ಕಾಸರಗೋಡಲ್ಲಿ 3 ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ, ಬಸ್ಸಿಗೆ ಕಲ್ಲು
ಕಾಸರಗೋಡು, ಅಕ್ಟೋಬರ್ 3: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕಾಸರಗೋಡಿಗೆ ಭೇಟಿ ನೀಡುವ ಕೆಲವೇ ಗಂಟೆಗಳ ಮೊದಲು ಮೂವರು ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸಲಾಗಿದೆ. ಕಾಸರಗೋಡು ಜಿಲ್ಲೆಯ ನೀಲೇಶ್ವರದಲ್ಲಿ ಈ ದಾಳಿ ನಡೆದಿದೆ. ಇನ್ನು ಇಂದು ಬೆಳಿಗ್ಗೆ ಯಾತ್ರೆಗೆ ಹೊರಟಿದ್ದ ಬಸ್ಸಿನ ಮೇಲೆ ಇಲ್ಲೇ ಕಲ್ಲು ತೂರಾಟ ನಡೆದಿದೆ.
ಈ ದಾಳಿಯನ್ನು ಸಿಪಿಐ(ಎಂ) ಕಾರ್ಯಕರ್ತರು ನಡೆಸಿರಬಹುದು ಎಂದು ಅನುಮಾನಿಸಲಾಗಿದೆ. ಇಂದು ಕಣ್ಣೂರಿನಿಂದ 11 ಗಂಟೆಗೆ ಬಿಜೆಪಿಯ 'ಜನರಕ್ಷಾ ಯಾತ್ರೆ' ಆರಂಭವಾಗಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ.

ಪಾದಯಾತ್ರೆಗೆ ಚಾಲನೆ ನೀಡಲು ಇಂದು ಮುಂಜಾನೆ 1.30 ಗಂಟೆಗೆ ಅಮಿತ್ ಶಾ ಮಂಗಳೂರಿಗೆ ಆಗಮಿಸಿದ್ದರು. ನಂತರ ಅವರು ಕಾಸರಗೋಡು ಮಾರ್ಗವಾಗಿ ಕಣ್ಣೂರಿಗೆ ತೆರಳಿದ್ದರು. ಅಮಿತ್ ಶಾ ಕಾಸರಗೋಡಿಗೆ ಭೇಟಿ ನೀಡುವ ಕೆಲವೇ ಗಂಟೆಗಳ ಮೊದಲು ಅಂದರೆ ಸೋಮವಾರ ಸಂಜೆ ಈ ದಾಳಿ ನಡೆದಿದೆ.
ಜನರಕ್ಷಾ ಪಾದಯಾತ್ರೆಗಾಗಿ ಬಿಜೆಪಿ ಕಾರ್ಯಕರ್ತರು ಸೋಮವಾರ ರಾತ್ರಿ 9.30ರ ಸುಮಾರಿಗೆ ಹೆದ್ದಾರಿಯನ್ನು ಅಲಂಕರಿಸುತ್ತಿದ್ದರು. ಈ ಸಂದರ್ಭ ದಾಳಿ ನಡೆದಿದ್ದು, ದಾಳಿಯಲ್ಲಿ ಗಾಯಗೊಂಡಿರುವ ಬಿಜೆಪಿ ಕಾರ್ಯಕರ್ತರು ನೀಲೇಶ್ವರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಕಾಸರಗೋಡು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್, ಸುಮಾರು 20ರಷ್ಟು ಸಿಪಿಐಎಂ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ನೀಲೇಶ್ವರಂ ಮಾರುಕಟ್ಟೆಯಲ್ಲಿ ದಾಳಿ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ದಾಳಿ ವೇಳೆ ಫ್ಲೆಕ್ಸ್, ಟ್ಯೂಬ್ ಲೈಟ್, ಮತ್ತು ಬೈಕ್ ಗೆ ಕೂಡಾ ಹಾನಿಯಾಗಿದೆ ಎಂದು ಅವರು ಹೇಳಿದ್ದಾರೆ.
ಕೇರಳ ರಾಜ್ಯದಲ್ಲಿ ಆರ್.ಎಸ್.ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆ ಹಾಗೂ ಹತ್ಯೆ ವಿರೋಧಿಸಿ ಬಿಜೆಪಿ 'ಜನರಕ್ಷಾ ಯಾತ್ರೆ' ನಡೆಸುತ್ತಿದ್ದು ಈ ಯಾತ್ರೆ ವೇಳೆಯೇ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆದಿದೆ.
ಜನರಕ್ಷಾ ಯಾತ್ರೆಗೆ ತೆರಳತ್ತಿದ್ದ ಬಸ್ಸಿನ ಮೇಲೆ ಕಲ್ಲು ತೂರಾಟ
ಇನ್ನು ಬಿಜೆಪಿ ಅಯೋಜಿಸಿರುವ ಜನರಕ್ಷಾ ಯಾತ್ರೆ ಯಲ್ಲಿ ಭಾಗವಹಿಸಲು ಬಿಜೆಪಿ ಕಾರ್ಯಕರ್ತರು ಸಂಚರಿಸುತ್ತಿದ್ದ ಬಸ್ಸಿನ ಮೇಲೆ ಕೇರಳದ ನೀಲೇಶ್ವರದಲ್ಲಿ ಕಲ್ಲು ತೂರಾಟ ನಡೆಸಲಾಗಿದೆ.
ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಹಲವರಿಗೆ ಸಣ್ಣಪುಟ್ಟ ಗಾಯಳಾಗಿದ್ದು, ಕಲ್ಲೆಸೆತ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಇವರೆಲ್ಲರೂ ಅಮಿತ್ ಷಾ ರವರ ಭಾಗವಹಿಸಿದ್ದ ಜನರಕ್ಷಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರೆಂದು ತಿಳಿದು ಬಂದಿದೆ.
ಇದೇ ನೀಲೇಶ್ವರದಲ್ಲಿ ನಿನ್ನೆ ರಾತ್ರಿ ಮೂವರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿತ್ತು.












Click it and Unblock the Notifications