ತಿರುವನಂತಪುರಂನಲ್ಲಿ ನಡೆದ ಶಬರಿಮಲೆ ಸಂರಕ್ಷಣಾ ಪಾದಯಾತ್ರೆಯಲ್ಲಿ ಕರಾವಳಿಯ ಬಿಜೆಪಿ ಶಾಸಕರು
ಮಂಗಳೂರು, ಅಕ್ಟೋಬರ್. 16: ಶಬರಿಮಲೆ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಕೆಗೆ ಕೇರಳ ಸರಕಾರದ ವಿರುದ್ಧ ಒತ್ತಡ ಹೆಚ್ಚುತ್ತಿದೆ. ಈ ನಡುವೆ ಕೇರಳದಲ್ಲಿ ಶಬರಿಮಲೆಗೆ ಎಲ್ಲಾ ವಯೋಮಿತಿಯ ಮಹಿಳೆಯರ ಪ್ರವೇಶ ವಿರೋಧಿಸಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿವೆ.
ರಾಜ್ಯದ ಕರಾವಳಿಯಲ್ಲೂ ಪ್ರತಿಭಟನೆ ಕಾವು ಪಡೆದುಕೊಳ್ಳುತ್ತಿದೆ. ಮಂಗಳೂರು ಸೇರಿದಂತೆ ಪುತ್ತೂರಿನಲ್ಲಿ ಈಗಾಗಲೇ ಬೃಹತ್ ಪ್ರತಿಭಟನೆಗಳನ್ನು ನಡೆಸಲಾಗಿದೆ. ಈ ನಡುವೆ ಕೇರಳ ಸರಕಾರ ಶಬರಿಮಲೆ ಸನ್ನಿಧಾನಕ್ಕೆ ಪ್ರವೇಶಿಸುವ ಮಹಿಳೆಯರಿಗೆ ಭದ್ರತೆ ನೀಡುವುದಾಗಿ ಹೇಳಿಕೆ ನೀಡುವ ಮೂಲಕ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಸಿದೆ.
ಇದೀಗ ಸರಕಾರಕ್ಕೆ ಸವಾಲೆಸೆದ ಕೇರಳ ಬಿಜೆಪಿ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಮತ್ತು ಅಯ್ಯಪ್ಪ ಭಕ್ತರನ್ನು ಒಗ್ಗೂಡಿಸಿ ಪ್ರತಿಭಟನೆಗೆ ಇಳಿದಿದೆ. ಕೇರಳದಲ್ಲಿ ಶಬರಿಮಲೆ ಉಳಿವಿಗಾಗಿ ಹೋರಾಟ ಆಯೋಜಿಸಿದ ಕೇರಳ ಬಿಜೆಪಿ ಮತ್ತು ಇತರ ಹಿಂದೂಪರ ಸಂಘಟನೆಗಳ ಜೊತೆ ಕರಾವಳಿಯ ಬಿಜೆಪಿ ಶಾಸಕರು ಕೈ ಜೋಡಿಸಿದ್ದಾರೆ.

ಕಾರ್ಕಳ ಶಾಸಕ ಸುನಿಲ್ ಕುಮಾರ್, ಬೆಳ್ತಂಗಡಿ ಹರೀಶ್ ಪೂಂಜ ಮತ್ತು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ, ಸುಳ್ಯ ಶಾಸಕ ಅಂಗಾರ, ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಪುತ್ತೂರು ಶಾಸಕ ಸಂಜೀವ ಮಠಂದೂರು, ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್ ಭಾಗಿಯಾಗಿದ್ದಾರೆ.

ಕೇರಳದ ತಿರುವನಂತಪುರದಲ್ಲಿ ಶಬರಿಮಲೆ ಕ್ಷೇತ್ರಕ್ಕೆ ಮಹಿಳೆಯರ ಪ್ರವೇಶ ಹಾಗೂ ಕೇರಳ ಸರಕಾರದ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ನಡೆದ ಶಬರಿಮಲೆ ಸಂರಕ್ಷಣಾ ಪಾದಯಾತ್ರೆಯಲ್ಲಿ ಕೇರಳ ರಾಜ್ಯ ಬಿಜೆಪಿ ಸಹಪ್ರಭಾರಿಯೂ ಆದ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ ಕಟೀಲ್ ಕೂಡ ಭಾಗವಹಿಸಿದ್ದರು.

ಮಂಗಳೂರು, ಪುತ್ತೂರು , ಬೆಂಗಳೂರು, ಮುಂಬೈ ಸೇರಿದಂತೆ ಅನೇಕ ಕಡೆಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಪ್ರತಿಭಟನೆಯ ಕಾವು ಹೆಚ್ಚುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಪ್ರತಿಭಟನೆ ನಡೆಸಲಾಗುತ್ತಿದೆ. ಈ ನಡುವೆ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಅಯ್ಯಪ್ಪ ಸೇವಾ ಸಮಿತಿ ಮತ್ತೊಮ್ಮೆ ಕೋರ್ಟ್ ಮೊರೆ ಹೋಗಿದೆ.












Click it and Unblock the Notifications