ಗ್ಯಾರಂಟಿ ಕಾರ್ಡ್ ಯಾಕೆ?ಇವರ ಮಾತಿಗೆ ಗ್ಯಾರಂಟಿ ಇಲ್ವಾ: ಕಾಂಗ್ರೆಸ್ ವಿರುದ್ಧ ಸಿಎಂ ಬೊಮ್ಮಾಯಿ ವ್ಯಂಗ್ಯ
ಕಾಂಗ್ರೆಸ್ನವರು ಏನು ಮಾಡಿದ್ದಾರೆ ಎನ್ನುವುದು ಇಡೀ ಜಗತ್ತಿಗೆ ಗೊತ್ತಿದೆ. ರಾಜ್ಯದ ಜನರೇ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಗ್ಯಾರಂಟಿ ಕಾರ್ಡ್ ಯಾಕೆ ಕೊಡಬೇಕು. ಇವರ ಮಾತಿಗೆ ಗ್ಯಾರಂಟಿ ಇಲ್ವಾ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಮಂಗಳೂರು, ಮಾರ್ಚ್ 16: ಕಾಂಗ್ರೆಸ್ನ ಗ್ಯಾರಂಟಿ ಕಾರ್ಡ್ಗೆ ಯಾವ ಬೆಲೆಯೂ ಇಲ್ಲ. ಅದನ್ನು ಬ್ಯಾಂಕ್ನಲ್ಲಿ ಇಡಲು ಆಗುತ್ತಾ. ಅದು ಉಪ್ಪಿನಕಾಯಿ ಹಾಕಿ ನಕ್ಕೋಕೆ ಆಗುತ್ತದೆ. ಗ್ಯಾರಂಟಿ ಕಾರ್ಡ್, ವಿಸಿಟಿಂಗ್ ಕಾರ್ಡ್ ಅಷ್ಟೇ. ರಾಜ್ಯದ ಜನತೆ ಆ ಕಾರ್ಡ್ಅನ್ನು ಕಸದಬುಟ್ಟಿಗೆ ಹಾಕುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದ್ದಾರೆ.
ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಹಮ್ಮಿಕೊಳ್ಳಲಾದ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ನವರು ಆಗದಿರುವುದನ್ನು ಹೇಳಿ ಜನರನ್ನು ನಂಬಿಸುತ್ತಿದ್ದಾರೆ. 2 ಸಾವಿರ ಕೋಟಿ ರೂಪಾಯಿ ಅನುದಾನಕ್ಕೆ ತಿಂಗಳಿಗೆ 20 ಸಾವಿರ ಕೋಟಿ ರೂಪಾಯಿ ಬೇಕಾಗುತ್ತದೆ. ಹಣ ಕೊಟ್ಟರೆ ಎಲ್ಲಾ ಯೋಜನೆಗಳು ಬಂದ್ ಆಗುತ್ತದೆ ಎಂದರು.

ಛತ್ತಿಸ್ಗಢದಲ್ಲಿ ಇದೇ ರೀತಿಯ ಹೇಳಿಕೆ ಕೊಟ್ಟು 4 ವರ್ಷಗಳಾದರೂ ಕೊಟ್ಟಿಲ್ಲ. 200 ಯುನಿಟ್ ಉಚಿತ ವಿದ್ಯುತ್ ಕೊಡುವುದಿಲ್ಲ. ಜನರನ್ನು ಯಾಮಾರಿಸುತ್ತಾರೆ. ಎಲ್ಲಾ ಸಂದರ್ಭಗಳಲ್ಲೂ ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಅನ್ನದಾತ ರೈತನಿಗೆ ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿಗೊಳಿಸಿದೆ. ಮೋದಿ ಬರುವುದಕ್ಕಿಂತ ಮೊದಲು ಈ ಯೋಜನೆ ಇರಲಿಲ್ಲ. ಯುಪಿಎ ಸರ್ಕಾರ ಇದರ ದೊಡ್ಡ ದೊಡ್ಡ ಬ್ಯಾನರ್ಗಳನ್ನು ಹಾಕುತ್ತಿದ್ದರು. ಆದರೆ ಯುಪಿಎ ಸರ್ಕಾರದ ಕಾಲದಲ್ಲಿ 85% ಮಧ್ಯವರ್ತಿಗಳ ಪಾಲಾಗುತಿತ್ತು. ಯುಪಿಎ ಕಾಲದಲ್ಲಿ 85% ಸರ್ಕಾರ ನಡೆಯುತಿತ್ತು. ಈಗ ಮಧ್ಯವರ್ತಿಗಳೇ ಇಲ್ಲದೇ ನೇರವಾಗಿ ಫಲಾನುಭವಿಗಳ ಖಾತೆಗೆ ಅನುದಾನ ಹೋಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಟೀಕಿಸಿದ್ದಾರೆ.

