ಮಂಗಳೂರಿನ ಹುಡುಗಿಯ ಮನ ಕರಗುವ ಪತ್ರಕ್ಕೆ ಸ್ಪಂದಿಸಿದ ಸಿದ್ದು
ಮಂಗಳೂರು, ಅಕ್ಟೋಬರ್ 2: ರೈಲ್ವೆ ಗೇಟ್ ಗೆ ಮೇಲ್ಸೇತುವೆ ನಿರ್ಮಿಸಬೇಕು ಎಂದು 6ನೇ ತರಗತಿ ಬಾಲಕಿ ಬರೆದ ಪತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದು, ಉಪಕಾರ್ಯದರ್ಶಿ ಮೂಲಕ ಉತ್ತರ ಬರೆದಿದ್ದಾರೆ.
ಮಂಗಳೂರು ಹೊರವಲಯದ ಸಿಮಂತೂರಿನ ಶಾರಾದ ಮಾಡೆಲ್ ಅಂಗ್ಲ ಮಾದ್ಯಮ ಶಾಲೆಯಲ್ಲಿ 6ನೇ ತರಗತಿ ಕಲಿಯುತಿರುವ ಧೃತಿ ಕುಲಾಲ್, ಕಿನ್ನಿಗೋಳಿ ಮಂಗಳೂರು ಮುಖ್ಯ ರಸ್ತೆಯ ಹಳೆಯಂಗಡಿ ಎಂಬಲ್ಲಿನ ಇಂದಿರಾನಗರದ ರೈಲ್ವೆ ಗೇಟ್ ಬಳಿ ಮೇಲ್ಸೇತುವೆ ನಿರ್ಮಿಸಬೇಕು ಎಂದು ಕೆಲ ತಿಂಗಳ ಹಿಂದೆ ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದಳು.

ಪ್ರಧಾನ ಮಂತ್ರಿಯವರ ಕಚೇರಿಯಿಂದ ಧೃತಿಯ ತಂದೆ ರಮೇಶ್ ಕುಲಾಲ್ ಗೆ ಕರೆ ಬಂದಿತ್ತು. ಸಮಸ್ಯೆಗಳ ಬಗ್ಗೆ ವಿಚಾರಿಸಿ, ರೈಲ್ವೇ ಇಲಾಖೆಗೆ ಈ ಬಗ್ಗೆ ಗಮನಹರಿಸುವಂತೆ ಸೂಚಿಸಲಾಗಿತ್ತು. ರೈಲ್ವೆ ಇಲಾಖೆ ಅಧಿಕಾರಿಗಳು ದೂರವಾಣಿ ಮೂಲಕ ಧೃತಿಯ ತಂದೆ ರಮೇಶ್ ಕುಲಾಲ್ ರಿಂದ ರೈಲ್ವೇ ಗೇಟ್ ನ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದರು. ಆದರೆ ಮೇಲ್ಸೇತುವೆ ನಿರ್ಮಾಣಕ್ಕೆ ಜಾಗದ ಸಮಸ್ಯೆ ಇರುವ ಬಗ್ಗೆ ಇಲಾಖೆ ಪತ್ರದಲ್ಲಿ ಉಲ್ಲೇಖಿಸಿತ್ತು.
ಆ ನಂತರದ ದಿನಗಳಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳ ತಂಡ ರೈಲ್ವೆಗೇಟ್ ಬಳಿ ಪರಿಶೀಲನೆಗೆ ಬಂದಿತ್ತಾದರೂ ಯಾವುದೇ ಕೆಲಸ ಮುಂದುವರಿದಿಲ್ಲ. ಈ ವಿಚಾರ ಧೃತಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಳು.

ಮುಖ್ಯಮಂತ್ರಿಯವರ ಉಪಕಾರ್ಯದರ್ಶಿ ಅರುಣ್ ಪುರ್ಟಾಡೋ ಅವರ ಕಚೇರಿಯಿಂದ ಈ ಬಗ್ಗೆ ಬಾಲಕಿಗೆ ಉತ್ತರ ಬಂದಿದ್ದು, ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ 1.8.2017 ರಂದು ಪತ್ರ ಮುಖೇನ ತಿಳಿಸಲಾಗಿದೆ.
ಈ ಕುರಿತು ಒನ್ ಇಂಡಿಯಾದೊಂದಿಗೆ ಮಾತನಾಡಿದ ಧೃತಿ, "ನನ್ನ ಪತ್ರಕ್ಕೆ ಪ್ರಧಾನ ಮಂತ್ರಿ ಹಾಗೂ ರಾಜ್ಯದ ಮುಖ್ಯಮಂತ್ರಿ ಸ್ಪಂದಿಸಿದ್ದಾರೆ. ಇಲ್ಲಿ ರೈಲ್ವೇ ಸೇತುವೆ ನಿರ್ಮಾಣ ಆಗಬೇಕು ಎಂಬುದು ನನ್ನ ಆಸೆ" ಎಂದು ತಿಳಿಸಿದ್ದಾಳೆ.

ಬಾಲಕಿಯ ತಂದೆ ರಮೆಶ್ ಕುಲಾಲ್ ಮಾತನಾಡಿ, ಆದಷ್ಟು ಬೇಗ ಈ ಮೆಲ್ಸೇತುವೆ ನಿರ್ಮಾಣ ಆಗಬೇಕು, ಜನರ ಕಷ್ಟ ಪರಿಹಾರ ಆಗಬೇಕು ಎಂದರು.












Click it and Unblock the Notifications