ಉಡುಪಿಯಲ್ಲಿ ಕೆಡಿಪಿ ಸಭೆಗೂ ಮುನ್ನ ಶ್ರೀ ಕೃಷ್ಣನ ದರ್ಶನ ಪಡೆದ ಸಿಎಂ
Recommended Video

ಮಂಗಳೂರು, ಸೆಪ್ಟೆಂಬರ್.07: ಮಂಗಳೂರು ವಿಮಾನನಿಲ್ದಾಣದಲ್ಲಿ ಪೊಲೀಸರಿಂದ ಗಾರ್ಡ್ ಆಫ್ ಆನರ್ ಪಡೆದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನೇರವಾಗಿ ಉಡುಪಿಗೆ ತೆರಳಿದ್ದಾರೆ.
ಇಂದು ಶುಕ್ರವಾರ (ಸೆ.07) ಬೆಳಗ್ಗೆ ವಿಮಾನನಿಲ್ದಾಣದಲ್ಲಿ ಇಳಿದ ಬಳಿಕ ಮುಖ್ಯಮಂತ್ರಿಗಳು ಮಾಧ್ಯಮಗಳ ಜೊತೆ ಮಾತನಾಡಲು ನಿರಾಕರಿಸಿದರು. ನಂತರ ಎಲ್ಲವನ್ನೂ ಸಂಜೆಯೇ ಮಾತನಾಡುತ್ತೇನೆ ಎಂದರು.
ಉಡುಪಿಯ ಜಿಲ್ಲಾ ಪಂಚಾಯತ್ ಸಂಭಾಗಣದಲ್ಲಿ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನೆ ನಡೆಸಲಿರುವ ಕುಮಾರಸ್ವಾಮಿ ಅವರು ಮಧ್ಯಾಹ್ನ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ. ಉಡುಪಿಯಿಂದ ನೇರವಾಗಿ ಮಂಗಳೂರಿಗೆ ಆಗಮಿಸಲಿರುವ ಸಿಎಂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.

ಈ ವೇಳೆ ಸಿಎಂ ಜೊತೆಗೆ ವಿವಿಧ ಸಚಿವರು, ಶಾಸಕರು ,ಅಧಿಕಾರಿಗಳು ಪಾಲ್ಗೊಳ್ಳಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿ ವಿಚಾರಗಳ ಕುರಿತಂತೆ ಚರ್ಚೆ ನಡೆಸಲಿದ್ದಾರೆ. ಈ ಹಿಂದೆ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಸಿಎಂ ಭೇಟಿ ನೀಡಿದ್ದರು ಅದು ಅವರ ವೈಯಕ್ತಿಕ ಭೇಟಿ ಆಗಿತ್ತು. ಇದೇ ಮೊದಲ ಬಾರಿಗೆ ಆಡಳಿತಾತ್ಮಕ ವಿಚಾರದಲ್ಲಿ ಸಿಎಂ ಭೇಟಿ ಇದಾಗಿದೆ.
ಉಡುಪಿಯಲ್ಲಿ 10 ಗಂಟೆಗೆ ನಿಗದಿಯಾಗಿದ್ದ ಕೆಡಿಪಿ ಸಭೆಗೆ ಆಗಮಿಸಬೇಕಿದ್ದ ಸಿಎಂ, ಕೆಡಿಪಿ ಸಭೆಗೂ ಮುನ್ನ ಶ್ರೀಕೃಷ್ಣ ನ ದರ್ಶನ ಪಡೆದಿದ್ದಾರೆ. ಕೃಷ್ಣ ಮಠಕ್ಕೆ ಆಗಮಿಸಿದ ಸಿಎಂಗೆ ಪರ್ಯಾಯ ಶ್ರೀಗಳು ಸ್ವಾಗತ ಕೋರಿದ್ದಾರೆ. ಬಳಿಕ ಕನಕನ ಕಿಂಡಿಯ ಮೂಲಕ ಸಿಎಂ ಕೃಷ್ಣ ದರ್ಶನ ಪಡೆದಿದ್ದಾರೆ.












Click it and Unblock the Notifications