ಮಂಗಳೂರು ಪ್ರಯಾಣಿಕರಿಗೆ ಡಿ.1ರಿಂದ ನಗರ ಸಾರಿಗೆ ಪಾಸ್
ಮಂಗಳೂರು, ನವೆಂಬರ್ 30: ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ. ಹೌದು, ಸರಕಾರಿ ಸಾರಿಗೆ ಪ್ರಯಾಣಿಕರಿಗೆ ಸಂತಸದ ವಿಷಯ. ಏನೆಂದರೆ, ಮಂಗಳೂರು ನಗರ ಸಾರಿಗೆ ಬಸ್ ಸಂಚಾರ ಆರಂಭಿಸಿರುವ ಕೆಎಸ್ಆರ್ ಟಿಸಿ ಈಗ ಮಾಸಿಕ ಪಾಸ್ ಗಳನ್ನು ಪರಿಚಯಿಸಿದೆ. ಡಿಸೆಂಬರ್ 1ರಿಂದಲೇ ಪಾಸ್ ಗಳು ಲಭ್ಯವಾಗಲಿವೆ.
ಈಗ ನಗರದಲ್ಲಿ ಎಲ್ಲೆಲ್ಲೂ ಚಿಲ್ಲರೆ ಸಮಸ್ಯೆ ತಲೆದೋರಿದೆ. ಬಸ್ಸಿಗೂ ನಿತ್ಯ ಚಿಲ್ಲರೆ ಒದಗಿಸುವುದು ಕಷ್ಟ ಎನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಆದರೆ ಇದೀಗ ಕೆಎಸ್ಆರ್ ಟಿಸಿ ಬಸ್ಸು ಪಾಸ್ ಪರಿಚಯಿಸಿರುವುದರಿಂದ ಪ್ರಯಾಣಿಕರಲ್ಲಿ ಸಂತಸ ಮನೆ ಮಾಡಿದೆ. ಈ ಹಿಂದೆ ಪುತ್ತೂರಿನಲ್ಲಿ ಬಸ್ ಪಾಸ್ ಪರಿಚಯಿಸಲಾಗಿತ್ತು. ಈ ಬಾರಿ ಮಂಗಳೂರಿನಲ್ಲಿ ಕೆಎಸ್ಆರ್ ಟಿಸಿ ಬಸ್ ಪಾಸ್ ಪರಿಚಯಿಸುತ್ತಿದೆ.
ಮಂಗಳೂರಿನಲ್ಲಿ ನಗರ ಸಾರಿಗೆಯ 30 ಬಸ್ಸುಗಳು ಸಂಚಾರ ನಡೆಸುತ್ತಿವೆ. ನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ಮತ್ತು ಸ್ಟೇಟ್ ಬ್ಯಾಂಕ್ ಟ್ರಾಫಿಕ್ ಕಂಟ್ರೋಲ್ ಸೆಂಟರ್ ನಲ್ಲಿ ಮಾಸಿಕ ಬಸ್ ಪಾಸುಗಳು ಲಭ್ಯವಿದೆ. ಮಾಸಿಕ ಪಾಸುಗಳನ್ನು ಪಡೆದರೆ 21 ನರ್ಮ್ ಯೋಜನೆಯ ಬಸ್ಸುಗಳಲ್ಲಿಯೂ ಪ್ರಯಾಣಿಸಬಹುದಾಗಿದೆ.

ಮೊದಲ ಹಂತದಲ್ಲಿ ಮಾಸಿಕ ಪಾಸ್ ಗಳ ದರವನ್ನು ಸ್ಥಳಗಳ ದೂರದ ಮೇಲೆ ನಿಗದಿ ಮಾಡಲಾಗಿದೆ. ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ದರ ಕಡಿತಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಕೆಎಸ್ಆರ್ ಟಿಸಿ ಅಧಿಕಾರಿಗಳು ಹೇಳಿದ್ದಾರೆ.
14 ಹೊಸ ಮಾರ್ಗಗಳಲ್ಲಿ ಬಸ್ಸುಗಳನ್ನು ಓಡಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಆರ್ ಟಿಒ ಅನುಮತಿ ಸಿಕ್ಕರೆ ಬಸ್ ಗಳ ಸಂಚಾರ ಆರಂಭವಾಗಲಿದೆ.
ಇನ್ನು ಒನ್ ಇಂಡಿಯಾ ಜತೆ ಮಾತನಾಡಿದ ಕೆನರಾ ಬಸ್ ಅಸೋಸಿಯೇಷನ್ ಮಾಲೀಕರ ಸಂಘದ ಅಧ್ಯಕ್ಷ ರಾಜ್ ವರ್ಮಾ ಬಲ್ಲಾಳ್, ''ಕೆಎಸ್ ಆರ್ ಟಿಸಿ ಬಸ್ ಪಾಸ್ ಯೋಜನೆಗೆ ಸರಕಾರದಿಂದ ಅನುಮೋದನೆ ಪಡೆದಿದೆ. ಇದರಿಂದ ಖಾಸಗಿ ಬಸ್ಸುಗಳಿಗೆ ಯಾವ ರೀತಿಯಲ್ಲೂ ಅಡ್ಡ ಪರಿಣಾಮ ಬೀರುವುದಿಲ್ಲ'' ಎಂದರು.












Click it and Unblock the Notifications