ಜನಸಂಘದ ಹಿರಿಯ ನಾಯಕ, ಬಿಜೆಪಿಯ ಭೀಷ್ಮ ಉರಿಮಜಲು ರಾಮ ಭಟ್ ನಿಧನ
ಮಂಗಳೂರು, ಡಿಸೆಂಬರ್ 6: ಜನಸಂಘದ ಹಿರಿಯ ನಾಯಕ, ಮಾಜಿ ಶಾಸಕರಾದ ಉರಿಮಜಲು ರಾಮ ಭಟ್ ಅವರು ಸೋಮವಾರ ನಿಧನರಾಗಿದ್ದಾರೆ.
'ಬಿಜೆಪಿಯ ಭೀಷ್ಮ' ಎಂದು ಗುರುತಿಸಿಕೊಂಡಿದ್ದ ರಾಮ್ ಭಟ್ ಅವರು ಹಲವು ದಿನಗಳಿಂದ ವಯೋಸಹಜ ಖಾಯಿಲೆಗಳಿಂದಾಗಿ ಬಳಲುತ್ತಿದ್ದರು. ಕೊಂಬೆಟ್ಟಿನಲ್ಲಿರುವ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಪ್ರೌಢಶಿಕ್ಷಣ ಸಂದರ್ಭದಲ್ಲಿಯೇ ಸ್ವಯಂ ಸೇವಕ ಸಂಘದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪುತ್ತೂರಿನಲ್ಲಿ ಹಿಂದುತ್ವ ಬೆಳೆಸುವಲ್ಲಿ ರಾಮ್ಭಟ್ ವಿಶೇಷ ಪಾತ್ರ ವಹಿಸಿದ್ದಾರೆ. 1978 ಹಾಗೂ 1983ರಲ್ಲಿ ಪುತ್ತೂರು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ರಾಜ್ಯದಲ್ಲಿದ್ದ ಇಬ್ಬರು ಬಿಜೆಪಿ ಶಾಸಕರು ಇದ್ದಾಗ ಅದರಲ್ಲಿ ಪುತ್ತೂರಿನಿಂದ ಜಯಗಳಿಸಿದ್ದ ರಾಮ್ ಭಟ್ ಸಹ ಒಬ್ಬರಾಗಿದ್ದರು.

ರಾಜ್ಯ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ನಾಯಕರಾಗಿದ್ದರು. ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಹಾಗೂ ಇತರ ನಾಯಕರೊಂದಿಗೆ ನಿಕಟ ಸಂಬಂಧ ಹೊಂದಿದ್ದ ರಾಮ್ ಭಟ್ ಅವರು ಆನಾರೋಗ್ಯಕ್ಕೆ ಒಳಗಾಗಿದ್ದರಿಂದ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು.
ಸ್ವಾಭಿಮಾನಿ ವೇದಿಕೆ:
ಕೆಲ ಸಮಯದ ಕಾಲ ರಾಜ್ಯ ಬಿಜೆಪಿ ನಾಯಕರೊಂದಿಗೆ ಮುನಿಸಿಕೊಂಡು ಸ್ವಾಭಿಮಾನಿ ವೇದಿಕೆ ಆರಂಭಿಸಿದ್ದ ರಾಮ್ ಭಟ್ ಸ್ವಾಭಿಮಾನಿ ವೇದಿಕೆ ಕಟ್ಟಿಕೊಂಡಿದ್ದರು. ಅಲ್ಲದೆ, ಬಿಜೆಪಿ ವಿರುದ್ಧವೇ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರನ್ನು ಕಣಕ್ಕಿಳಿಸಿದ್ದರು. ಕೇಂದ್ರದಲ್ಲಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ಬಳಿಕ ಮತ್ತೆ ಬಿಜೆಪಿಗೆ ಮರಳಿದ್ದರು.
ಸಂತಾಪ:
ರಾಮ್ ಭಟ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಬಿಜೆಪಿ ನಾಯಕರು ಕಂಬನಿ ಮಿಡಿದಿದ್ದಾರೆ.
'ಜನಸಂಘದ ಮೂಲಕ ನಾಯಕರಾದ ಹಾಗೂ ಮಾಜಿ ಶಾಸಕರಾದ ಉರಿಮಜಲು ರಾಮ ಭಟ್ ಅವರು ವಿಧಿವಶರಾದ ಸುದ್ದಿ ತಿಳಿದು ನನಗೆ ಅತೀವ ದುಃಖವಾಗಿದೆ. ರಾಷ್ಟ್ರ ನಿರ್ಮಾಣದ ಕಾರ್ಯಕ್ಕೆ ತಮ್ಮ ಸರ್ವಸ್ವವನ್ನು ಧಾರೆ ಎರೆದಿದ್ದ ಅವರ ಜೀವನ ಅನುಕರಣೀಯ' ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.












Click it and Unblock the Notifications