುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು 'ಚೌಕಿದಾರ್ ಚೋರ್ ಹೇ' ಎಂಬ ಸ್ಟಿಕ್ಕರ್ ಗಳನ್ನು ವಾಹನಗಳಿಗೆ ಅಂಟಿಸಿಕೊಂಡು ಓಡಾಡುತ್ತಿದ್ದಾರೆ.
ಈ ಮೂಲಕ ದಕ್ಷಿಣ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಎರಡೂ ಪಕ್ಷಗಳ ನಾಯಕರು ಸ್ಟಿಕ್ಕರ್ ಮೂಲಕವೇ ಪ್ರಚಾರದ ಕಾವು ಹೆಚ್ಚಿಸಿದ್ದಾರೆ.
ಈ ಚೌಕಿದಾರ್ ಪದ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆಗೆ ಕಾರಣವಾಗಲಿದೆ ಎಂದು ಅತಂಕ ವ್ಯಕ್ತಪಡಿಸಲಾಗಿದೆ. ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗ ಈ ಕುರಿತು ತಕ್ಷಣ ಗಮನ ಹರಿಸಬೇಕಾಗಿದೆ.












Click it and Unblock the Notifications