ಪಕ್ಕದ ಮನೆ ನಾಯಿ ಬೊಗಳೋದಕ್ಕೆ ಪೊಲೀಸ್ ಠಾಣೆಯಲ್ಲಿ ದೂರು
ಮಂಗಳೂರು, ಜುಲೈ 8: ಪಕ್ಕದ ಮನೆಯ ನಾಯಿ ಬೊಗಳುವುದರಿಂದ ನಮ್ಮ ನೆಮ್ಮದಿ ಹಾಳಾಗುತ್ತಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಕುತೂಹಲಕಾರಿ ಪ್ರಸಂಗ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಮಂಗಳೂರಿನ ಸುರತ್ಕಲ್ ಸಮೀಪದ ಕಾನದಲ್ಲಿ ಈ ಘಟನೆ ನಡೆದಿದೆ. ಪಕ್ಕದ ಮನೆಯ ಸಾಕು ನಾಯಿ ಬೊಗಳಿ ಬೊಗಳಿ ನಮ್ಮ ನೆಮ್ಮದಿ ಕೆಡಿಸುತ್ತಿದೆ. ಅದರ ಬೊಗಳುವಿಕೆಯಿಂದ ವಿದ್ಯಾರ್ಥಿಗಳಿಗೆ ಓದಲಾಗುತ್ತಿಲ್ಲ ಎಂದು ಸ್ಥಳೀಯರೊಬ್ಬರು ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದಾರೆ.
ಇಲ್ಲಿಯ ನಿವಾಸಿ ಶರತ್ ಎಂಬುವರು ಶ್ವಾನಪ್ರೇಮಿಯಾಗಿದ್ದು, ತಮ್ಮ ಮನೆಯಲ್ಲಿ ಮೂರು ನಾಯಿಗಳನ್ನು ಸಾಕಿಕೊಂಡಿದ್ದಾರೆ. ಅವುಗಳು ಸ್ವಲ್ಪ ಶಬ್ದವಾದರೂ ಬೊಗಳಿ ಯಜಮಾನನನ್ನು ಎಚ್ಚರಿಸುತ್ತವೆ. ಅವುಗಳ ನಿರಂತರ ಬೊಗಳುವಿಕೆಯಿಂದ ನಮಗೆ ತೊಂದರೆಯಾಗುತ್ತದೆ ಎಂದು ಕೆಲವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಶರತ್ ಅವರನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು, ಶ್ವಾನವನ್ನು ದೂರ ಬಿಡಿ, ಇಲ್ಲವೆ ಮನೆ ಖಾಲಿ ಮಾಡಿ ಎಂದು ಸೂಚಿಸಿದ್ದಾರೆ. ಇದಕ್ಕೊಪ್ಪದ ಶರತ್, ನಾಯಿಗಳನ್ನು ನಿಯಮದಂತೆ ವೈದ್ಯರಲ್ಲಿ ತೋರಿಸಿ ಕಾಲಕಾಲಕ್ಕೆ ಔಷಧಗಳನ್ನು ನೀಡಿ ಆರೋಗ್ಯವಾಗಿರಿಸಿಕೊಂಡಿದ್ದೇನೆ ಎಂದು ವಾದ ಮಂಡಿಸಿದ್ದಾರೆ. ಈ ನಡುವೆ ಪೊಲೀಸ್ ಅಧಿಕಾರಿಯೊಬ್ಬರು, ನಾಯಿಗಳನ್ನು ಬಿಡದಿದ್ದರೆ ನಾನೇ ಕರೆದುಕೊಂಡು ಹೋಗಿ ಬಿಟ್ಟು ಬರುತ್ತೇನೆ ಎಂದು ಶರತ್ ಅವರನ್ನು ಎಚ್ಚರಿಸಿದ್ದಾರೆ. ಈ ಪ್ರಕರಣದಲ್ಲಿ ಮುಂದೇನಾಗುತ್ತದೆ ಎಂಬುದೇ ಕುತೂಹಲ ಕೆರಳಿಸಿದೆ.












Click it and Unblock the Notifications