ಚಂದ್ರಕಲಾ ನಂದಾವರರ ‘ನನ್ನೂರು ನನ್ನ ಜೀವನ’ ಕೃತಿ ಬಿಡುಗಡೆ
ಮಂಗಳೂರು, ಜನವರಿ 25: ಖ್ಯಾತ ಲೇಖಕಿ ಚಂದ್ರಕಲಾ ನಂದಾವರ ಅವರ 'ನನ್ನೂರು ನನ್ನ ಜೀವನ' ಕೃತಿ ಬಿಡುಗಡೆ ಸಮಾರಂಭ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಇತ್ತೀಚೆಗೆ ಜರುಗಿತು.
ಶಿವೈಕ್ಯರಾದ ಸಿಧ್ದಗಂಗಾ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಲೇಖಕಿ ಚಂದ್ರಕಲಾ ನಂದಾವರ, ತಮ್ಮ ಕೃತಿಗೆ ಹದಗೆಟ್ಟ ಪ್ರಸ್ತುತ ಸಮಾಜ,ಶಿಸ್ತು ಕಳೆದುಕೊಂಡ ಯುವ ಜನತೆಯೇ ವಸ್ತು ಎಂದು ಹೇಳಿದರು. ಕೃತಿಯ ಕುರಿತು ಮಾತನಾಡಿದ ಸಾಹಿತಿ ಅಬ್ದುಲ್ ಸಲಾಂ ಪುತ್ತಿಗೆ, ಆತ್ಮಕಥೆಯಲ್ಲಿ ಆತ್ಮ ಪ್ರಶಂಸೆಗಿಂತ ಆತ್ಮಾವಲೋಕನದ ಸೂಕ್ಷ್ಮತೆ ಅಗತ್ಯ. ಸಮಾಜ ಏನನ್ನು ಕಳೆದುಕೊಂಡಿದೆ ಎಂಬುದಕ್ಕೆ 'ನನ್ನೂರು ನನ್ನ ಜನ' ಸಾಕ್ಷಿ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಪೂಜನೀಯ ಬಿಷಪ್ ರೆ.ಫಾ. ಹೆನ್ರಿ ಡಿಸೋಜ, ಮನಸ್ಸಿನಲ್ಲಿ ಕನಸು, ಕಣ್ಣಿನಲ್ಲಿ ಕರುಣೆ, ಮುಖದಲ್ಲಿ ಕಳೆ, ಬಾಯಿಯಲ್ಲಿ ಸತ್ಯ, ಹೃದಯದಲ್ಲಿ ಪ್ರೀತಿ, ಕರಗಳಲ್ಲಿ ಸೇವೆ ಇಷ್ಟಿದ್ದರೆ ಮಾನವ ಜೀವನ ಸಾರ್ಥಕ, ಎಂದರು.

ಉಪ ಪ್ರಾಂಶುಪಾಲ ಡಾ.ಹರೀಶ್ ಉಪಸ್ಥಿತರಿದ್ದರು. ಕವಯತ್ರಿ ಗುಲಾಬಿ ಬಿಳಿಮಲೆ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ರತ್ನಾವತಿ ವಂದನಾರ್ಪಣೆ ಮಾಡಿದರು.












Click it and Unblock the Notifications