ಮಂಗಳೂರು ಜೈಲಿನಲ್ಲಿ ಪೊಲೀಸರ ಮೇಲೆ ಕೈದಿಗಳ ದಾಳಿ
ಮಂಗಳೂರು, ಜೂ.9: ಉಳ್ಳಾಲ ಟಾರ್ಗೆಟ್ ಗುಂಪಿನ ತಲಾತ್ ಮತ್ತು ವಕೀಲರೊಬ್ಬರ ಕೊಲೆಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಬಂಧಿತನಾಗಿರುವ ಕೈದಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಕೈದಿಗಳ ಸ್ಥಳಾಂತರ ವಿಷಯದಲ್ಲಿ ಉಂಟಾದ ಗಲಭೆಯಲ್ಲಿ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ), ಇನ್ಸ್ಪೆಕ್ಟರ್ ಸಹಿತ 20 ಮಂದಿ ಪೊಲೀಸರು, ಮೂವರು ಕೈದಿಗಳು ಗಾಯಗೊಂಡಿದ್ದಾರೆ.
ಉಳ್ಳಾಲ ಟಾರ್ಗೆಟ್ ಗುಂಪಿನ ತಲಾತ್ ಮತ್ತು ವಕೀಲರೊಬ್ಬರ ಕೊಲೆಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಬಂಧಿತನಾಗಿರುವ ಫೈಸಲ್ನನ್ನು ಮಂಗಳೂರು ಕಾರಾಗೃಹದಿಂದ ಧಾರವಾಡ ಕಾರಾಗೃಹಕ್ಕೆ ಸ್ಥಳಾಂತರಿಸಲು ಆದೇಶ ಬಂದಿತ್ತು. ಫೈಸಲ್ ಕರೆದುಕೊಂಡು ಹೋಗಲು ಪೊಲೀಸರು ತೆರಳಿದ್ದಾರೆ.
ಜಿಲ್ಲಾ ಕಾರಾಗೃಹದ 'ಎ' ಬ್ಲಾಕ್ನಲ್ಲಿ ಫೈಸಲ್ ಸೇರಿ ಸುಮಾರು 28 ಕೈದಿಗಳಿದ್ದರು, ಎಸಿಪಿ ತಿಲಕ್ ಚಂದ್ರ, ಇನ್ಸ್ಪೆಕ್ಟರ್ಗಳಾದ ರಾಮಚಂದ್ರ ಮಾಳದೇವರ್, ರಾಘವ ಪಡೀಲ್, ಚೆಲ್ವರಾಜ್, ಕಾರಾಗೃಹದ ಅಧಿಕಾರಿಗಳು ಹಾಗೂ ಪಿಎಸ್ಐಗಳು ಸೇರಿದಂತೆ 30 ಮಂದಿ ಪೊಲೀಸರು ಕಾರಾಗೃಹಕ್ಕೆ ತೆರಳಿದ್ದಾರೆ.

ಕೈದಿಗಳಿಂದ ಏಕಾಏಕಿ ಹಲ್ಲೆ: ಆದರೆ, ಪೊಲೀಸ್ ಸಿಬ್ಬಂದಿ ವಿರುದ್ಧ ವಾಗ್ದಾಳಿ ನಡೆಸಿದ ತಲಾತ್ ಹಾಗೂ ಫೈಸಲ್ ಇಬ್ಬರು ನಾವು ಯಾವುದೇ ಕಾರಣಕ್ಕೂ ಜೈಲು ಬಿಟ್ಟು ಬೇರೆಡೆ ಬರುವುದಿಲ್ಲ ಎಂದು ಹಠ ಹಿಡಿದಿದ್ದಾರೆ. ಇದಕ್ಕೆ ಬಗ್ಗದ ಪೊಲೀಸರು ಬಲವಂತವಾಗಿ ಎಳೆದುಕೊಂಡು ಹೋಗಲು ಯತ್ನಿಸಿದಾಗ ಉಳಿದ ಕೈದಿಗಳ ನೆರವಿನಿಂದ ಪೊಲೀಸರ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ.
ಅನಿರೀಕ್ಷಿತ ದಾಳಿಯಿಂದ ಪೊಲೀಸರು ಕೆಲಕ್ಷಣ ಕಕ್ಕಾಬಿಕ್ಕಿಯಾಗಿದ್ದಾರೆ. ಇದೇ ಸಂದರ್ಭವನ್ನು ಬಳಸಿಕೊಂಡ ಉಳಿದ ಕೈದಿಗಳು ಟಿ.ವಿ.ಯನ್ನು ಪುಡಿ ಮಾಡಿ ಅದರ ಗಾಜಿನಿಂದ ಪೊಲೀಸರ ಮೇಲೆ ಕೈದಿಗಳು ಹಲ್ಲೆ ಮಾಡಿದ್ದಾರೆ. ಟಿ.ವಿ.ಯ ಸ್ಟೆಬಿಲೈಜರ್ ಎಸೆದಾಗ ಇನ್ಸ್ಪೆಕ್ಟರ್ ಮಾಳದೇವರ್ ಗಾಯಗೊಂಡಿದ್ದಾರೆ. ನಂತರ ಅಲ್ಲಿಂದ ಅಡುಗೆ ಮನೆ ಸ್ಟೊರ್ ರೂಮಿಗೆ ತೆರಳಿ ಮೆಣಸಿನ ಪುಡಿ, ಟೊಮೆಟೊ, ಮೊಟ್ಟೆ, ತಟ್ಟೆ ಎಸೆದಾಡಿದ್ದಾರೆ.
ತಿಲಕ್ ಚಂದ್ರ ಅವರ ಬಲ ಕಣ್ಣಿನ ಭಾಗಕ್ಕೆ, ಉರ್ವ ಇನ್ಸ್ಪೆಕ್ಟರ್ ಮಾಳದೇವರ್ ಅವರ ಬೆನ್ನು ಮತ್ತು ಕಾಲಿಗೆ, ಕದ್ರಿ ಇನ್ಸ್ಪೆಕ್ಟರ್ ರಾಘವ ಪಡೀಲ್ ಅವರ ಎಡಕೈ ಕಿರು ಬೆರಳಿಗೆ ಗಾಯಗಳಾಗಿವೆ. ಕೆಎಸ್ಆರ್ಪಿ ಹೆಡ್ ಕಾನ್ಸ್ಟೆಬಲ್ಗಳಾದ ಲೋಕೇಶ್ ಮತ್ತು ಸುರೇಶ್ ಬಾಬು ಅವರ ಕಣ್ಣಿಗೆ ಮತ್ತು ಮೈಗೆ ಮೆಣಸಿನ ಪುಡಿ ಎರಚಿದ್ದಾರೆ. ಉಳಿದವರಿಗೆ ತರಚು ಗಾಯವಾಗಿದೆ. ಕೈದಿಗಳಾದ ಸಾಹಿಲ್, ಸಮೀರ್ ಸಂಶುದ್ದೀನ್ ಗಾಯಗೊಂಡು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯಕ್ತ ಆರ್.ಹಿತೇಂದ್ರ ಹೇಳಿದರು.












Click it and Unblock the Notifications