ಮಂಗಳೂರು: ಕೆಎಸ್ಆರ್ಟಿಸಿ ಅಧಿಕಾರಿಗಳ ಕಿರುಕುಳಕ್ಕೆ ಬಸ್ ಕಂಡಕ್ಟರ್ ಆತ್ಮಹತ್ಯೆ
ಮಂಗಳೂರು, ಸೆಪ್ಟೆಂಬರ್ 28: ಸರ್ಕಾರಿ ಇಲಾಖೆಗಳಲ್ಲಿ ಮೇಲಾಧಿಕಾರಿಗಳ ವಿರುದ್ಧ ದಬ್ಬಾಳಿಕೆ ದೂರುಗಳು ಸಾಮಾನ್ಯವಾಗಿ ಕೇಳಿ ಬರುತ್ತವೆ. ಅದರಲ್ಲೂ ಕೆಎಸ್ಆರ್ಟಿಸಿ ಇಲಾಖೆಯಲ್ಲಿ ಮೇಲಾಧಿಕಾರಿಗಳ ಕಿರುಕುಳ ಆರೋಪ ಹೊಸದೇನಲ್ಲ.
ಮಂಗಳೂರಿನ ಕೆಎಸ್ಆರ್ಟಿಸಿ ಅಧಿಕಾರಿಗಳ ವಿರುದ್ಧ ಕಿರುಕುಳದ ಆರೋಪ ಈಗ ಮತ್ತೆ ಕೇಳಿ ಬಂದಿದೆ. ಸಾರಿಗೆ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಕಾರಣ ಮೇಲಧಿಕಾರಿಗಳ ಕಿರುಕುಳ ಎಂದು ಮೃತನ ಕುಟುಂಬದವರು ಆರೋಪಿಸಿದ್ದಾರೆ.
ಮಂಗಳೂರಿನ ಕೆಎಸ್ಆರ್ಟಿಸಿ ಅಧಿಕಾರಿಗಳ ವಿರುದ್ಧ ಮತ್ತೆ ಗಂಭೀರ ಆರೋಪ ಕೇಳಿಬಂದಿದೆ. ಮಂಗಳೂರು ಹೊರವಲಯದ ಕುಂಟಿಕಾನ ಎಂಬಲ್ಲಿ ಸಾರಿಗೆ ನೌಕರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳೂರಿನ ಮೂರನೇ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಎಸ್ಆರ್ಟಿಸಿ ಚಾಲಕ ಕಂ ನಿರ್ವಾಹಕ ನಿಂಗಪ್ಪ ಸೋಮವಾರ ರಾತ್ರಿ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.
ಮೂಲತಃ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ರಾಮವಡಗಿ ಗ್ರಾಮದವರಾದ ನಿಂಗಪ್ಪ ಡ್ರೈವರ್ ಕಂ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಕಳೆದ 6 ತಿಂಗಳ ಹಿಂದೆ ಕರ್ತವ್ಯಲೋಪದ ಅಡಿಯಲ್ಲಿ ಅವರನ್ನು ಅಮಾನತ್ತು ಮಾಡಲಾಗಿತ್ತು. ಮನೆಯವರಿಗೆ ಕರೆ ಮಾಡಿ ಮೇಲಾಧಿಕಾರಿಗಳು ಕ್ಷುಲ್ಲಕ ಕಾರಣಕ್ಕಾಗಿ ಸಸ್ಪೆಂಡ್ ಮಾಡಿದ್ದಾರೆ ಎಂದು ತಿಳಿಸಿದ್ದರು.
"ಡಿಪೋದಲ್ಲಿ ಬಸ್ನ್ನು ಹಿಂದೆ ತೆಗೆಯುವ ವಿಚಾರದಲ್ಲಿ ಮಾತಿಗೆ ಮಾತಾಗಿತ್ತು. ಈ ದ್ವೇಷದ ಹಿನ್ನಲೆಯಲ್ಲಿ ಇಲ್ಲಸಲ್ಲದ ಆರೋಪ ಹೊರಿಸಿ ಸಸ್ಪೆಂಡ್ ಮಾಡಿದ್ದಾರೆ ಎಂದು ಮನೆಯವರಿಗೆ ಹೇಳಿದ್ದು, ಇನ್ನು ಇದೇ ಕಾರಣಕ್ಕೆ ತುಂಬಾ ಬೇಸರದಲ್ಲಿದ್ದರು. 6 ತಿಂಗಳಾದರೂ ಸಸ್ಪೆಂಡ್ ವಾಪಸ್ ಪಡೆಯದ ಕಾರಣ ಹಣಕಾಸಿನ ಸಮಸ್ಯೆಯಾಗಿತ್ತು. ಇದೇ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ," ಎಂದು ಮನೆಯವರು ಮತ್ತು ಸಂಬಂಧಿಕರು ಆರೋಪಿಸಿದ್ದಾರೆ.
ಕೆಎಸ್ಆರ್ಟಿಸಿ ಟಿಸಿ ನಂದಕುಮಾರ್, ಡಿಟಿಒ ಕಮಲಾಕರ್ ಹಾಗೂ ಕೆಎಸ್ಆರ್ಟಿಸಿ ಜಿಲ್ಲಾ ಅಧಿಕಾರಿ ಅರುಣ್ ಕುಮಾರ್ ವಿರುದ್ದ ಆರೋಪ ಮಾಡಿದ್ದಾರೆ.
ಆದರೆ ಈ ಆರೋಪವನ್ನು ಸಾರಿಗೆ ಇಲಾಖೆ ಅಧಿಕಾರಿಗಳು ತಳ್ಳಿಹಾಕಿದ್ದಾರೆ. "ಮೃತ ನಿಂಗಪ್ಪ ಕುಡಿತದ ಚಟವನ್ನು ಹೊಂದಿದ್ದ ಕಾರಣ ಕರ್ತವ್ಯಲೋಪ ಎಸಗುತ್ತಿದ್ದ. ಆದ್ದರಿಂದ ಎಷ್ಟೋ ಬಾರಿ ಎಚ್ಚರಿಕೆ ನೀಡಿದ್ದೇವೆ. ಅದರೂ ಆತ ಕರ್ತವ್ಯ ಲೋಪ ಎಸಗುತ್ತಿದ್ದ ಕಾರಣ ಅಮಾನತ್ತು ಮಾಡಿದ್ದೆವು. ಸಸ್ಪೆಂಡ್ ರಿವೋಕ್ ಕೂಡ ಆಗುವ ಹಂತದಲ್ಲಿತ್ತು. ಇನ್ನು ವೈಯುಕ್ತಿಕ ಸಮಸ್ಯೆಯಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ," ಎಂದು ಕೆಎಸ್ಆರ್ಟಿಸಿ ಜಿಲ್ಲಾ ಅಧಿಕಾರಿ ಹೇಳಿದ್ದಾರೆ.
ಇನ್ನು ಕೆಎಸ್ಆರ್ಟಿಸಿ ಸಿಬ್ಬಂದಿ ಹೇಳುವ ಪ್ರಕಾರ, "ಮಂಗಳೂರಿನ ಕೆಎಸ್ಆರ್ಟಿಸಿ ಅಧಿಕಾರಿಗಳು ತಮ್ಮ ಕೆಳಗಿನ ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಹೇಳದ ಮಾತು ಕೇಳದಿದ್ದಲ್ಲಿ ಟಾರ್ಗೆಟ್ ಮಾಡುತ್ತಿದ್ದಾರೆ. ಸಾರಿಗೆ ಮುಷ್ಕರ ಸಂದರ್ಭದ ಹೋರಾಟದಲ್ಲಿ ಕೈ ಜೋಡಿಸಿದ ಬಸ್ ಚಾಲಕ ಮತ್ತು ನಿರ್ವಾಹಕರನ್ನು ಹೀನವಾಗಿ ನೋಡಿಕೊಳ್ಳಲಾಗುತ್ತಿದೆ. ಕ್ಷುಲ್ಲಕ ವಿಚಾರಕ್ಕಾಗಿ ಸಂಬಳ ತಡೆ ಹಿಡಿಯುವುದು, ಕೇಸ್ ಹಾಕುವುದು ಮಾಡುತ್ತಿದ್ದಾರೆ. ಇವರ ಜೊತೆ ಬದುಕುವುದಕ್ಕೆ ಸಾಧ್ಯವೇ ಇಲ್ಲ. ಆತ್ಮಹತ್ಯೆಯೇ ದಾರಿ," ಅಂತ ದೂರಿದ್ದಾರೆ.
ಇನ್ನು ಮೃತ ನಿಂಗಪ್ಪ ಕುಟುಂಬಸ್ಥರು ತಮಗೆ ನ್ಯಾಯ ಬೇಕು ಎಂದು ಆಗ್ರಹಿಸಿ ಮಂಗಳೂರಿನ ಉರ್ವ ಪೊಲೀಸ್ ಠಾಣೆ ಬಳಿ ಮೃತದೇಹದೊಂದಿಗೆ ಆಗಮಿಸಿ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ. ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಪೊಲೀಸರು ಈ ಬಗ್ಗೆ ಸರಿಯಾದ ತನಿಖೆ ನಡೆಸಿ ಸತ್ಯಾಸತ್ಯತೆ ಹೊರ ತೆಗೆಯುತ್ತಾರಾ ಎಂಬುವುದನ್ನು ಕಾದು ನೋಡಬೇಕಿದೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777.