ಅಕ್ರಮ ಮರಳು ಸಾಗಣೆ ವಿರುದ್ಧ ಪೊಲೀಸರ ಕಾರ್ಯಚರಣೆ
ಮಂಗಳೂರು, ಮಾರ್ಚ್ 01: ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮತ್ತು ಡಿಸಿಪಿ ಹರಿರಾಂ ಶಂಕರ್ ಅಕ್ರಮ ಮರಳು ಸಾಗಟ ತಡೆಯಲು ಅಖಾಡಕ್ಕಿಳಿದಿದ್ದಾರೆ. ಮರಳು ಸಾಗಣೆ ಮಾಡುತ್ತಿದ್ದ ಮೂರು ಲಾರಿಗಳನ್ನು ತಡರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆದಿದ್ದಾರೆ.
ಟೀ ಶರ್ಟ್, ಬರ್ಮಡಾ ಚೆಡ್ಡಿ ಧರಿಸಿ ಬೈಕ್ನಲ್ಲಿ ಬಂದ ಪೊಲೀಸ್ ಆಯುಕ್ತರನ್ನು ಗುರುತಿಸಲು ವಿಫಲವಾದ ಲಾರಿ ಚಾಲಕರು ಮತ್ತು ಲಾರಿಯಲ್ಲಿದ್ದವರು ಗಲಾಟೆ ಮಾಡಿದ್ದಾರೆ. ಲಾರಿ ಅಡ್ಡಗಟ್ಟಿದ್ದು ಪೊಲೀಸ್ ಆಯುಕ್ತರು ಎಂದು ತಿಳಿದಾಗ ಬೆಚ್ಚಿ ಬಿದ್ದಿದ್ದಾರೆ.
ಕೇರಳ-ಕರ್ನಾಟಕ ಗಡಿ ಮೂಲಕ ಅಕ್ರಮವಾಗಿ ಮರಳು ಸಾಗಾಟ ಮಾಡಲಾಗುತ್ತಿದೆ. ಇದು ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಪೊಲೀಸ್ ಆಯುಕ್ತರೇ ಮಫ್ತಿಯಲ್ಲಿ ಕಾರ್ಯಾಚರಣೆ ಮಾಡಿದ್ದಾರೆ. ತಲಪಾಡಿ ಟೋಲ್ ಬಳಿ ಒಂದು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.

ಟಿಪ್ಪರ್ನಲ್ಲಿ ಮರಳು ಸಾಗಿಸುವಾಗ ಕಾರಿನ ಮೂಲಕ ಅವರಿಗೆ ರಕ್ಷಣೆ ನೀಡಲಾಗುತ್ತಿತ್ತು. ಕಾರಿನಲ್ಲಿದ್ದವರನ್ನು ಹಿಡಿಯಲು ಹೋದಾಗ ಅವರು ಪರಾರಿಯಾಗಿದ್ದಾರೆ. ಅಕ್ರಮ ಮರಳು ಸಾಗಣೆಗೆ ಬೆಂಗಾವಲಾಗಿದ್ದ ಕಾರನ್ನು ಸಹ ವಶಕ್ಕೆ ಪಡೆಯಲಾಗಿದೆ.
ಟೋಲ್ ಸಿಬ್ಬಂದಿ ಸಹ ಅಕ್ರಮ ಮರಳು ಸಾಗಾಟಕ್ಕೆ ಸಹಕಾರ ನೀಡುತ್ತಿದ್ದಾರೆ. ಟೋಲ್ ಸಿಬ್ಬಂದಿ, ಕಾರಿನಲ್ಲಿದ್ದವರ ವಿರುದ್ಧ ಪ್ರಕರಣ ದಾಖಲು ಮಾಡಲು ಉಳ್ಳಾಲ ಠಾಣೆ ಅಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದ್ದಾರೆ.
ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮತ್ತು ಡಿಸಿಪಿ ಅವರು ಮರಳು ಲಾರಿಯನ್ನು ತಡೆಯುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸ್ ಆಯುಕ್ತರ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದೆ.












Click it and Unblock the Notifications