ಅಕ್ಟೋಬರ್ 4ರ ಅಮಿತ್ ಶಾ ಮಂಗಳೂರು ಭೇಟಿ ಕಾರ್ಯಕ್ರಮ ರದ್ದು
ಮಂಗಳೂರು, ಅಕ್ಟೋಬರ್ 3: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಕ್ಟೋಬರ್ 4ರ ಮಂಗಳೂರು ಸಭೆ ರದ್ದಾಗಿದೆ. ದೆಹಲಿಯಿಂದ ದಿಢೀರ್ ಬುಲಾವ್ ಬಂದ ಹಿನ್ನೆಲೆಯಲ್ಲಿ ಮಂಗಳವಾರ ನವದೆಹಲಿಗೆ ಅಮಿತ್ ಶಾ ವಾಪಾಸಾಗಲಿದ್ದಾರೆ.
ದೆಹಲಿಯಲ್ಲಿ ದಿಢೀರ್ ವಿಶೇಷ ಸಭೆ ಕರೆದಿರುವ ಹಿನ್ನೆಲೆಯಲ್ಲಿ ಅಮಿತ್ ಶಾ ಕೇರಳದಿಂದ ಮಂಗಳವಾರ ಸಂಜೆ ಮಂಗಳೂರಿಗೆ ಹಿಂದಿರುಗಲಿದ್ದಾರೆ. ಇಲ್ಲಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಲಿದ್ದಾರೆ.

ಕೇರಳ ಪ್ರವಾಸ ಮುಗಿಸಿ ಬುಧವಾರ ಮಂಗಳೂರಿನಲ್ಲಿ ಇಡೀ ದಿನ ಕಳೆಯಬೇಕಿದ್ದ ಅಮಿತ್ ಶಾ ಅವರು ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಬುಲಾವ್ ಬಂದ ಹಿನ್ನಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದಿಂದ ಮಂಗಳವಾರ ರಾತ್ರಿಯೇ ದೆಹಲಿಗೆ ವಾಪಾಸಾಗಲಿದ್ದಾರೆ.
ಕೊನೆ ಕ್ಷಣದಲ್ಲಿ ಅಮಿತ್ ಶಾ ಕಾರ್ಯಕ್ರಮ ರದ್ದುಗೊಳಿಸಿದ್ದು ಬಿಜೆಪಿ ಕಾರ್ಯಕರ್ತರಲ್ಲಿ ಭಾರೀ ನಿರಾಸೆ ಮೂಡಿಸಿದೆ. ಕೇರಳದಲ್ಲಿ ಬಿಜೆಪಿಯ ಜನರಕ್ಷಾ ಯಾತ್ರೆ ಮುಂದುವರಿದಿದ್ದು, ಬುಧವಾರ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಮಂಗಳೂರಿಗೆ ಆಗಮಿಸುವ ಯೋಗಿ ಆದಿತ್ಯನಾಥ್ ಕೇರಳಕ್ಕೆ ತೆರಳಲಿದ್ದಾರೆ.












Click it and Unblock the Notifications