ಹೂತಿದ್ದ ಅಪರಿಚಿತ ಶವವನ್ನು ಎಳೆದು ತಿಂದ ನಾಯಿಗಳು
ಮಂಗಳೂರು ತಾಲೂಕಿನ ಮಂಚಿ ಗ್ರಾಮದ ಕಡಂತಬೆಟ್ಟುವಿನಲ್ಲಿ ಅಪರಿಚಿತ ಶವವೊಂದು ಆಡು ಮೇಯಿಸುತ್ತಿದ್ದವರಿಗೆ ಕಂಡಿದೆ. ಎಲ್ಲೋ ಕೊಲೆ ಮಾಡಿ ಇಲ್ಲಿ ತಂದು ಹೂತಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸುತ್ತಿದ್ದಾರೆ
ಮಂಗಳೂರು, ಜನವರಿ 16: ತಾಲೂಕಿನ ಮಂಚಿ ಗ್ರಾಮದ ಕಡಂತಬೆಟ್ಟು ಎಂಬಲ್ಲಿನ ಕೆಂಪು ಕಲ್ಲಿನ ಕೋರೆಯಲ್ಲಿ ಭಾನುವಾರ ರಾತ್ರಿ ಹೂತ ಸ್ಥಿತಿಯಲ್ಲಿ ಅಪರಿಚಿತ ಮೃತದೇಹವೊಂದು ಪತ್ತೆಯಾಗಿದೆ.
ಮೃತದೇಹ ಪತ್ತೆಯಾದ ಕಡಂತಬೆಟ್ಟು ಪ್ರದೇಶವು ಕೊಳ್ನಾಡು ಮತ್ತು ಇರಾ ಗ್ರಾಮದ ಗಡಿ ಭಾಗವಾಗಿದ್ದು, ಕಾಡು ಪ್ರದೇಶವಾಗಿದೆ. ಸಂಜೆ ಸ್ಥಳೀಯ ನಿವಾಸಿಯೊಬ್ಬರು ಗುಡ್ಡದಲ್ಲಿ ಆಡು ಮೇಯಿಸಲು ತೆರಳಿದ್ದ ಸಂದರ್ಭದಲ್ಲಿ ಇಲ್ಲಿನ ಕೆಂಪು ಕಲ್ಲಿನ ಕೋರೆಯಲ್ಲಿ ಹೂತಿದ್ದ ಮೃತದೇಹವನ್ನು ನಾಯಿಗಳು ಎಳೆದು ತಿನ್ನುತ್ತಿರುವುದನ್ನು ಅವರು ಗಮನಿಸಿದ್ದಾರೆ. ಆ ಕೂಡಲೇ ಈ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.[ಮಂಗಳೂರು: ನವಜಾತ ಕರುವಿಗೆ ಎರಡು ತಲೆ, 4 ಕಣ್ಣು!]
ಸುಮಾರು ಮೂರು ತಿಂಗಳ ಹಿಂದೆ ಮೃತ ದೇಹವನ್ನು ಹೂತಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೃತದೇಹದ ತಲೆಬುರುಡೆ ಮಾತ್ರ ಹೊರಕ್ಕೆ ಕಾಣುತ್ತಿತ್ತು. ರಾತ್ರಿ ಆಗಿದ್ದರಿಂದ ಮೃತದೇಹವನ್ನು ಮೇಲಕ್ಕೆತ್ತದೆ ಸೋಮವಾರ ಬೆಳಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಮೇಲೆಕ್ಕತ್ತಲಾಗಿದೆ.[ಉಪ್ಪಿನಂಗಡಿ : ಆಸ್ತಿ ವಿವಾದದಲ್ಲಿ ತಂದೆಯನ್ನೇ ಕೊಂದ ಮಗ]
ಈ ವಿಷಯ ತಿಳಿದು ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದರು. ಕೊಲೆ ಮಾಡಿ, ಆ ನಂತರ ಮೃತದೇಹವನ್ನು ಹೂತಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.