ಮಂಗಳೂರು ಹೊರವಲಯದ ಅಡ್ಯಾರ ಬಳಿ ಬಸ್ ಪಲ್ಟಿ: 20 ಜನರಿಗೆ ಗಾಯ
ಮಂಗಳೂರು, ಆಗಸ್ಟ್ 01: ಟೈರ್ ಬ್ಲಾಸ್ಟ್ ಆದ ಪರಿಣಾಮ ಖಾಸಗಿ ಬಸ್ ರಸ್ತೆಯಲ್ಲಿ ಮಗುಚಿ ಬಿದ್ದು, ಹಲವಾರು ಪ್ರಯಾಣಿಕರು ಗಾಯಗೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ವಿಟ್ಲ - ಮಂಗಳೂರು ನಡುವೆ ಸಂಚರಿಸುವ ಆಸ್ಮಿತ ಹೆಸರಿನ ಬಸ್ ಮಂಗಳೂರು ಸಮೀಪ ಅಡ್ಯಾರ ಎಂಬಲ್ಲಿ ಪಲ್ಟಿಯಾಗಿದೆ.
ಬಸ್ ಪಲ್ಟಿಯಾಗುವ ಮೊದಲು ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿದೆ. ವಿಟ್ಲ ದಿಂದ ಮಂಗಳೂರು ಕಡೆಗೆ ಹೊರಟ ಬಸ್ ನ ಟೈರ್ ಅಡ್ಯಾರ್ ಬಳಿ ಬ್ಲಾಸ್ಟ್ ಆಗಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಡಿವೈಡರ್ ಮೇಲಿಂದ ಹಾದು, ಮಂಗಳೂರು - ಬಿ ಸಿ ರೋಡ್ ಕಡೆ ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ನಂತರ ರಸ್ತೆಯ ಮೇಲೆ ಮಗುಚಿ ಬಿದ್ದಿದೆ.
ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಪೊಲೀಸ್ ಜೀಪ್
ಈ ಘಟನೆಯಲ್ಲಿ ಬಸ್ ನಲ್ಲಿದ್ದ 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕಾರ್ ನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಖಾಸಗಿ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ ನಲ್ಲಿ ಗಾಯಗೊಂಡವರನ್ನು ಮಂಗಳೂರಿನ ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಟ್ಲ- ಮಂಗಳೂರು ನಡುವೆ ಸಂಚರಿಸುವ ಈ ಆಸ್ಮಿತ ಬಸ್ ನ ಎಲ್ಲಾ ಟೈರ್ ಗಳು ಸವೆದಿದ್ದು ಸಂಚಾರಕ್ಕೆ ಅಯೋಗ್ಯವಾಗಿದ್ದು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಬಸ್ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.