ದಕ್ಷಿಣ ಕನ್ನಡ: ಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೇ ಮುಖ್ಯಮಂತ್ರಿ ಬೊಮ್ಮಾಯಿ ದೇವಾಲಯಗಳ ಭೇಟಿ
ಮಂಗಳೂರು, ಏಪ್ರಿಲ್ 12: ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ಘೋಷಣೆ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯರು ದಕ್ಷಿಣ ಕನ್ನಡ ಜಿಲ್ಲೆಯ ದೇವಾಲಯ ದರ್ಶನದಲ್ಲಿದ್ದಾರೆ. ಬುಧವಾರ ಬಸವರಾಜ ಬೊಮ್ಮಾಯಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಆ ಬಳಿಕ ಬಸವರಾಜ ಬೊಮ್ಮಾಯಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಗುರುವಾರ ಬಸವರಾಜ ಬೊಮ್ಮಾಯಿ ಕಟೀಲು ಹಾಗೂ ಸೋಮೇಶ್ವರ ದೇವಸ್ಥಾನ ಭೇಟಿ ನೀಡಲಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಪ್ರತಿ ಚುನಾವಣೆಗೆ ಮೊದಲು ದೇವಸ್ಥಾನಗಳ ಭೇಟಿ ನೀಡುತ್ತಿದ್ದೆ. ಅದರಂತೆ ಈ ಬಾರಿಯೂ ಭೇಟಿ ನೀಡಿದ್ದೇನೆ. ಕನ್ನಡ ನಾಡಿನ ಸುಭೀಕ್ಷೆಗಾಗಿ ಸತ್ಯಕ್ಕಾಗಿ ಜಯ ಸಿಗುವಂತೆ ಪ್ರಾರ್ಥನೆ ಮಾಡಿದ್ದೇನೆ. ಟಿಕೆಟ್ ವಂಚಿತರೊಂದಿಗೆ ಮಾತನಾಡಿದ್ದೇವೆ. ಅವರನ್ನು ಶಾಸಕರಾಗಿ ಮಾಡಿರೋದು ಕೂಡಾ ಬಿಜೆಪಿ ಪಕ್ಷ. ಅವರನ್ನು ಬಿಜೆಪಿ ಗೌರವ ಪೂರ್ವಕವಾಗಿ ನಡೆಸಿಕೊಂಡಿದೆ. ರಾಜಕೀಯ ಭವಿಷ್ಯ ಕೂಡಾ ಸುರಕ್ಷಿತವಾಗಿ ಇರಲಿದೆ ಎಂದು ಹೇಳಿದರು.
ಟಿಕೆಟ್ ದೊರಕದಿದ್ದಾಗ ಅಸಮಾಧಾನ ಸಹಜ. ಸವದಿಯವರು ಬೇಸರದಿಂದ ಪ್ರತಿಕ್ರಿಯೆ ನೀಡಿದ್ದಾರೆ. ಅವರಿಗೆ ಪಕ್ಷದೊಂದಿಗೆ ಸಂಬಂಧವಿದೆ. ನನ್ನೊಂದಿಗೂ ಬಹಳ ಹತ್ತಿರದ ಸಂಬಂಧವಿದೆ. ಅವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ. ನಾಳೆ ನಾಡಿದ್ದರಲ್ಲಿ ಎರಡನೇ ಪಟ್ಟಿಯೂ ಬಿಡುಗಡೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿನಯ ಕುಲಕರ್ಣಿ ಇದಿರಾಳಿಯಾಗಿ ಸ್ಪರ್ಧಿಸುವ ವಿಚಾರವಾಗಿ ಮಾತನಾಡಿದ ಬಸವರಾಜ ಬೊಮ್ಮಾಯಿ, ಬಿಜೆಪಿ ಯಾರನ್ನೂ ಟಾರ್ಗೆಟ್ ಮಾಡಿಲ್ಲ. ನನ್ನ ಎದುರಾಳಿಯಾಗಿ ಯಾರು ಸ್ಪರ್ಧಿಸುವುದೆಂದು ನನಗೆ ಮುಖ್ಯವಲ್ಲ. ನನಗೆ ನನ್ನ ಕ್ಷೇತ್ರದ ಜನರು ಮುಖ್ಯ. ಯಾರೇ ಆದರೂ ನಾನು ಚುನಾವಣೆಯಲ್ಲಿ ಎದುರಿಸುತ್ತೇನೆ ಎಂದರು.

ಟಿಕೆಟ್ ಘೋಷಣೆ ಬೆನ್ನಲ್ಲೇ ಹಲವರಿಂದ ರಾಜಕೀಯ ನಿವೃತ್ತಿ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿಎಂ ಬೊಮ್ಮಾಯಿಯರು, ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗೋದಾಗಿ ಹೇಳುತ್ತಿದ್ದಾರೆ. ರಾಜಕೀಯದಿಂದ ನಿವೃತ್ತಿಯಾಗೋದಾಗಿ ಹೇಳಿಲ್ಲ. ಈಶ್ವರಪ್ಪ ಜೊತೆ ವರಿಷ್ಠರು ಮಾತನಾಡುತ್ತಾರೆ. ಎಸ್ ಅಂಗಾರ ಜಂಟಲ್ಮ್ಯಾನ್ ಅವರೊಂದಿಗೆ ನಾನು ಮಾತನಾಡುತ್ತೇನೆ ಎಂದು ಹೇಳಿದರು.
ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿಗಳ ವಿವರ
ಬಿಜೆಪಿ ಪ್ರಥಮ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ. ಮೊದಲ ಪಟ್ಟಿಯಲ್ಲಿ ದ.ಕ.ಜಿಲ್ಲೆಯಲ್ಲಿ ಐವರು ಹಾಲಿ ಶಾಸಕರಿಗೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಮತ್ತೊಮ್ಮೆ ಅವಕಾಶ ನೀಡಿದೆ. ಆದರೆ ಸೋಲಿಲ್ಲದ ಸರದಾನೆಂದು ಕರೆಸಿಕೊಳ್ಳುವ ಸುಳ್ಯ ಕ್ಷೇತ್ರದಲ್ಲಿ ಆರು ಬಾರಿ ಜಯಭೇರಿ ಬಾರಿಸಿದ ಬೊಮ್ಮಾಯಿ ಸರಕಾರದಲ್ಲಿ ಸಚಿವರಾಗಿದ್ದ ಎಸ್.ಅಂಗಾರ ಅವರಿಗೆ ಈ ಬಾರಿ ಟಿಕೆಟ್ ನೀಡಿಲ್ಲ.
ಅದೇ ರೀತಿ ಪುತ್ತೂರು ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಅವರಿಗೂ ಈ ಬಾರಿ ಟಿಕೆಟ್ ನಿರಾಕರಿಸಲಾಗಿದೆ. ಸಂಜೀವ ಮಠಂದೂರು ಅವರಿಗೆ ಕಾರ್ಯಕರ್ತರಿಂದಲೇ ಭಾರಿ ವಿರೋಧ ವ್ಯಕ್ತವಾಗಿತ್ತು. ಎಸ್.ಅಂಗಾರ ಅವರಿಗೆ ಅಭಿವೃದ್ಧಿ ಮಾಡದ ಕಾರಣಕ್ಕೆ ಕ್ಷೇತ್ರದ ಜನರಿಂದ ವಿರೋಧ ವ್ಯಕ್ತವಾಗಿತ್ತು. ವಿಶೇಷವೆಂದರೆ ಈ ಬಾರಿ ಇಬ್ಬರು ಮಹಿಳೆಯರಿಗೆ ಬಿಜೆಪಿ ಮಣೆ ಹಾಕಿದೆ.
ಮಂಗಳೂರು ಉತ್ತರದಿಂದ ಡಾ.ವೈ.ಭರತ್ ಶೆಟ್ಟಿ, ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ವೇದವ್ಯಾಸ ಕಾಮತ್, ಮುಲ್ಕಿ - ಮೂಡುಬಿದಿರೆ ಕ್ಷೇತ್ರಕ್ಕೆ ಉಮಾನಾಥ ಕೋಟ್ಯಾನ್, ಬಂಟ್ವಾಳ ರಾಜೇಶ್ ನಾಯ್ಕ್, ಬೆಳ್ತಂಗಡಿಯಲ್ಲಿ ಹರೀಶ್ ಪೂಂಜಾ ಹೀಗೆ ಈ ಐವರು ಹಾಲಿ ಶಾಸಕರಿಗೆ ಅವರ ಈ ಹಿಂದೆ ಇದ್ದ ಕ್ಷೇತ್ರದಲ್ಲಿಯೇ ಮತ್ತೊಮ್ಮೆ ಟಿಕೆಟ್ ನೀಡಿ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಅವಕಾಶ ನೀಡಿದೆ. ಆದರೆ ಮಂಗಳೂರು ಕ್ಷೇತ್ರದಲ್ಲಿ ಈ ಬಾರಿ ಹೊಸ ಮುಖ ಸತೀಶ್ ಕುಂಪಲ ಅವರಿಗೆ ಟಿಕೆಟ್ ದೊರಕಿದೆ. ಕಳೆದ ಬಾರಿ ಸಂತೋಷ್ ರೈ ಬೋಳಿಯಾರು ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಯು.ಟಿ.ಖಾದರ್ ಅವರ ಎದುರು ಕಣಕ್ಕಿಳಿದು ಸೋತಿದ್ದರು. ಈ ಬಾರಿ ಸಂತೋಷ್ ರೈ ಅವರ ಬದಲು ಬಿಜೆಪಿ ಸತೀಶ್ ಕುಂಪಲ ಅವರಿಗೆ ಮಣೆ ಹಾಕಿದೆ.












Click it and Unblock the Notifications