ಕಾರ್ಯಕ್ರಮಕ್ಕೂ ಮೊದಲು ನಗರದ ಹೆಲಿಪ್ಯಾಡ್ ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಗ್ಯಾರಂಟಿ ಕಾರ್ಡ್ಗೆ ಯಾಕೆ ಹತಾಶೆಗೊಳಗಾಬೇಕು. ಕಾಂಗ್ರೆಸ್ನವರು ಏನು ಮಾಡಿದ್ದಾರೆ ಎನ್ನುವುದು ಇಡೀ ಜಗತ್ತಿಗೆ ಗೊತ್ತಿದೆ. ರಾಜ್ಯದ ಜನರೇ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಗ್ಯಾರಂಟಿ ಕಾರ್ಡ್ ಯಾಕೆ ಕೊಡಬೇಕು. ಇವರ ಮಾತಿಗೆ ಗ್ಯಾರಂಟಿ ಇಲ್ವಾ ಎಂದು ಪ್ರಶ್ನಿಸಿದ ಅವರು ಗ್ಯಾರಂಟಿ ಕಾರ್ಡ್ ಅದು ಜಸ್ಟ್ ವಿಸಿಟಿಂಗ್ ಕಾರ್ಡ್ ಎಂದು ಲೇವಡಿ ಮಾಡಿದ್ದಾರೆ.
ಸಚಿವ ವಿ.ಸೋಮಣ್ಣ ಅಸಮಾಧಾನದ ಬಗ್ಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಸೋಮಣ್ಣ ಹಾಗೂ ಯಡಿಯೂರಪ್ಪರದ್ದು ತಂದೆ-ಮಗನ ಸಂಬಂಧ. ಸೋಮಣ್ಣ ವೈಯಕ್ತಿಕ ಕಾರಣದಿಂದ ದೆಹಲಿಗೆ ಹೋಗಿದ್ದಾರೆ. ಅವರಿಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಯಡಿಯೂರಪ್ಪ ಎಲ್ಲರಿಕ್ಕಿಂತ ಎತ್ತರದ ಲೀಡರ್. ಸೋಮಣ್ಣ ಅವರಿಗೆ ಯಾರೊಂದಿಗೂ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿದರು.
ಬೇಸಿಗೆಯಲ್ಲಿ ನೀರಿಗಾಗಿ ಹಾಹಾಕಾರ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕುಡಿಯುವ ನೀರಿನ ವಿಚಾರವಾಗಿ ಟಾಸ್ಕ್ಫೋರ್ಸ್ ಮಾಡಲಾಗಿದೆ. ಕೆಲವು ಭಾಗಗಲ್ಲಿ ಬೋರ್ವೆಲ್ಗಳು ಬತ್ತಿ ಹೋಗಿದೆ. ಈ ಬಗ್ಗೆ ವರದಿ ತರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಇನ್ನು ಪಶ್ಚಿಮ ಘಟ್ಟದಲ್ಲಿ ಭಾರೀ ಕಾಡ್ಗಿಚ್ಚು ವಿಚಾರವಾಗಿ ಮಾತನಾಡಿದ ಸಿಎಂ, ಬೆಂಕಿ ನಂದಿಸುವ ಕ್ರಮ ಕೈಗೊಳ್ಳಲಾಗಿದೆ. ಬೆಂಕಿ ಬೀಳದಂತೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿಯೊಂದಿಗೆ ಸಭೆ ನಡೆಸಲಾಗಿದೆ. ಸಾಂಪ್ರದಾಯಿಕ ಕಾರಣದಿಂದ ಅಲ್ಲಲ್ಲಿ ಬೆಂಕಿ ಬೀಳುತ್ತಿದೆ. ಅರಣ್ಯ ಇಲಾಖೆಗೆ ಬೆಂಕಿ ನಂದಿಸಲು ಹೆಲಿಕಾಪ್ಟರ್ ಬಳಕೆ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications