ಕಾಂಗ್ರೆಸ್ ಆಟ ಇನ್ನು ಏಳೆಂಟು ತಿಂಗಳು ಮಾತ್ರ: ಬಿಎಸ್ ವೈ
ಮಂಗಳೂರು, ಜುಲೈ 13: ಬಿಜೆಪಿಯವರು ಉಸಿರೆತ್ತದಂತೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಒಮ್ಮೆ ನಿಷೇಧಾಜ್ಞೆ ತೆಗೆಯಲಿ. ಲಕ್ಷ ಜನರನ್ನು ಸೇರಿಸಿ, ಮಂಗಳೂರಿನಲ್ಲಿ ನಮ್ಮ ಶಕ್ತಿ ಪ್ರದರ್ಶನ ಮಾಡೋಣ. ಈ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವರನ್ನೂ ಕರೆಸೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವೀರಾವೇಶದ ಮಾತನಾಡಿದರು.
ಬಿಜೆಪಿ ಮಹಿಳಾ ಮೋರ್ಚಾ ನಗರದಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮ (ಕಾಂಗ್ರೆಸ್) ರಾಜಕೀಯ ಆಟ ಏನಿದ್ದರೂ ಕೇವಲ ಏಳೆಂಟು ತಿಂಗಳು ಮಾತ್ರ. ಹಣ, ಹೆಂಡ, ತೋಳ್ಬಲದಿಂದ ರಾಜಕಾರಣ ಮಾಡಬೇಕೆಂದು ನೀವಂದು ಕೊಂಡಿದ್ದೀರಿ, ಇಂದಿಗೂ ರಾಜ್ಯದಲ್ಲಿ ಸುಸಂಸ್ಕೃತರು ಇದ್ದಾರೆ ಎಂದರು.
ಮುಂದಿನ ಚುನಾವಣೆ ನಡೆಯಲಿ, ನಿಮ್ಮ ಅಡ್ರೆಸ್ ಎಲ್ಲಿ ಎಂದು ನೀವೇ ಹುಡುಕಿಕೊಂಡು ಹೋಗುವ ಪರಿಸ್ಥಿತಿ ಬರುತ್ತದೆ ಎಂದು ರಾಜ್ಯದ ಉಸ್ತುವಾರಿ ವಹಿಸಿರುವ ಕಾಂಗ್ರೆಸ್ ನ ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.
ರಾಜ್ಯ ಸರಕಾರಕ್ಕೆ ತಾಕತ್ತಿದ್ದರೆ ಕಲ್ಲಡ್ಕ ಪ್ರಭಾಕರ್ ಭಟ್, ಶೋಭಾ ಕರಂದ್ಲಾಜೆ ಹಾಗೂ ನಳಿನ್ ಕುಮಾರ್ ಕಟೀಲ್ ಅವರನ್ನು ಬಂಧಿಸಲಿ ಎಂದು ಪಂಥಾಹ್ವನ ನೀಡಿದರು.

ಕಾರ್ಯಕ್ರಮ ನೋಡದಿರಲೆಂದು ಕೇಬಲ್ ಕಟ್
ಬಿಜೆಪಿ ಪ್ರತಿಭಟನೆಗೆ ಹೆದರಿ, ಜನ ಟಿವಿಯಲ್ಲಿ ನೋಡಬೇಕೆಂದಿದ್ದ ನಮ್ಮ ಪ್ರತಿಭಟನಾ ಭಾಷಣವನ್ನು ಜನ ನೋಡದಿರಲಿ ಎಂದು ಕೇಬಲ್ ನೆಟ್ ವರ್ಕ್ಗಳನ್ನೇ ಕಡಿತಗೊಳಿಸಲಾಗಿದೆ. ಇದಕ್ಕಿಂತ ನೀತಿಗೆಟ್ಟ, ಬೇಜವಾಬ್ದಾರಿಯ ಸರಕಾರ ಇನ್ನೊಂದಿಲ್ಲ ಎಂದ ಅವರು, ಇಂಥ ಸರಕಾರದಿಂದ ನ್ಯಾಯ ಸಿಗುವ ಯಾವ ಭ್ರಮೆಯೂ ಬೇಡ ಎಂದು ಯಡಿಯೂರಪ್ಪ ಹೇಳಿದರು.

ಕಾಂಗ್ರೆಸ್ ನ ಶವಪೆಟ್ಟಿಗೆಗೆ ಕೊನೆ ಮೊಳೆ
ಬಿಜೆಪಿ, ಸಂಘ ಪರಿವಾರದ ನಾಯಕರ ಮೇಲೆ ಕೇಸು ದಾಖಲಿಸಿ, ಬಂಧಿಸಿದ್ದೇ ಆದರೆ ಅದು ಕಾಂಗ್ರೆಸ್ ನ ಶವಪೆಟ್ಟಿಗೆಗೆ ಹೊಡೆಯುವ ಕೊನೆಯ ಮೊಳೆಯಾಗಿರುತ್ತದೆ ಎಂದು ಶೋಭಾ ಕರಂದ್ಲಾಜೆ ಎಚ್ಚರಿಸಿದರು.

ಪ್ರಕರಣದ ತನಿಖೆ ಎನ್ ಐಎಗೆ
ರಾಜ್ಯದಲ್ಲಿ ನಡೆದ 24 ಹಿಂದೂ ಕಾರ್ಯಕರ್ತರ ಕೊಲೆ ಪ್ರಕರಣದ ತನಿಖೆಯನ್ನು ತಕ್ಷಣವೇ ಸರಕಾರ ಎನ್ ಐಎ (ರಾಷ್ಟ್ರೀಯ ತನಿಖಾ ದಳ)ಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ ಅವರು, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಪಕ್ಕದ ಕೇರಳದಲ್ಲೂ ಮತೀಯವಾದಿಗಳ ಚಟುವಟಿಕೆಗಳು ನಡೆಯುತ್ತಿರುವುದರಿಂದ ಈ ಎಲ್ಲ ಪ್ರಕರಣಗಳ ಕೂಲಂಕಷ ತನಿಖೆಗಾಗಿ ಮಂಗಳೂರಿನಲ್ಲಿಯೇ ಎನ್ ಐಎ ಕಚೇರಿ ತೆರೆಯಬೇಕು ಎಂದರು.

ತಾಕತ್ತಿದ್ದರೆ ರಶೀದ್ ಮಲಬಾರಿಯ ಮನೆಗೆ ನುಗ್ಗಲಿ
ರಾತ್ರೋ ರಾತ್ರಿ ಪೊಲೀಸರ ಗುಂಪು ಹಿಂದೂ ನಾಯಕರ ಮನೆಗಳಿಗೆ ನುಗ್ಗಿ ದಾಂಧಲೆ ಮಾಡುತ್ತಿದ್ದಾರೆ. ತಾಕತ್ತಿದ್ದರೆ ಇವರೆಲ್ಲಾ ರಶೀದ್ ಮಲಬಾರಿಯ ಮನೆಗೆ ನುಗ್ಗಲಿ. ಅವರೆಲ್ಲಾ ಇವರನ್ನು ಏನು ಮಾಡುತ್ತಾರೆ ನೋಡಲಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.












Click it and Unblock the Notifications