ಮಂಗಳೂರು; ಕೋಸ್ಟ್ ಗಾರ್ಡ್ ಕಾರ್ಯಾಚರಣೆ, 9 ಮಂದಿ ಪತ್ತೆ
ಮಂಗಳೂರು, ಮೇ 16; ತೌಕ್ತೆ ಚಂಡಮಾರುತದ ಅಬ್ಬರದ ನಡುವೆಯೂ ಭಾರತೀಯ ಕೋಸ್ಟ್ ಗಾರ್ಡ್ ಸಾಹಸಮಯ ಕಾರ್ಯಾಚರಣೆ ಮಾಡಿದೆ. ಅರಬ್ಬೀ ಸಮುದ್ರದಲ್ಲಿ ಚಂಡಮಾರುತಕ್ಕೆ ಸಿಕ್ಕಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಟಗ್ ನಲ್ಲಿದ್ದ 9 ಮಂದಿಯನ್ನು ಪತ್ತೆ ಹಚ್ಚಿದೆ.
ಎಂ. ಆರ್. ಪಿ. ಎಲ್ಗೆ ತೈಲ ಹೊತ್ತು ತರುವ ಹಡಗುಗಳಿಗೆ ಆಳ ಸಮುದ್ರದಲ್ಲಿ ಪೈಪ್ ಜೋಡಿಸುವ ಕೆಲಸದಲ್ಲಿ ನಿರತವಾಗಿದ್ದ ಎರಡು ಬೋಟ್ ಗಳು ಚಂಡಮಾರುತದ ಭೀಕರೆತೆಗೆ ತುತ್ತಾಗಿದ್ದು, ಒಟ್ಟು 17 ಜನರು ಸಂಕಷ್ಟಕ್ಕೆ ಸಿಲುಕಿದ್ದರು.
ಒಂದು ಬೋಟ್ ನಲ್ಲಿ 8 ಮಂದಿ ಮತ್ತು ಇನ್ನೊಂದು ಬೋಟ್ ನಲ್ಲಿ 9 ಮಂದಿ ಕಾರ್ಮಿಕರಿದ್ದರು. 8 ಮಂದಿ ಇದ್ದ ಅಲಾಯನ್ಸ್ ಎಂಬ ಹೆಸರಿನ ವಿಗ್ ಬೋಟ್ ಭಾರೀ ಗಾಳಿಗೆ ಮಗುಚಿ ಬಿದ್ದತ್ತು. ಇಬ್ಬರು ಸಮುದ್ರದಲ್ಲಿ ಈಜಿಕೊಂಡೇ ದಡ ಸೇರಿದ್ದಾರೆ. ಓರ್ವನ ಮೃತದೇಹ ಪತ್ತೆಯಾಗಿದ್ದು, 5 ಮಂದಿ ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ.

ತೈಲ ಶುದ್ಧೀಕರಣ ಘಟಕದ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬೋಟ್ ಗಳು ಇದಾಗಿದ್ದು, 9 ಮಂದಿ ಇದ್ದ ಮತ್ತೊಂದು ಬೋಟ್ ಸಮುದ್ರದಲ್ಲಿ ಸುರಕ್ಷಿತ ವಾಗಿ ಪತ್ತೆಯಾಗಿದೆ. ಕಾರ್ಮಿಕರೂ ಸುರಕ್ಷಿತ ವಾಗಿದ್ದು, ಕೋಸ್ಟ್ ಗಾರ್ಡ್ ಕಾರ್ಮಿಕರನ್ನು ಪತ್ತೆ ಹಚ್ಚಿದೆ.
ಶನಿವಾರ ರಾತ್ರಿ ಯೇ ಕೋಸ್ಟ್ ಗಾರ್ಡ್ ಪತ್ತೆ ಹಚ್ಚಿದರೂ ಭಾರೀ ಗಾಳಿ, ಮಳೆಯ ಕಾರಣದಿಂದ ರಕ್ಷಣಾ ಕಾರ್ಯಾಚರಣೆ ಗೆ ಅಡ್ಡಿಯುಂಟಾಗಿತ್ತು. ಭಾನುವಾರ ಬೆಳಗ್ಗಿನ ವೇಳೆಯಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸುವ ಬಗ್ಗೆ ಕೋಸ್ಟ್ ಗಾರ್ಡ್ ಸಿದ್ಧತೆ ಮಾಡಿಕೊಂಡಿದೆ..
ಬೋಟ್ ದುರಂತದಲ್ಲಿ ಮೊಮಿರುಲ್ಲಾ ಮುಲ್ಲಾ (34) ಮತ್ತು ಕರೀಮುಲ್ಲಾ ಶೇಖ್ (24)ಎಂಬ ಕಾರ್ಮಿಕರು ಸಮುದ್ರದ ಅಬ್ಬರದ ನಡುವೇ ಈಜಿಕೊಂಡೇ ದಡಸೇರಿದ್ದು, ಹೇಮಚಂದ್ರ ಎಂಬುವವರ ಮೃತದೇಹ ಉಡುಪಿಯ ಪಡುಬಿದ್ರೆಯಲ್ಲಿ ಪತ್ತೆಯಾಗಿದೆ.












Click it and Unblock the Notifications