ಬೆಳ್ತಂಗಡಿಯಲ್ಲಿ ಮರಳುಗಾರಿಕೆಗೆ ನದಿಗಿಳಿದು ಕೊಚ್ಚಿ ಹೋದ ಯುವಕ
ಮಂಗಳೂರು, ಆಗಸ್ಟ್ 9: ಸತತ 4 ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದೆ. ಕಳೆದ ರಾತ್ರಿ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆಸುರಿದಿದೆ. ಇಂದು ಬೆಳಗ್ಗೆಯೂ ಗಾಳಿ, ಮಳೆ ಮುಂದುವರಿದ್ದು ನೇತ್ರಾವತಿ ನೀರಿನ ಮಟ್ಟ ಹೆಚ್ಚಿ ಅಪಾಯದ ಮಟ್ಟ ಮೀರಿ ಹರಿಯುತ್ತದೆ.
ನಿನ್ನೆ ಸಂಜೆ 7 ಮೀಟರ್ ಇದ್ದ ನೀರಿನ ಮಟ್ಟ ಇಂದು 8.7 ಮೀಟರ್ ತಲುಪಿದೆ. ಅಪಾಯದ ಮಟ್ಟ 8.5 ಆಗಿದ್ದು, ಈಗಾಗಲೇ ಬಂಟ್ವಾಳ ಸುತ್ತಮುತ್ತಲಿನ ಪರಿಸರಕ್ಕೆ ನೆರೆ ನೀರು ನುಗ್ಗಿದೆ. ನದಿ ತೀರದ ಕೆಲ ಮನೆ, ಅಂಗಡಿಗಳಿಗೂ ನೀರು ನುಗ್ಗಿದೆ.
ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ಸ್ನಾನ ಘಟ್ಟದಲ್ಲಿ ರಭಸವಾಗಿ ನದಿ ನೀರು ಹರಿಯುತ್ತಿರುವ ಕಾರಣ ಸ್ನಾನಘಟ್ಟಕ್ಕೆ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಈ ನಡುವೆ ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಮರಳುಗಾರಿಕೆಗೆ ಇಳಿದ ಯುವಕನೊಬ್ಬ ನದಿಯಲ್ಲಿ ಕೊಚ್ಚಿಹೋದ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಕಪಿಲಾ ನದಿಯಲ್ಲಿ ಈ ಘಟನೆ ನಡೆದಿದ್ದು ಮೃತಪಟ್ಟ ಯುವಕನನ್ನು ಭವಿತ್(23) ಎಂದು ಗುರುತಿಸಲಾಗಿದೆ. ನದಿಯಲ್ಲಿ ಪ್ರವಾಹ ಬಂದಿದ್ದರು ಲೆಕ್ಕಿಸದೇ ಯುವಕರ ತಂಡ ಅಕ್ರಮ ಮರಳುಗಾರಿಕೆಗೆ ಇಳಿದಿತ್ತು. ನದಿಗೆ ಇಳಿದು ಮರಳು ಸಂಗ್ರಹಿಸುತ್ತಿದ್ದ ಭುವಿತ್ ನೀರಿನ ಸೆಳೆತಕ್ಕೆ ಒಳಗಾಗಿ ನದಿಯಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದಾರೆ.












Click it and Unblock the Notifications